ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಹೋಬಳಿಯ ಚಟ್ನಹಳ್ಳಿ, ಅಣಜಿಗೆರೆ, ಉಚ್ಚಂಗಿದುರ್ಗ, ಕಮ್ಮತ್ತಹಳ್ಳಿ ಪುಣಭಘಟ್ಟ, ತೌಡೂರು, ಅರಸೀಕೆರೆ, ಹೊಸಕೋಟೆ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬಿರುಸಿನ ಪ್ರಚಾರ ಕೈಗೊಂಡರು.ಪ್ರಚಾರ ಸಭೆಯಲ್ಲಿ ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ನರೇಂದ್ರ ಮೋದಿ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ ಕಳಿಸಿದರೆ ಮತ್ತೊಂದು ಬಾರಿ ಮೋದಿ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು.
ಅರಸೀಕೆರೆ ಹೋಬಳಿಯ ಉಚ್ಚಂಗಿದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ₹8 ಕೋಟಿ, ಅರಸೀಕೆರೆಗೆ ರಸ್ತೆ ಅಗಲೀಕರಣ, ವಿದ್ಯುತ್ ಪ್ರಸರಣ ಘಟಕ,ಸಿಸಿ ರಸ್ತೆಗೆ ₹50 ಕೋಟಿ ಹೀಗೆ ಅರಸೀಕೆರೆ ಹೋಬಳಿಗೆ ಅಂದಾಜು ₹200 ಕೋಟಿ ಅನುದಾನವನ್ನು ನನ್ನ ಅವಧಿಯಲ್ಲಿ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಇಷ್ಟು ಅಭಿವೃದ್ಧಿ ಮಾಡಿದರೂ ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಅವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಭಾವುಕರಾಗಿ ಮನವಿ ಮಾಡಿದರು.ಇನ್ನೊಬ್ಬ ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಮಾಜಿ ಶಾಸಕ ರಾಮಚಂದ್ರ ಹಾಗೂ ನಾನು ಇಬ್ಬರು ಸೇರಿ ಅರಸೀಕೆರೆ ಹೋಬಳಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಈ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದ್ದೇವೆ ಎಂದರು.
ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಈ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ನಿರುದ್ಯೋಗ ಸಮಸ್ಯೆಯಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಕಾರ್ಖಾನೆ ಸ್ಥಾಪನೆ ಹಾಗೂ ಸರೋವರ ಯೋಜನೆ ವ್ಯವಸ್ಥೆ ಮಾಡಲಾಗುವುದು. ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನನ್ನ ಗುರುತಾದ ಬಿಜೆಪಿಗೆ ಮತ ನೀಡಿ, ನನ್ನ ಗೆಲ್ಲಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಂದಿರಾ ರಾಮಚಂದ್ರ, ರಶ್ಮಿ ರಾಜಪ್ಪ, ಜಿ.ಎಸ್. ಅನಿತ್ ಸಿದ್ದೇಶ್ವರ, ಜೆಡಿಎಸ್ ನ ಕಲ್ಲೇರುದ್ರೇಶ್, ಭೈರೇಶ್, ಜಗಳೂರು ಮಂಡಲದ ಅಧ್ಯಕ್ಷ ಪಲ್ಲಾಗಟ್ಟಿ ಮಹೇಶ್, ಮಂಜುನಾಥ್, ವೈ. ಡಿ. ಅಣ್ಣಪ್ಪ, ಪ್ರಶಾಂತ್ ಪಾಟೇಲ್, ಡಿ. ಸಿದ್ದಪ್ಪ, ಉಚ್ಚಂಗಿದರ್ಗದ ಎಸ್.ಹನುಮಂತಪ್ಪ, ಭರಮಪ್ಪ,ಕಟಿಗಿ ಪರುಶುರಾಮ, ವೀರಣ್ಣ ಮಾಸ್ತರ್,ಮಂಜುನಾಥ್ ಗೌಡ್ರು, ತೌಡೂರು ಮಂಜುನಾಥಯ್ಯ, ಕ್ಯಾರಕಟ್ಟೆ ಶಿವಯೋಗಿ, ಫಣಿಯಾಪುರದ ಲಿಂಗರಾಜ್, ಬೇವಿನಹಳ್ಳಿ ಕೆಂಚನಗೌಡ್ರು,ಅಣಜಿಗೆರೆ ಮಲ್ಲಿಕಾರ್ಜುನ, ಭರಮನ ಗೌಡ, ಪುಣಭಘಟ್ಟದ ಬಸವರಾಜ್, ಕಮ್ಮತ್ತಹಳ್ಳಿ ಸಿದ್ದಪ್ಪ ಹಾಗೂ ಏಳು ಗ್ರಾಮ ಪಂಚಾಯಿತಿಯ ಕಾರ್ಯಕರ್ತರು ಹಾಜರಿದ್ದರು.