ಕನ್ನಡಪ್ರಭ ವಾರ್ತೆ, ಶೃಂಗೇರಿ
ನೀರು ಎಲ್ಲರಿಗೂ ಬೇಕು. ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ನೀರು ಅತ್ಯಾವಶ್ಯಕ. ಜಲ ಮಾಲಿನ್ಯ ರೋಗಗಳಿಗೆ ಆಹ್ವಾನ ನೀಡುತ್ತದೆ ಎಂದು ಉತ್ತರ ಪ್ರದೇಶದ ಪರಿಸರ ತಜ್ಞ ಪದ್ಮಶ್ರಿ ಪುರಸ್ಕೃತ ಉಮಾಶಂಕರ್ ಪಾಂಡೆ ಅಭಿಪ್ರಾಯಪಟ್ಟರು.ಪಟ್ಟಣದ ಗೌರೀ ಶಂಕರ ಸಭಾಂಗಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಶೇ. 40 ರಷ್ಟು ಬಳಕೆ ನೀರಿನಲ್ಲಿ ಶೇ. 1 ರಷ್ಟು ಮಾತ್ರ ಶುದ್ಧವಾಗಿದೆ. ಆಧುನಿಕತೆ ಭರಾಟೆಯಲ್ಲಿ ಜಲಮಾಲಿನ್ಯ ಹೆಚ್ಚುತ್ತಿದೆ. ನದಿಗಳು ಕಲುಷಿತಗೊಂಡು ಮಲೀನ ಗೊಳ್ಳುತ್ತಿದೆ ಎಂದರು.
ಎಲ್ ಕೆ ಜಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ನೀರಿನ ಬಾಟಲ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ನಮ್ಮ ನದಿ, ಜಲ ಮೂಲಗಳನ್ನು ಸ್ವಚ್ಛ ವಾಗಿಟ್ಟುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನೀರಿನ ವ್ಯಾಪಾರೀಕರಣ ಮಾಡಬಾರದು. ನೀರಿಗೆ ಜಾತಿ ಬೇದವಿಲ್ಲ. ಧರ್ಮವಿಲ್ಲ. ನೀರು ಎಲ್ಲರಿಗೂ ಬೇಕು. ಹಿಂದೂಗಳು ದೇವಸ್ಥಾನದಲ್ಲಿ ತೀರ್ಥದ ರೂಪದಲ್ಲಿ, ಮುಸ್ಲಿಮರು ಮೆಕ್ಕಾದಲ್ಲಿ ಝಮ್ ಝಮ್ ರೂಪದಲ್ಲಿ, ಜೈನರು,ಕ್ರೈಸ್ಥರು ತಮ್ಮ ಪೂಜೆಗಳಲ್ಲಿ ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಎಲ್ಲಾ ಧರ್ಮಗಳಲ್ಲಿ ಪೂಜೆ ರೂಪದಲ್ಲಿ ಬಳೆಕೆಯಾಗುತ್ತಿದೆ.ಮನುಷ್ಯ ಹುಟ್ಟುವಾಗ, ಸಾಯುವಾಗ ನೀರು ಬೇಕು. ನಡುವೆ ಬದುಕಿನ ಅವಶ್ಯಕತೆಗೂ ನಿತ್ಯ ನೀರು ಬೇಕು. ನೀರಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ಸಕಲ ಜೀವರಾಶಿಗೂ ನೀರು ಪ್ರಮುಖ ಆಧಾರವಾಗಿದೆ. ನೀರಿನ ವಿಚಾರದಲ್ಲಿ ಧರ್ಮ, ರಾಜಕಾರಣ ಮಾಡಬಾರದು. ನೀರಿನ ವಿಷಯದಲ್ಲಿ ರಾಜಕೀಯ ಲೇಪನ ಮಾಡಬಾರದು. ಜಲ ರಕ್ಷಣೆಗೆ ಮುಂದಾಗಬೇಕು. ಜಲಮೂಲ ನಾಶ ಮಾಡಿದರೆ ಮನುಕುಲನಾಶವಾಗುತ್ತದೆ. ಮನುಷ್ಯನ ಬದುಕಿನ ಅಸ್ತಿತ್ವಕ್ಕೆ ಜಲಮೂಲ ಅತ್ಯಗತ್ಯ ಎಂದರು.
ಶೃಂಗೇರಿ ಪಟ್ಟಣದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಹೊರಟ ಮೆರವಣಿಗೆ ಪಟ್ಟಣದ ಶ್ರೀ ಸಂಕರಾಚಾರ್ಯ ವೃತ್ತದ ಬಳಿ ಸಮಾವೇಶಗೊಂಡಿತು. ತಾಲೂಕಿನ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ನಂತರ ನಿರ್ಮಲ ತುಂಗಭದ್ರಾ ಅಭಿಯಾನ ಶೃಂಗೇರಿಯಿಂದ ಅಡ್ಡಗೆದ್ದೆ ಕೊಪ್ಪಾದತ್ತ ಚಲಿಸಿತು.ಕಾರ್ಯಕ್ರಮದಲ್ಲಿ ಪರಿಸರವಾದಿಗಳಾದ ಗಿರೀಶ್ ಪಟೇಲ್, ಬಸವರಾಜ್ ಪಾಟೀಲ್, ಕುಮಾರ ಸ್ವಾಮಿ, ಮಾಜಿ ಸಚಿವ ಡಿ.ಎನ್.ಜೀವರಾಜ್ ಮತ್ತಿತರರು ಇದ್ದರು.6 ಶ್ರೀ ಚಿತ್ರ 3-
ಶೃಂಗೇರಿ ಶ್ರೀ ಮಠದ ತುಂಗಾ ನದಿ ತೀರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಸದಸ್ಯರು ತುಂಗೆಗೆ ಪೂಜೆ ಸಲ್ಲಿಸುತ್ತಿರುವುದು. ಉಮಾಶಂಕರ್ ಪಾಂಡೆ, ಗಿರೀಶ್ ಪಟೇಲ್ ಮತ್ತಿತರರು ಇದ್ದರು.