ವಿಸಿ ನಾಲೆಯಿಂದ ಕೊನೇ ಭಾಗಕ್ಕೆ ಹರಿಯದ ನೀರು: ಆಕ್ರೋಶ

KannadaprabhaNewsNetwork |  
Published : Apr 06, 2025, 01:45 AM IST
3ಕೆಎಂಎನ್ ಡಿ16 | Kannada Prabha

ಸಾರಾಂಶ

ನೀರು ಹರಿಸದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೇ ಕಿರಿಯ ಅಧಿಕಾರಗಳ ಮೇಲೆ ಹಿರಿಯ ಅಧಿಕಾರಿಗಳು ದೂರುತ್ತಾರೆ. ಹಿರಿಯ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುತ್ತಾರೆ. ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನ ಕೊನೇ ಭಾಗದ ವಿಸಿ ನಾಲೆಗೆ ಸಮರ್ಪಕ ನೀರು ಹರಿಯದೇ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣರಾಜಸಾಗರ ಜಲಾಶಯದ ಕೊನೇ ಭಾಗ ಮಳವಳ್ಳಿ ತಾಲೂಕಿನ ನಾಲೆಗಳಿಗೆ ರಾಜಕೀಯ ಉದ್ದೇಶದಿಂದಾಗಿ ನೀರು ಹರಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೈತರು ಲಕ್ಷಾಂತರ ರು. ಬೆಳೆ ಒಣಗುವ ಆತಂಕದಲ್ಲಿದ್ದಾರೆ ಎಂದರು.

ನೀರು ಹರಿಸದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೇ ಕಿರಿಯ ಅಧಿಕಾರಗಳ ಮೇಲೆ ಹಿರಿಯ ಅಧಿಕಾರಿಗಳು ದೂರುತ್ತಾರೆ. ಹಿರಿಯ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುತ್ತಾರೆ. ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.

ತಾಲೂಕಿನಲ್ಲಿ ಮರಳು, ಮಣ್ಣು, ಕಲ್ಲು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ನಾನು ಶಾಸಕನಾಗಿದ್ದಾಗ ಒಂದೇ ಒಂದು ಹಿಡಿ ಮಣ್ಣು, ಮರಳು ತೆಗೆಯಲು ಬಿಟ್ಟಿರಲಿಲ್ಲ. ಈಗ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

2019ರಲ್ಲಿಯೇ ಮುಗಿಯಬೇಕಿದ್ದ ಪೂರಿಗಾಲಿ ಹನಿ ನೀರಾವರಿ ಯೋಜನೆ ಇನ್ನೂ ಉದ್ಘಾಟನೆಯಾಗಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಯೋಜನೆಗಾಗಿ 300 ಕೋಟಿ ರು. ಹಣ ಬಿಡುಗಡೆಗೊಳಿಸಲಾಗಿತ್ತು. ಪೂರ್ಣಗೊಳಿಸಿ ರೈತರಿಗೆ ಯಾವಾಗ ನೀರು ಕೊಡುತ್ತೀರಿ ಎಂದು ಕೇಳಿದರು.

ತಾಲೂಕಿನ ಅಧಿಕಾರಿಗಳು ಹಾಗೂ ಪೊಲೀಸರು ಶಾಸಕರ ಪುತ್ರನ ಹುಟ್ಟುಹಬ್ಬಕ್ಕೆ ಅವರ ಮನೆಗೆ ಹೋಗಿ ಶುಭಾಶಯ ಕೋರುತ್ತಾರೆ. ಇಡೀ ಆಡಳಿತವನ್ನು ಪೂರಿಗಾಲಿಯಲ್ಲಿಯೇ ನಡೆಸಲಾಗುತ್ತಿದೆ. ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಹಲವು ವರ್ಷಗಳಿಂದ ಬೆಳೆದಿದ್ದ ಮಾರೇಹಳ್ಳಿ ಕೆರೆ ಬಳಿಯ ಅರಳಿಮರದ ಕೊಂಬೆ ಕಡಿದಿರುವುದು ಖಂಡನೀಯ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪರಿಸರ ನಾಶ ಮಾಡಿಸಿರುವುದು ಸರಿಯಲ್ಲ. ರಸ್ತೆಗೆ ಯಾವುದೇ ತೊಂದರೆ ಇಲ್ಲದ ಮರದ ಕೊಂಬೆಯನ್ನು ಕಡಿದಿರುವುದು ಅಧಿಕಾರಿಗಳ ಪರಿಸರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದರು.

ನಾನು ಶಾಸಕನಾಗಿದ್ದಾಗ ತಂದಿದ್ದ ಕಾಮಗಾರಿಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಾಲಿ ಶಾಸಕರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯ ಸಿದ್ದರಾಜು, ಮುಖಂಡರಾದ ಕಾಂತರಾಜು, ಆನಂದ್, ಸದಾನಂದ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...