ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ 2ನೇ ವರ್ಷದ ವಿಪ್ರ ಕ್ರೀಡಾಕೂಟದ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಕರಡ ಬುಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು, ಮಡಿಕೇರಿ ವಿಪ್ರಾಸ್ ತಂಡವು ರನ್ನರ್ ಪ್ರಶಸ್ತಿ ಪಡೆದುಕೊಂಡಿತು.
ಹಗ್ಗಜಗ್ಗಾಟ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ವೀರಾಜಪೇಟೆ ಈಗಲ್ಸ್ ತಂಡ ವಿಜೇತರಾಗಿದ್ದು, ಮಹಿಳೆಯರ ವಿಭಾಗದಲ್ಲಿ ಪೊನ್ನಂಪೇಟೆ ಶ್ರೀ ದೇವಿ ತಂಡ ಜಯ ಸಾಧಿಸಿತು.* ರಾಜ್ಯಮಟ್ಟದಲ್ಲೂ ಕ್ರೀಡಾಕೂಟ ನಡೆಯಲಿ: ಪ್ರಮುಖರ ಅಭಿಮತಕೊಡಗಿನಲ್ಲಿ ಕೊಡವ ಹಾಕಿ ನಮ್ಮೆ ಪ್ರಾರಂಭವಾದ ಬಳಿಕ ಕ್ರೀಡಾ ಆಂದೋಲನವೊಂದು ಸೃಷ್ಟಿಯಾಗಿದ್ದು, ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿನ ಇತರ ಎಲ್ಲ ಜನಾಂಗಗಳು ಪ್ರತಿ ವರ್ಷ ಜನಾಂಗದ ಬಾಂಧವರಿಗೆ ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬಂದಿವೆ. ಜಿಲ್ಲೆಯಲ್ಲಿನ ಬ್ರಾಹ್ಮಣ ಸಮಾಜದ ಬಾಂಧವರು ಕೂಡ ವಿಪ್ರ ಕ್ರೀಡಾಕೂಟ ಆಯೋಜನೆ ಮೂಲಕ ಸಮುದಾಯದವರನ್ನು ಒಂದೆಡೆ ಸೇರಿಸಲು ಪ್ರಯತ್ನಿಸಿ ಸಫಲವಾಗಿದೆ ಎಂದು ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಹೇಳಿದರು.
2ನೇ ವರ್ಷದ ವಿಪ್ರ ಕ್ರೀಡಾಕೂಟದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮುದಾಯ ಸಂಘಟನೆಗೆ ಇದೊಂದು ಉತ್ತಮ ಹೆಜ್ಜೆ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಮಾಜದ ಹಿರಿಯರಾದ ಜಿ.ಟಿ. ರಾಘವೇಂದ್ರ ಮಾತನಾಡಿ, ಜಿಲ್ಲಾದ್ಯಂತದಿಂದ ಈ ಬಾರಿ 10 ತಂಡಗಳು ಭಾಗವಹಿಸಿವೆ. ಕ್ರಿಕೆಟ್ ಪಂದ್ಯಾವಳಿಗೆ ಇದು ಉತ್ತಮ ಪ್ರತಿಕ್ರಿಯೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ವಿಪ್ರ ಬಾಂಧವರ ಕ್ರೀಡಾಕೂಟ ಆಯೋಜನೆ ಆದಲ್ಲಿ ಸಮಾಜದ ಸರ್ವರ ಸಹಕಾರ ಇರಲಿದೆ ಎಂದರು.ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಜಿ.ಆರ್. ರವಿಶಂಕರ್, ನಿರ್ದೇಶಕರಾದ ಸವಿತಾ ಭಟ್, ಪ್ರಭಾಕರ ನೆಲ್ಲಿತ್ತಾಯ, ಎ.ವಿ. ಮಂಜುನಾಥ, ಜಯಶೀಲಾ ಪ್ರಕಾಶ್, ವೀಣಾ ಹೊಳ್ಳ, ಶಿವಶಂಕರ್, ರಾಜಶೇಖರ್, ಭರತೇಶ್ ಖಂಡಿಗೆ, ಕ್ರೀಡಾ ಸಂಚಾಲಕ ಬಿ.ಕೆ. ಅರುಣ್ ಕುಮಾರ್ ಪ್ರಮುಖರಾದ ಶ್ರೀಧರ್ ನೆಲ್ಲಿತ್ತಾಯ, ವಿದ್ಯಾಭಿವೃದ್ಧಿ ನಿಧಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಇತರ ಹಾಜರಿದ್ದರು.
ಫೆ.25ರಂದು ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣೆ ಮಡಿಕೇರಿಯ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.