ಕಾಮಗಾರಿಯೇ ನಡೆಯದಿದ್ದರೂ ಬಿಲ್‌ ಮಂಜೂರು: 28 ಎಂಜಿನಿಯರ್‌ ಸಸ್ಪೆಂಡ್‌

KannadaprabhaNewsNetwork |  
Published : Jan 21, 2024, 01:31 AM ISTUpdated : Jan 21, 2024, 02:23 PM IST
suspend

ಸಾರಾಂಶ

2009-10 ಮತ್ತು 2010-11ನೇ ಸಾಲಿನಲ್ಲಿ ನಡೆದಿದ್ದ ತುಂಗಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ವೇಳೆ ಬರೋಬ್ಬರಿ ₹650 ಕೋಟಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ 28 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ/ಮುನಿರಾಬಾದ್

2009-10 ಮತ್ತು 2010-11ನೇ ಸಾಲಿನಲ್ಲಿ ನಡೆದಿದ್ದ ತುಂಗಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ವೇಳೆ ಬರೋಬ್ಬರಿ ₹650 ಕೋಟಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ 28 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ ಎನ್.ಹರ್ಷ ಈ ಅಮಾನತು ಆದೇಶ ಹೊರಡಿಸಿದ್ದಾರೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಡದಂಡೆ ನಾಲೆಯ ದುರಸ್ತಿ ಕಾಮಗಾರಿ ವೇಳೆ ಕೊಪ್ಪಳ ತಾಲೂಕಿನ ವಡ್ರಟ್ಟಿ, ಮುನಿರಾಬಾದ್, ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ವಿಭಾಗ ವ್ಯಾಪ್ತಿಯಲ್ಲಿ ಈ ಅಕ್ರಮ ನಡೆದಿತ್ತು. 

ಈ ಸಂಬಂಧ ದೂರು ನೀಡಲಾಗಿತ್ತು. ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಿದ ಇಲಾಖೆಯ ವಿಚಕ್ಷಣ ದಳ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ತನಿಖಾ ವರದಿ ಆಧರಿಸಿ 28 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ.

ಕಾಲುವೆಯ ಆಧುನೀಕರಣದ ಕಾಮಗಾರಿಯಲ್ಲಿ ನೈಜ ಕಾಮಗಾರಿ ನಡೆಸದೇ ಬಿಲ್ ಮಂಜೂರು ಮಾಡಿಸಿಕೊಂಡಿದ್ದರು. ಮೂರು ತಿಂಗಳ ಅವಧಿಯಲ್ಲಿಯೂ ಕೈಗೊಳ್ಳಲು ಸಾಧ್ಯವಾಗದ ಕಾಮಗಾರಿಯನ್ನು ಕೇವಲ 39 ದಿನಗಳಲ್ಲಿ ಪೂರ್ಣಗೊಳಿಸಿರುವುದಾಗಿ ತಿಳಿಸಲಾಗಿತ್ತು. ಈ ಎಲ್ಲಾ ಅಕ್ರಮಗಳು ತನಿಖೆ ವೇಳೆ ಪತ್ತೆಯಾಗಿವೆ.

ಈ ಮಧ್ಯೆ, ಈ ಕಾಮಗಾರಿಯ ಅಕ್ರಮದಲ್ಲಿ ಕೇವಲ ಅಧಿಕಾರಿಗಳು ಮಾತ್ರ ಶಾಮೀಲಾಗಿರಲು ಸಾಧ್ಯವಿಲ್ಲ. ಇದರಲ್ಲಿ ದೊಡ್ಡ, ದೊಡ್ಡ ಕುಳಗಳು, ಜನಪ್ರತಿನಿಧಿಗಳು ಸಹ ಪಾಲುದಾರರಾಗಿರುವ ಸಾಧ್ಯತೆ ಇದೆ. ಹೀಗಾಗಿ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎನ್ನುವ ಆಗ್ರಹ ಜನರಿಂದ ಕೇಳಿ ಬಂದಿದೆ.

ಅಮಾನತ್ತಾದ ಅಧಿಕಾರಿಗಳು:ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅನಂತಕುಮಾರ ಚೂರಿ, ವಿನೋದಕುಮಾರ ಗುಪ್ತ, ಸೂಗಪ್ಪ, ಸಹಾಯಕ ಎಂಜಿನಿಯರ್‌ಗಳಾದ ಎಂ.ಹನುಮಂತಪ್ಪ, ಬಿ.ಶಿವಮೂರ್ತಿ, ತಿಮ್ಮಣ್ಣ, ಈಶ್ವರ ನಾಯಕ, ಶಾಂತರಾಜು, ಬಸವರಾಜ ಹಳ್ಳಿ, ವೆಂಕಟೇಶ್ವರ ರಾವ್, ಜಿತೇಂದ್ರ, ರಾಜೀವ ನಾಯಕ, ವಿಶ್ವನಾಥ, ಕೃಷ್ಣಮೂರ್ತಿ, ದೇವೇಂದ್ರಪ್ಪ, ಯಲ್ಲಪ್ಪ, ಕಿರಿಯ ಎಂಜಿನಿಯರ್‌ಗಳಾದ ರವಿ, ಜಗನ್ನಾಥ ಕುಲಕರ್ಣಿ, ಕನಕಪ್ಪ, ಅಬ್ದುಲ್‌ ರಶೀದ್, ಗಜಾನನ, ಮೋಹನ್‌ಕುಮಾರ, ಎಚ್‌.ಡಿ. ನಾಯಕ, ಮಲ್ಲಪ್ಪ ನಾಗಪ್ಪ, ದ್ವಿತೀಯ ದರ್ಜೆ ಸಹಾಯಕರಾದ ಮಹಿಮೂದ್, ನಾಗರಾಜ, ಆರಿಫ್‌ ಹುಸೇನ್, ಅನುರೇಖಕಾರ ಅಬ್ದುಲ್ ಹಕ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!