ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ

KannadaprabhaNewsNetwork | Updated : Dec 28 2023, 01:46 AM IST

ಸಾರಾಂಶ

ಸರ್ವೇ ನಂ.೩೭೦ ಹಾಗೂ ೩೭೧ನೇ ಭೂಮಿ ವಿವಾದ ಸೂಕ್ಷ್ಮವಾಗಿದೆ.ಯಥಾಸ್ಥಿತಿ ಕಾಪಾಡಬೇಕು. ಕನಕಗಿರಿ ಸಾಮರಸ್ಯಕ್ಕೆ ಹೆಸರಾಗಿದ್ದು, ಎಲ್ಲರೂ ಭಾತೃತ್ವದಿಂದ ಜೀವನ ನಡೆಸಬೇಕು.ಉದ್ದಟತನ ನಡೆಸುವವರ ಮೇಲೆ ಇಲಾಖೆ ನಿಗಾ ವಹಿಸಿದೆ

ಕನಕಗಿರಿ: ಪಟ್ಟಣದ ಸರ್ವೇ ನಂ. ೩೭೦ ಹಾಗೂ ೩೭೧ರ ಭೂಮಿ ವಿವಾದಿತ ಸ್ಥಳವಾಗಿದ್ದು, ಎರಡು ಕೋಮಿನವರು ನಿಯಮ ಉಲ್ಲಂಘಿಸಬಾರದು, ಶಾಂತಿ ಕಾಪಾಡಬೇಕು ಎಂದು ತಹಸೀಲ್ದಾರ್‌ ವಿಶ್ವನಾಥ ಮುರುಡಿ ಸೂಚಿಸಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎರಡು ಕೋಮುಗಳ ಶಾಂತಿ ಸಭೆಯಲ್ಲಿ ಮಾತನಾಡಿ, ಈ ಮೊದಲಿನಿಂದಲೂ ಭೂಮಿಯ ವಿಚಾರವಾಗಿ ವಾದ-ವಿವಾದ ನಡೆಯುತ್ತಿದ್ದು, ಯಾರೂ ನಿಯಮ ಉಲ್ಲಂಘಿಸಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದ್ದು ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸದರಿ ಭೂಮಿಯಲ್ಲಿ ಶಿಲಾಸ್ಮಾರಕವಿದ್ದು, ಇದರ ಮುಂಭಾಗದಲ್ಲಿ ಮೊದಲಿಂದಲೂ ಶವ ಹೂಳುತ್ತಿದ್ದಾರೆ. ಈಗಲೂ ಸ್ಮಾರಕದ ಮುಂದೆ ಶವ ಹೂಳಲು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶವ ಹೂಳಲು ತಗ್ಗು ಅಗೆದಿರುವುದು ಕಂಡು ಬಂದಿದೆ.ಇಲ್ಲಿ ಯಥಾಸ್ಥಿತಿ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ಯಾರೂ ಉದ್ವೇಗಕ್ಕೆ ಒಳಗಾಗುವುದಾಗಲಿ, ಅಶಾಂತಿ ಸೃಷ್ಟಿಸುವುದಾಗಲಿ ಮಾಡಿದರೆ ಅಂತವರ ಮೇಲೆ ಮುಲಾಜಿ ಇಲ್ಲದೇ ಕ್ರಮ ಕೈಗೊಳ್ಳಲಾಗುವುದು. ಎರಡು ಕಡೆಯವರು ಭೂಮಿಗೆ ಸಂಬಂಧಿಸಿದ ನಕಲು ದಾಖಲಾತಿ ನೀಡುವಂತೆ ಸೂಚಿಸಿದರು.

ಪ್ರಮುಖರಾದ ಗಂಗಾಧರಸ್ವಾಮಿ, ವಿರೇಶ ಸಮಗಂಡಿ, ಶರಣಪ್ಪ ಭತ್ತದ, ಕೆ.ಎಚ್ ಕುಲಕರ್ಣಿ, ಅಯ್ಯನಗೌಡ ಅಳ್ಳಳ್ಳಿ, ಹಜರತ್‌ಹುಸೇನ ಮುಜಾವರ, ಮದರಸಾಬ ಸಂತ್ರಾಸ್, ಗೌಸಸಾಬ ಗುರಿಕಾರ, ನಿರುಪಾದಿ ಗೊಲ್ಲರ, ಪರಸಪ್ಪ ಚಿಟಿಗಿ, ಹನುಮೇಶ ಡಿಶ್, ಮಾರುತಿ ಅಂಬಿರ, ವಿನಯ ಮರಾಠಿ ಸೇರಿದಂತೆ ಇತರರು ಇದ್ದರು.

ಸರ್ವೇ ನಂ.೩೭೦ ಹಾಗೂ ೩೭೧ನೇ ಭೂಮಿ ವಿವಾದ ಸೂಕ್ಷ್ಮವಾಗಿದೆ.ಯಥಾಸ್ಥಿತಿ ಕಾಪಾಡಬೇಕು. ಕನಕಗಿರಿ ಸಾಮರಸ್ಯಕ್ಕೆ ಹೆಸರಾಗಿದ್ದು, ಎಲ್ಲರೂ ಭಾತೃತ್ವದಿಂದ ಜೀವನ ನಡೆಸಬೇಕು.ಉದ್ದಟತನ ನಡೆಸುವವರ ಮೇಲೆ ಇಲಾಖೆ ನಿಗಾ ವಹಿಸಿದೆ ಎಂದು ಡಿವೈಎಸ್‌ಪಿ ಪ್ರಕಾಶ ಮಾಳಿ ತಿಳಿಸಿದ್ದಾರೆ.

Share this article