ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಭಾರತೀಯ ಸಂಸ್ಕ್ರತಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ವಿಶಿಷ್ಠ ಸ್ಥಾನವಿದೆ. ವಿಶ್ವಕರ್ಮ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುವಂತಾಗಲಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಜಗನ್ಮಾತಾ ಕಾಳಿಕಾದೇವಿ ದೇವಸ್ಥಾನದ ಜಾತ್ರಾ ದಶಮಾನೋತ್ಸವದಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಶಿಲ್ಪಕಲೆಗಳನ್ನು ಮಾಡುವ ಶಕ್ತಿಯನ್ನು ಭಗವಂತ ವಿಶ್ವಕರ್ಮ ಸಮಾಜ ಬಾಂಧವರಿಗೆ ನೀಡಿದ್ದಾನೆ. ವಿಶ್ವಕರ್ಮ ಮಹರ್ಷಿಯವರು ಇಂದ್ರನ ಅರಮನೆಯಾದ ಇಂದ್ರಪ್ರಸ್ಥ ನಿರ್ಮಾಣ ಮಾಡಿದ್ದರು. ಮಹಾಭಾರತದಲ್ಲಿ ಪಾಂಡವರಿಗೆ ವಿಶಿಷ್ಠ ಅರಮನೆಯನ್ನು ಮಹರ್ಷಿಯವರು ನಿರ್ಮಾಣ ಮಾಡಿದ್ದು ಓದುತ್ತೇವೆ. ವಿಶ್ವಕರ್ಮ ಕಲೆ ಈ ಬಾಂಧವರಿಗೆ ವಂಶಪಾರಂಪರ್ಯವಾಗಿ ಬಂದಿದೆ. ಇದು ಇವರ ರಕ್ತಗುಣವಾಗಿದೆ ಎಂದರು.
೫೦೦ ವರ್ಷಗಳ ಹೋರಾಟ ಫಲವಾಗಿ ನಿರ್ಮಾಣವಾದ ಅಯೋಧ್ಯ ರಾಮಮಂದಿರದಲ್ಲಿ ನಿರ್ಮಾಣವಾಗಿರುವ ಬಾಲ ರಾಮನ ಮೂರ್ತಿಯನ್ನು ರಾಜ್ಯದ ಅರುಣ ಯೋಗಿರಾಜ್ ಅವರಿಂದ ಆಗಿರುವುದು ವಿಶ್ವಕರ್ಮ ಸಮಾಜದ ಹೆಮ್ಮೆಯ ಸಂಗತಿ. ಇತಿಹಾಸದಲ್ಲಿ ಅರಬ್ಬರು ದೇಶಕ್ಕೆ ಬಂದು ತಮ್ಮ ಅನೇಕ ಮಠ-ಮಂದಿರಗಳನ್ನು ನಾಶ ಮಾಡಿ ತಮ್ಮ ಧರ್ಮವನ್ನು ಪ್ರಚಾರ ಮಾಡಿದ್ದು, ಇತಿಹಾಸದಿಂದ ತಿಳಿಯುತ್ತೇವೆ. ಇಂದು ಅಂತಹ ರಾಷ್ಟ್ರವಾದ ಅಬುದಾಯಿ ದೇಶದಲ್ಲಿ ಸುಮಾರು ₹೭೦೦ ಕೋಟಿ ವೆಚ್ಚದಲ್ಲಿ ಸ್ವಾಮಿ ನಾರಾಯಣ ದೇವಸ್ಥಾನ ಹಿಂದು ದೇವಸ್ಥಾನ ನಿರ್ಮಾಣ ಮಾಡಿದ ಕಾಲಘಟದಲ್ಲಿದ್ದೇವೆ. ಈ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವುದು ನಮ್ಮ ಹೆಮ್ಮೆ ಎಂದರು.ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಜಗತ್ತಿನಲ್ಲಿ ಯಾರೂ ಶಾಶ್ವತವಾಗಿ ಇರಲ್ಲ. ಜಗತ್ತಿನಲ್ಲಿರುವಾಗ ಎಲ್ಲರೊಂದಿಗೆ ಚೆನ್ನಾಗಿ ಇರಬೇಕು. ೧೨ನೇ ಶತಮಾನದಲ್ಲಿ ಶರಣೆ ಕಾಳವ್ವೆ ಅವರು ಕೈತಪ್ಪಿ ಕೆತ್ತಲು ಕಾಲಿಗೆ ಮೂಲ ಎಂಬ ವಚನದ ಮೂಲಕ ಜೀವನದಲ್ಲಿ ನಾವು ಹೇಗೆ ಇರಬೇಕೆಂದು ತನ್ನ ವಚನದಲ್ಲಿ ಹೇಳಿದ್ದಾರೆ. ಹಾವಿನಾಳ ಕಲ್ಲಯ್ಯ ಅವರು ಅಕ್ಕಸಾಲಿಗ ಕೆಲಸ ಮಾಡುತ್ತಿದ್ದರು. ಕಾಶ್ಮೀರ ರಾಜ್ಯದ ರಾಜನಾಗಿದ್ದ ಭೂಪಾಲ ಅರಸ ವಿಶ್ವಗುರು ಬಸವೇಶ್ವರರ ಪ್ರಭಾವಕ್ಕೆ ಒಳಗಾಗಿ ಬಸವಕಲ್ಯಾಣಕ್ಕೆ ತನ್ನ ಪತ್ನಿ ಸಮೇತವಾಗಿ ಬಂದು ಕಟ್ಟಿಗೆ ಮಾರುವ ಕಾಯಕ ಮಾಡಿ ಅದರಿಂದ ಬಂದ ಹಣದಿಂದ ದಾಸೋಹ ಮಾಡಿ ತಮ್ಮ ಅನುಭಾವ ಹಂಚಿಕೊಳ್ಳುತ್ತಿರುವುದು ಸಂಗತಿ ಸ್ಮರಣೀಯ ಎಂದರು.
ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ವಿಶ್ವಕರ್ಮ ಸಮಾಜ ಬಾಂಧವರಿಗೆ ಪಂಚಭೂತಗಳು ಸಂಪೂರ್ಣವಾಗಿ ಒಲಿದಿವೆ. ಪ್ರತಿಯೊಬ್ಬರಲ್ಲಿ ಪ್ರೀತಿ ಜ್ಯೋತಿ ಬೆಳಗಬೇಕು. ಸಮಾಜದಲ್ಲಿ ನಾನು ಎಂಬ ಭಾವ ಹೋಗಿ ನಾವು ಎಂಬ ಭಾವ ಬಂದರೆ ಸಮಾಜ ಬೆಳೆಯುತ್ತದೆ ಎಂಬುವುದನ್ನು ಅರಿತುಕೊಳ್ಳಬೇಕು ಎಂದರು.ಇಂಗಳೇಶ್ವರ ಬ್ರಹ್ಮಾಂಡಬೇರಿ ಮಠದ ಮಹೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿ ಜನಿಸಿದವರು ಪುಣ್ಯವಂತರು. ಎಲ್ಲರ ಮನಸ್ಸು ಗೆಲ್ಲುವ ಶಕ್ತಿ ವಿಶ್ವಕರ್ಮ ಸಮಾಜ ಬಾಂಧವರಲ್ಲಿದೆ. ಎಲ್ಲ ಬಾಂಧವರು ಒಂದಾಗಿ ಅಹಂಕಾರ ಬಿಟ್ಟು ಎಲ್ಲರೂ ಒಂದಾಗಿ ಬಾಳಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಯುವಜನಾಂಗವು ಸಮಾಜದ ಏಳ್ಗೆಗೆ ಶ್ರಮಿಸುವಂತಾಗಲಿ ಎಂದರು.ಸಾನ್ನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಕಾಳಿಕಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೆ.ಬಿ.ಕಡೆಮನಿ ಮಾತನಾಡಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಪ್ರವೀಣ ಪವಾರ, ಚಂದ್ರಕಾಂತ ಪಟ್ಟಣಶೆಟ್ಟಿ, ಮೌನೇಶ ಪತ್ತಾರ, ಪುಂಡಲೀಕ ಕಮ್ಮಾರ ಇದ್ದರು. ಕೆ.ಗಂಗಾಧರ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ.ಕರುಣಾಕರ ಚೌಧರಿ ಸ್ವಾಗತಿಸಿದರು. ಕೃಷ್ಣಾ ಬಡಿಗೇರ, ವೈ.ಕೆ.ಪತ್ತಾರ ನಿರೂಪಿಸಿದರು. ಮಲ್ಲು ಪತ್ತಾರ ವಂದಿಸಿದರು. ಇದೇ ಸಂದರ್ಭದಲ್ಲಿ ಕಾಳಿಕಾದೇವಿ ದೇವಸ್ಥಾನಕ್ಕೆ ಶ್ರಮಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.ಭಾರತೀಯ ಸಂಸ್ಕ್ರತಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ವಿಶಿಷ್ಠ ಸ್ಥಾನವಿದೆ. ವಿಶ್ವಕರ್ಮ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುವಂತಾಗಲಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.