ಕನ್ನಡಪ್ರಭ ವಾರ್ತೆ ಕಲಬುರಗಿ
ವಿವೇಕಾನಂದರ ಆದರ್ಶಗಳನ್ನು ಪಾಲಿಸುವಂತೆ, ನಿತ್ಯ ಬದುಕಲ್ಲಿ ಅಳವಡಿಸಿಕೊಳ್ಳುವಂತೆ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಕರೆ ನೀಡಿದರು.ಇಲ್ಲಿನ ರಾಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಮಿನಿವಿಧಾನಸೌಧದಿಂದ ರಾಮಕೃಷ್ಣ ವಿವೇಕಾನಂದ ಆಶ್ರಮದವರೆಗೆ ಸ್ವಾಮಿ ವಿವೇಕಾನಂದರ ಭವ್ಯ ಮೆರವಣಿಗೆ ಜರುಗಿತು. ಈ ಮೆರವಣಿಗೆಯಲ್ಲಿಯೂ ಪೋಷಾಕು ತೊಟ್ಟ ಮಕ್ಕಳು ಗಮನ ಸೆಳೆದರು. ಬಾಲಕ, ಬಾಲಕಿಯರು ಸ್ವಾಮಿ ವಿವೇಕಾನಂದರ ಉಡುಗೆಯಲ್ಲಿ ಕಂಗೊಳಿಸಿದರು.ಕಾರ್ಯಕ್ರಮದಲ್ಲಿ ಮಕ್ಕಳೆಲ್ಲರೂ ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮ ಹಂಸರು, ಶಾರದಾ ಮಾತೆ ಹೀಗೆ ಅನೇಕ ಮಹನೀಯರನ್ನು ಹೋಲುವಂತಹ ತರಹೇವಾರಿ ಪೋಷಾಕುಗಳನ್ನು ತೊಟ್ಟು ಗಮನ ಸೆಳೆದರು. ಅನೇಕರು ಮಹಾತ್ಮರ ವಾಣಿಯನ್ನೇ ಹೋಲುವಂತಹ ಧ್ವನಿ ಮಾಡುತ್ತ ಅನೇಕ ಸಂದೇಶಗಳನ್ನುಹೃ ಹೇಳುತ್ತ ಸೇರಿದ್ದವರನ್ನೆಲ್ಲ ಸೆಳೆದರು.
ಸ್ವಾಮಿ ವಿಭಾಕರಾನಂದಜಿ ಮಹಾರಾಜ್,ಮಹೇಶ್ವರಾನಂಜಿ ಮಹಾರಾಜ್,ಸ್ವಾಮಿ ಚೈತನ್ಯಾನಂದಜಿ ಮಹಾರಾಜ್ ಅವರು ಸಾನ್ನಿಧ್ಯ ವಹಿಸಿದ್ದರು.ನಗರ ಪೊಲೀಸ್ ಆಯುಕ್ತ ಚೇತನ್ ಆರ್, ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ಸಾಂಸ್ಕೃತಿಕ ಚಿಂತಕ ಮಹಾದೇವಯ್ಯ ಕರದಳ್ಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಅವರು ಉಪಸ್ಥಿತರಿದ್ದರು.
ವಿವೇಕಾನಂದರ ತತ್ವಾದರ್ಶ ಅನುಸರಿಸಿ: ಗುತ್ತೇದಾರಕನ್ನಡಪ್ರಭ ವಾರ್ತೆ ಚವಡಾಪುರ
ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಹೇಳಿದರು.ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಹಿಂದು ಧರ್ಮದಲ್ಲಿರುವ ಅನಿಷ್ಠಗಳನ್ನು ಕಟುವಾಗಿ ಟೀಕಿಸಿದ್ದಾರೆ. ನಿಜವಾದ ಧರ್ಮ ಹೇಗಿರಬೇಕೆಂದು ಸಾರಿದ್ದಾರೆ. ಅಲ್ಲದೆ ಯುವ ಸಮುದಾಯ ದೇಶಕ್ಕಾಗಿ, ಧರ್ಮಕ್ಕಾಗಿ ಹೇಗೆ ಬದುಕಬೇಕೆಂದು ತಿಳಿಸಿದ್ದಾರೆ. ಹೀಗಾಗಿ ಯುವಕರು ಸ್ವಾಮಿ ವಿವೇಕಾನಂದರನ್ನು ಸರಿಯಾಗಿ ಓದಿಕೊಂಡು ಅವರ ತತ್ವಾದರ್ಶಗಳನ್ನು ಅನುಸರಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸುಭಾಷ ಪೊಲೀಸಪಾಟೀಲ ಬಡದಾಳ, ಗಿರೀಶ ಉಡಗಿ ಬಡದಾಳ, ಅವ್ವಣ್ಣ ಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.