ಕನ್ನಡಪ್ರಭ ವಾರ್ತೆ ಬಂಟ್ವಾಳ
ಪುರಸಭಾ ವ್ಯಾಪ್ತಿಗೆ ಯಾವೊಂದು ಮನೆಗೂ ಕೂಡ 24×7 ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಸರ್ವ ಸದಸ್ಯರ ಬಾಯಲ್ಲಿ ಕೇಳಿ ಬಂತು. ಸುಡುವ ಬಿಸಿಲು ಒಂದೆಡೆಯಾದರೆ ನೇತ್ರಾವತಿ ನದಿಯ ಒಡಲಿನಲ್ಲಿರುವ ಪುರವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಪುರಸಭೆಯಿಂದ ಸಾಧ್ಯವಾಗದೆ ಒದ್ದಾಟ ಮಾಡುವ ಸ್ಥಿತಿ ಇನ್ನೊಂದೆಡೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ನಿವಾಸಿಗಳಿಗೆ ನಿರಂತರವಾಗಿ ನೀರು ನೀಡುವ ಯೋಜನೆಯನ್ನು ಇಲಾಖೆ ಸಮರ್ಪಕವಾಗಿ ನಿರ್ವಹಿಸದೆ ಸದಸ್ಯರು ಜನರ ಬಾಯಿಯಿಂದ ಕೆಟ್ಟ ಮಾತುಗಳನ್ನು ಕೇಳುವಂತಾಗಿದೆ ಎಂಬ ಆರೋಪಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಈಗಾಗಲೇ ಈ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿಗೆ ಪತ್ರ ಬರೆದಿದ್ದೆ, ಆದರೆ ಸಮಧಾನಕರವಲ್ಲದ ಉತ್ತರ ನಮಗೆ ದೊರತಿರುವ ಕಾರಣ ಸರ್ವ ಸದಸ್ಯರ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಅವರನ್ನು ಬೇಟಿ ಮಾಡಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡುವಂತೆ ಸಭೆಯಲ್ಲಿ ಕೇಳಿಕೊಂಡಂತೆ ಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದರು.ಫಿಲ್ಟರ್ ಮಾಡದ ಕುಡಿಯಲು ಯೋಗ್ಯವಲ್ಲದ ನೀರನ್ನು ಮನೆಗೆ ಸರಬರಾಜು ಮಾಡಲಾಗುತ್ತಿದ್ದು, ಇದರಿಂದ ಜೀವಕ್ಕೆ ಹಾನಿಯಾದರೆ ಪುರಸಭೆ ಹೊಣೆಯಾಗುತ್ತದೆ ಎಂದು ಸದಸ್ಯರು ಎಚ್ಚರಿಕೆಯನ್ನು ನೀಡಿದ್ದಲ್ಲದೆ, ಕೋಟ್ಯಂತರ ರು. ಖರ್ಚು ಮಾಡಿದ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಇನ್ನೂ ಕೂಡ ಇಂಪ್ಲಿಮೆಂಟ್ ಆಗದಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ರೇಖಾಶೆಟ್ಟಿ ಕಾರ್ಯಕಲಾಪ ನಡೆಸಿಕೊಟ್ಟರು.