ಕನ್ನಡಪ್ರಭ ವಾರ್ತೆ ಪಾಂಡವಪುರ
ದಲಿತ ಹೋರಾಟಗಾರ್ತಿ ಜಯಲಕ್ಷ್ಮೀ ನೇತೃತ್ವದಲ್ಲಿ ಗ್ರಾಮದ ಸರ್ವಣೀಯರು, ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಸಣಬ ಗ್ರಾಮದ ದಲಿತ ಯುವಕ ಮಂಜುನಾಥ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಸುಳ್ಳು ಜಾತಿ ನಿಂದನೆ ಪ್ರಕರಣವನ್ನು ಪೊಲೀಸರು ಕೈಬಿಡುವಂತೆ ಒತ್ತಾಯಿಸಿದರು.
ಗ್ರಾಮದಲ್ಲಿ ಕಬ್ಬು ಕಟಾವು ಮಾಡಲು ಹೊರಗಡೆಯಿಂದ ಬಂದಿರುವ ಕಾರ್ಮಿಕರು ಗ್ರಾಮದಲ್ಲಿ ಮೋಟರ್ವೊಂದನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಶುಕ್ರವಾರ ರಾತ್ರಿ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸುತ್ತಿದ್ದ ಸ್ಥಳಕ್ಕೆ ಆಟೋ ಮೂಲಕ ಆಗಮಿಸಿದ ದಲಿತ ಯುವಕ ಮಂಜುನಾಥ್ ಏಕಾಏಕಿ ಗ್ರಾಮದ ಯಮಾನರು, ಯುವಕರಿಗೆ ಬಾಯಿಗೆ ಬಂದಂತೆ ಅಶ್ಲೀಲ ಪದಗಳಿಂದ ಬೈಯಲು ಆರಂಭಿಸಿದ್ದಾನೆ.ಈ ವೇಳೆ ಗ್ರಾಮದ ಯುವಕರು ಹಾಗೂ ಮಂಜುನಾಥ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬಳಿಕ ಗ್ರಾಮದ ಯಜಮಾನರು ಇಬ್ಬರನ್ನು ಸಮಾಧಾನ ಮಾಡಿ ಕಳುಸಿದ್ದಾರೆ. ಆದರೆ, ದಲಿತ ಯುವಕ ಮಂಜುನಾಥ್ ಪೊಲೀಸ್ ಠಾಣೆಗೆ ತೆರಳಿ ಗ್ರಾಮದ ಯಜಮಾನರು, ಕೆಲವು ಯುವಕರ ಮೇಲೆ ಜಾತಿ ನಿಂದನೆ ಪ್ರಕರಣದಡಿ ಸುಳ್ಳು ದೂರು ನೀಡಿದ್ದಾರೆ. ಪೊಲೀಸರು ಸಹ ಪರಿಶೀಲಿಸದೆ ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.
ಬಳಿಕ ಸರ್ಕಲ್ ಇನ್ಸ್ಪೆಕ್ಟರ್ ವಿವೇಕಾನಂದ ಅವರು ಡಿವೈಎಸ್ಪಿ ಜತೆ ಚರ್ಚಿಸಿ ಬಳಿಕ ಸೋಮವಾರ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಅಲ್ಲಿವರೆಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಡಿವೈಎಸ್ಪಿ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸದಿದ್ದರೆ ಮಂಗಳವಾರ ಇಡೀ ಗ್ರಾಮವೇ ಪೊಲೀಸ್ ಠಾಣೆಗೆ ಬಂದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಬಳಿಕ ಪ್ರತಿಭಟನೆ ವಾಪಸ್ಸುಪಡೆದರು.