ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಈಚೆಗೆ ಲಾವೋಸ್ನ ವಿಯೆಂಟಿಯಾನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಸುಚೇತ್ ಧರೆಣ್ಣವರ ಎಂಬ ಬಾಲಕ ತೃತೀಯ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾನೆ.ತಾಲೂಕಿನ ರಾಮಾಪುರ ಗ್ರಾಮದ 11 ವರ್ಷದ ಸುಚೇತ್ ಧರೆಣ್ಣವರ ಅಂತಾರಾಷ್ಟ್ರೀಯ ಟೆಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದ ಬಾಲಕ. ತಾಲೂಕಿನ ಅದರಗುಂಚಿಯಲ್ಲಿರುವ ಸಿಐಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಈ ಸ್ಪರ್ಧೆಗೂ ಪೂರ್ವ ಸುಚೇತ್ ಹಲವು ಪಂದ್ಯಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದಾನೆ. 2024ರಲ್ಲಿ ಬೆಂಗಳೂರು, ಬೆಳಗಾವಿ, ಹೊಸಪೇಟೆ, ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಪ್ರಥಮ ಹಾಗೂ ಚಿಕ್ಕಮಗಳೂರಿನಲ್ಲಿ ನಡೆದ ಪಂದ್ಯದಲ್ಲಿ ರನ್ನರ್ಅಪ್ ಪ್ರಶಸ್ತಿ ಪಡೆದಿದ್ದಾನೆ. ವಿಜಯ ಕರಿಗಾರ ಮುಖ್ಯ ತರಬೇತುದಾರರಾಗಿದ್ದು, ಪ್ರಸ್ತುತ ಅಂತಾರಾಷ್ಟ್ರೀಯ ತರಬೇತಿದಾರ Ti long ಅವರು ಸುಚೇತನಿಗೆ ತರಬೇತಿ ನೀಡುತ್ತಿದ್ದಾರೆ.ಸುಚೇತನ ಸಹೋದರಿ ಸುಷ್ಟಿತಾ ಸಹ ಟೇಬಲ್ ಟೆನಿಸ್ ಆಟಗಾರ್ತಿ. ಪುತ್ರನ ಸಾಧನೆಗೆ ತಂದೆ-ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಒಂದೇ ವರ್ಷದಲ್ಲಿ ಎರಡು ಕಂಚು: ಆಗಸ್ಟ್ 6 ರಿಂದ 9ರ ವರೆಗೆ ಲಾವೋಸ್ನ ವಿಯೆಂಟಿಯಾನ್ನಲ್ಲಿ ನಡೆದ ಅಂತರಾಷ್ಟ್ರೀಯ WTT YOUTH CONTENDER VIENTIANE- 2025ರಲ್ಲಿ 11 ವರ್ಷದ ಒಳಗಿನ ಬಾಲಕರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯದ ಲ್ಲಿ ಸುಚೇತ್ ಧರೆಣ್ಣವರ ಥೈಲ್ಯಾಂಡ್ನ ತಮೆ ರತನವಾಚಿರಿನ (Thame RATANAWACHIRIN) ನಡೆದ ಪಂದ್ಯದಲ್ಲಿ ಸುಚೇತ್ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡನು.ಕಳೆದ ಫೆಬ್ರುವರಿ 26ರಿಂದ ಮಾರ್ಚ್ 1ರ ವರೆಗೆ ಗುಜರಾತ್ನಲ್ಲಿ ಆಯೋಜಿಸಿದ್ದ ವರ್ಲ್ಡ್ ಟೇಬಲ್ ಟೆನಿಸ್ ಕಂಟೆಂಡರ್ ಸ್ಪರ್ಧೆಯ 11 ವಯೋಮಿತಿ ಬಾಲಕರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಶ್ರೀಲಂಕಾದ ತಾವಿ ಸಮರವೀರ ವಿರುದ್ಧ ಸೆಣಸಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದನು. ಹೀಗೆ ಒಂದೇ ವರ್ಷದಲ್ಲಿ ಎರಡು ಕಂಚಿನ ಪದಕ ಪಡೆದು ಸಾಧನೆ ತೋರಿದ್ದಾನೆ.
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದಿರುವುದು ಖುಷಿ ತಂದಿದೆ. ಮುಂದೆ ಬ್ಯಾಂಕಾಕ್ನಲ್ಲಿ ಆಯೋಜಿಸಿರುವ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದೇನೆ ಎಂದು ಸುಚೇತ್ ಧರೆಣ್ಣವರ ಹೇಳಿದರು.