ಲೋಕಸಭಾ ಸಾರ್ವತ್ರಿಕ ಚುನಾವಣೆ: ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ
ಸುಭದ್ರ ದೇಶ ನಿರ್ಮಾಣಕ್ಕಾಗಿ ಮೇ 7ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಅರ್ಹ ಮತದಾರರು ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಮಳ್ಳಿ ತಾಂಡಾದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ನಡೆದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೆ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಾವು ಮತ ಚಲಾಯಿಸಬೇಕು. ಕೂಲಿಕಾರರು ಮತದಾನ ಮಾಡಿ ಇತರರಿಗೂ ಮಾದರಿಯಾಗಬೇಕೆಂದು ಕರೆ ನೀಡಿದರು.ಮತದಾನ ಪವಿತ್ರವಾದ ಕಾರ್ಯವಾಗಿದ್ದು, ಮತದಾನದ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು. ಈ ಜಾಗೃತಿ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲ ನರೇಗಾ ಕೂಲಿಕಾರರು, ಕುಟುಂಬದ 18 ವರ್ಷದ ಮೇಲ್ಪಟ್ಟ ಸದಸ್ಯರು ಮತ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಆಡಳಿತ ಒದಗಿಸಲು ಕೈ ಜೋಡಿಸಬೇಕು ಎಂದರು.
ಸ್ವೀಪ್ ಜಾಗೃತಿ ಜಾಥಾವು ಸರ್ಕಾರಿ ಶಾಲೆಯಿಂದ ಆರಂಭವಾಗಿ ತಾಂಡಾದ ಬೀದಿಗಳಲ್ಲಿ ಸಂಚರಿಸಿ ನಮ್ಮ ಮತ, ನಮ್ಮ ಹಕ್ಕು ಇತ್ಯಾದಿ ಘೋಷಣೆಗಳೊಂದಿಗೆ ಸಾಗಿ ಮುಕ್ತಾಯಗೊಂಡಿತು. 100ಕ್ಕೂ ಹೆಚ್ಚು ಜನ ತಾಂಡಾದವರು ಭಾಗವಹಿಸಿದ್ದರು.
ಈ ಸ್ವೀಪ್ ಜಾಗೃತಿ ಕಾರ್ಯಕ್ರಮದಲ್ಲಿ ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಗ್ರಾಮ ಪಂಚಾಯಿತಿ ಸಿಬ್ಬಂದಿ ದೇವೇಂದ್ರಪ್ಪ, ಸೋಮಶೇಖರ, ಬಂಗಾರಪ್ಪ, ವೀರೇಶ ಹಾಗೂ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.