ಕನ್ನಡಪ್ರಭ ವಾರ್ತೆ ಮಣಿಪಾಲ
ವಿಶನ್ ಕರ್ನಾಟಕ ಫೌಂಡೇಶನ್ (ವಿಕೆಎಫ್) ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಹಯೋಗದಲ್ಲಿ, ಭೌಗೋಳಿಕ ಗುರುತು ಮಾನ್ಯತೆ (ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್) ಪಡೆದಿರುವ ಕೃಷಿ ಉತ್ಪನ್ನಗಳಿಗಾಗಿ ಸಂಶೋಧನ ಆಧಾರಿತ ಇನ್ಕ್ಯುಬೇಶನ್ ಕಾರ್ಯಕ್ರಮಕ್ಕೆ ಮಂಗಳವಾರ ಮಾಹೆಯಲ್ಲಿ ಸಹಿ ಹಾಕಲಾಗಿದೆ. ಉಡುಪಿ ಜಿಲ್ಲೆಯ ಜಿಐ ಮಾನ್ಯತೆ ಪಡೆದಿರುವ ಮಟ್ಟುಗುಳ್ಳ ಮತ್ತು ಶಂಕರಪುರ ಮಲ್ಲಿಗೆ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವುದು, ಅವರ ಜೀವನ ಮಟ್ಟವನ್ನು ವೃದ್ಧಿಸುವುದು ಈ ಇನ್ಕ್ಯುಬೇಶನ್ ಕಾರ್ಯಕ್ರಮದ ಮುಖ್ಯ ಉದ್ದೇಶಗಳಾಗಿವೆ. ವಿಕೆಫ್ ಅಧ್ಯಕ್ಷ ಕಿಶೋರ್ ಜಾಗೀರ್ದಾರ್ ಮಾತನಾಡಿ, ವಿಶಾಲವಾದ ಮಾರುಕಟ್ಟೆಯನ್ನು ಹೊಂದಿರುವ, ಕೃಷಿ ಉತ್ಪನ್ನ ಸಮುದಾಯಗಳಿಗಾಗಿ ಈ ಇನ್ಕ್ಯುಬೇಶನ್ ವ್ಯವಸ್ಥೆಯನ್ನು ಆರಂಭಿಸಿರುವುದು ಭಾರತದಲ್ಲಿಯೇ ಪ್ರಥಮವಾಗಿದೆ ಎಂದರು.ಈ ಇನ್ಕ್ಯುಬೇಶನ್ ಕಾರ್ಯಕ್ರಮದ ಮೂಲಕ ಮುಂದಿನ 3 ವರ್ಷಗಳಲ್ಲಿ ಈ ಉತ್ಪನ್ನಗಳ ಬ್ರ್ಯಾಂಡಿಂಗ್, ಗುಣಮಟ್ಟ ಹೆಚ್ಚಳ, ಮೌಲ್ಯವರ್ಧನೆ, ಡಿಜಿಟಲ್ ಮಾರುಕಟ್ಟೆಗಳ ಬಗ್ಗೆ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.
ಪ್ರಸ್ತುತ ವಿಕೆಎಫ್ ಉಡುಪಿ ಜಿಲ್ಲೆಯ 2 ಉತ್ಪನ್ನಗಳ ಬಗ್ಗೆ ಗಮನ ಹರಿಸುತ್ತಿದೆ, ಮುಂದೆ ದೇಶದ ಇಂತಹದ್ದೇ ಇತರ 46 ಜಿಐ ಮಾನ್ಯತೆ ಪಡೆದ ಉತ್ಪನ್ನಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ ಎಂದರು.ಮಾಹೆಯ ಉಪಕುಲಪತಿ ಲೆ.ಜ. ಡಾ.ಎಂ.ಡಿ.ವೆಂಕಟೇಶ್, ಈ ಸಹಭಾಗಿತ್ವವು ಸುಸ್ಥಿರ ಅಭಿವೃದ್ಧಿ ಮತ್ತು ಸಾಮುದಾಯಿಕ ಸಬಲೀಕರಣದ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರು ಈ ವಿಶಿಷ್ಟ ಅಧ್ಯಯನ ಅನುಭವದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಹೆಯ ಕುಲಸಚಿವ ಡಾ.ಪಿ. ಗಿರಿಧರ್ ಕಿಣಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಸಂದೀಪ್ ಶೆಣೈ ಉಪಸ್ಥಿತರಿದ್ದರು.