ಕನ್ನಡಪ್ರಭ ವಾರ್ತೆ ಮಡಿಕೇರಿ
ಕತ್ತಲೆಕಾಡು ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ಜರುಗಿದ 19ನೇ ವರ್ಷದ ಗೌರಿ ಗಣೇಶೋತ್ಸವ ಹಲವು ವಿಶೇಷತೆಗಳ ಮೂಲಕ ಗಮನ ಸೆಳೆಯಿತು.ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಿದ ಟ್ರಸ್ಟ್, ಮೂರು ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆ.27ರಂದು ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು. ಜೋರು ಮಳೆಯ ನಡುವೆಯೂ ಗ್ರಾಮಸ್ಥರು ಉತ್ಸಾಹದಿಂದ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅದೇ ದಿನ ಸಂಜೆ ಸಂಗೀತ ರಜಮಂಜರಿ ಹಮ್ಮಿಕೊಳ್ಳಲಾಗಿತ್ತು. ಸೋಮವಾರಪೇಟೆಯ ವಿಶ್ವರೂಪ ವಾದ್ಯಗೋಷ್ಠಿ ಕಲಾತಂಡದ ಪುರುಷೋತ್ತಮ್, ಕವಿತಾ, ಸುಭಾಷ್, ಜನಾರ್ದನ್ ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಸ್ಥಳೀಯ ಪ್ರತಿಭೆಗಳು ಕೂಡಾ ಹಾಡು ಹಾಡಿ ಮೆಚ್ಚುಗೆ ಗಳಿಸಿದರು.
28ರಂದು ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು. ಬಳಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 29ರಂದು ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು. ವಾರ್ಷಿಕ ಹುಂಡಿ ಹಣ ಸಂಗ್ರಹದಲ್ಲಿ ವಿಜೇತರಾದ ಉದಯ್ ಜೇನುಕೊಲ್ಲಿ, ಬ್ರಿಜೇಶ್ ರೈ, ಲೋಕೇಶ್ ರೈ, ಪುಷ್ಪ ಜನಾರ್ದನ್ ಅವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿನಾಯಕನ ಮೂರ್ತಿಯ ವೈಭವೋಪೇತ ಮೆರವಣಿಗೆ ಗ್ರಾಮದ ಮುಖ್ಯಬೀದಿಯಲ್ಲಿ ಸಾಗಿತು. ಮಳೆಯನ್ನೂ ಲೆಕ್ಕಿಸದೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ವಾದ್ಯಗೋಷ್ಠಿಯೊಂದಿಗೆ ಸಾಗಿದ ಮೆರವಣಿಗೆಯಲ್ಲಿ ವಿನಾಯಕ ಸೇವಾ ಸಮಿತಿಯ ವಿದ್ಯಾರ್ಥಿ ಘಟಕದ ಸದಸ್ಯರು ಕುಣಿತ ಭಜನೆಯ ಮೂಲಕ ಗಮನ ಸೆಳೆದರು. ಮಂಗಳೂರಿನ ಬೊಂಬೆ ಕುಣಿತ ಕಲಾವಿದರ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.ಸ್ಪರ್ಧೆ ವಿಜೇತರ ವಿವರ:ಮಕ್ಕಳ ವಿಭಾಗದಲ್ಲಿ ಬಕೆಟ್ಗೆ ಬಾಲ್ ಹಾಕುವ ಸ್ಪರ್ಧೆ - ಅದ್ವಿಕ ರೈ(ಪ್ರ), ಪೂರ್ವಿಕ(ದ್ವಿ), ತೇಜಸ್ವಿ ರೈ(ತೃ). ಪಿರಮಿಡ್ ರಚನೆ : ಶ್ರಾವ್ಯ(ಪ್ರ), ಕೌಶಿಕ(ದ್ವಿ), ತರುಣ್(ತೃ). ಬಾಟಲ್ಗೆ ಚೆಂಡು ಎಸೆತ : ಪ್ರಜಿತ್(ಪ್ರ), ದಿಲನ್(ದ್ವಿ), ಕಿರಣ್(ತೃ). ಮಹಿಳೆಯರ ವಿಭಾಗದಲ್ಲಿ ಸಂಗೀತ ಕುರ್ಚಿ : ವನಿತ(ಪ್ರ), ಶೋಭಾ(ದ್ವಿ), ಕಲ್ಯಾಣಿ(ತೃ). ಬಾಟಲ್ಗೆ ಚೆಂಡು ಎಸೆತ : ಜಯಶ್ರೀ(ಪ್ರ), ಪೂರ್ಣಿಮ(ದ್ವಿ), ಕಲ್ಯಾಣಿ(ತೃ). ಪುರುಷರ ವಿಭಾಗದಲ್ಲಿ ಬಾಟಲ್ಗೆ ಎಸೆತ : ರಾಜೇಶ್ ಪೊನ್ನು(ಪ್ರ), ನವೀನ್ ಆಚಾರ್ಯ(ದ್ವಿ), ದಯಾನಂದ ಪೂಜಾರಿ(ತೃ) ಬಹುಮಾನ ಪಡೆದರು.