ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರತಿ ನಿತ್ಯ ಮೈಸೂರಿನಿಂದ ಕೆ.ಆರ್.ಪೇಟೆ, ಕೆ.ಆರ್.ಪೇಟೆಯಿಂದ-ಮೈಸೂರಿಗೆ ಹಾಗೂ ಮೈಸೂರು-ಪಂಪ್ ಹೌಸ್, ಕೆಆರ್ಎಸ್ ಮಾರ್ಗವಾಗಿ ಹೋಗುವ ಸಾರಿಗೆ ಬಸ್ ಚಾಲಕರು ಬಸ್ ಖಾಲಿ ಇದ್ದರೂ ಬೆಳಗೊಳ ಗ್ರಾಮದಲ್ಲಿನ ನಿಗದಿತ ಸ್ಥಳದಲ್ಲಿ ಬಸ್ ನಿಲುಗಡೆ ಮಾಡದೆ, ಜೊತೆಗೆ ಪ್ರಯಾಣಿಕರು ಕೈ ತೋರಿದರೂ ವಾಹನ ನಿಲ್ಲಿಸದೆ ಹೋಗುತ್ತಿದ್ದರು.
ಇದರಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಬಸ್ ಅಡ್ಡಗಟ್ಟಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು.ಗುರುವಾರ ಬೆಳಗ್ಗೆ 6.40ಕ್ಕೆ ಬೆಳಗೊಳ ಬಸ್ ನಿಲ್ದಾಣದ ಬಳಿ ಮೈಸೂರಿಗೆ ತೆರಳಲು ಕಾಯ್ದು ನಿಂತಿದ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರನ್ನು ಕೆಆರ್ಪೇಟೆ- ಮೈಸೂರು ಮಾರ್ಗವಾಗಿ ಬಂದ ಸಾರಿಗೆ ಬಸ್ ಚಾಲಕ ಕೈ ಅಡ್ಡಗಟ್ಟಿದರೂ ಬಸ್ ನಿಲ್ಲಿಸದೆ ಹೋಗಿದ್ದಾನೆ. ಈ ವೇಳೆ ಸ್ಥಳೀಯರು ಸ್ಕೂಟರ್ ಮೂಲಕ ತೆರಳಿ ಬಸ್ ಅಡ್ಡಗಟ್ಟಿ ನಿಗದಿತ ಸ್ಥಳ ನಿಲ್ಲಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಸ್ಥಳಕ್ಕೆ ಕೆಆರ್ಎಸ್ ಪೊಲೀಸರು ಆಗಮಿಸಿ ಚಾಲಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಸ್ ಚಾಲಕರ ವಿರುದ್ಧ ನಿಯಂತ್ರಣಾಧಿಕಾರಿ ಕುಮಾರ್ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿಯಂತ್ರಣಾಧಿಕಾರಿ ಕುಮಾರ್ ದೂರವಾಣಿ ಮೂಲಕ ಮಾತನಾಡಿ, ಗ್ರಾಮಸ್ಥರು ಬಸ್ ನಂಬರ್ ಸಹಿತಿ ದೂರು ನೀಡಿ ಉದ್ದಟತನ ತೋರಿರುವ ಚಾಲಕರ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಜೊತೆಗೆ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಗ್ರಾಮಸ್ಥರು ಹಾಗೂ ಪೊಲೀಸರಿಗೆ ಸಮಾಧಾನಪಡಿಸಿದರು.