ಉತ್ತರಕನ್ನಡ ಜಿಲ್ಲೆಯ 411 ಹಳ್ಳಿಗಳಲ್ಲಿ ನೀರಿನ ತುಟಾಗ್ರತೆ

KannadaprabhaNewsNetwork | Published : Mar 29, 2025 12:31 AM

ಬಿಸಿಲ ತೀವ್ರತೆ ಹೆಚ್ಚಾಗಿದ್ದು, ಮತ್ತೂ ಹೆಚ್ಚಿನ ಹಳ್ಳಿಗಳಲ್ಲಿ ಹಾಗೂ ಅತಿ ಬೇಗನೆ ನೀರಿನ ಸಮಸ್ಯೆ ಆದರೂ ಆಶ್ಚರ್ಯವಿಲ್ಲ.

ಕಾರವಾರ: ಜಿಲ್ಲೆಯಲ್ಲಿ ಏಪ್ರಿಲ್-ಮೇ ಅವಧಿಯ ಬೇಸಿಗೆಯಲ್ಲಿ ೧೪೭ ಗ್ರಾಪಂಗಳ ೪೧೧ ಹಳ್ಳಿಗಳಲ್ಲಿ ಹಾಗೂ ಜಿಲ್ಲೆಯಲ್ಲಿ ೧೩ ನಗರ ಸ್ಥಳೀಯ ಸಂಸ್ಥೆಗಳ ೫೩ ವಾಡ್‌ಗಳಲ್ಲಿ ಕುಡಿಯುವ ನೀರಿನ ತುಟಾಗ್ರತೆ ಉಂಟಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಈಗಾಗಲೇ ಹಳಿಯಾಳದಲ್ಲಿ ೧೫ ಹಳ್ಳಿ, ಹೊನ್ನಾವರ ೨, ಕುಮಟಾ ೩, ಮುಂಡಗೋಡ ೬ ಒಟ್ಟು ೨೬ ಹಳ್ಳಿಗಳಿಗೆ ಟ್ಯಾಂಕರ್, ಕೊಳವೆಬಾವಿ (ಬೋರ್‌ವೆಲ್) ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಗುರುತಿಸಲಾದ ಹಳ್ಳಿಗಳಲ್ಲಿ ಜಿಲ್ಲಾಡಳಿತದ ಸರ್ವೆ ಪ್ರಕಾರ ಏಪ್ರಿಲ್ ೧೫ರ ನಂತರ ನೀರಿನ ತುಟಾಗ್ರತೆ ಉಂಟಾಗುವ ಸಾಧ್ಯತೆಯಿದೆ. ಆದರೆ ವರ್ಷಕ್ಕಿಂತ ಈ ಬಾರಿ ಬಿಸಿಲ ತೀವ್ರತೆ ಹೆಚ್ಚಾಗಿದ್ದು, ಮತ್ತೂ ಹೆಚ್ಚಿನ ಹಳ್ಳಿಗಳಲ್ಲಿ ಹಾಗೂ ಅತಿ ಬೇಗನೆ ನೀರಿನ ಸಮಸ್ಯೆ ಆದರೂ ಆಶ್ಚರ್ಯವಿಲ್ಲ.

ಹಳ್ಳಿಗಳ ಸಂಖ್ಯೆ:

ಅಂಕೋಲಾ ತಾಲೂಕಿನಲ್ಲಿ ೧೬ ಗ್ರಾಪಂಗಳ ೫೦ ಹಳ್ಳಿ, ಭಟ್ಕಳ ೧೪ ಗ್ರಾಪಂಗಳ ೩೨, ಹಳಿಯಾಳ ೧೬ ಗ್ರಾಪಂಗಳ ೩೭, ಹೊನ್ನಾವರ ೨೦ ಗ್ರಾಪಂಗಳ ೫೫, ಕಾರವಾರ ೧೩ ಗ್ರಾಪಂಗಳ ೨೦, ಕುಮಟಾ ೧೬ ಗ್ರಾಪಂಗಳ ೮೧, ಮುಂಡಗೋಡ ೯ ಗ್ರಾಪಂಗಳ ೧೯, ಸಿದ್ದಾಪುರ ೧೯ಗ್ರಾಪಂಗಳ ೫೦, ಶಿರಸಿ ತಾಲೂಕಿನ ೮ ಗ್ರಾಪಂಗಳ ೧೫ ಹಳ್ಳಿ, ಜೋಯಿಡಾ ೧೪ ಗ್ರಾಪಂಗಳ ೪೫, ಯಲ್ಲಾಪುರ ೧ ಗ್ರಾಪಂನ ೩ ಹಾಗೂ ದಾಂಡೇಲಿ ತಾಲೂಕಿನ ೧ ಗ್ರಾಪಂನ ೪ ಹಳ್ಳಿಗಳಲ್ಲಿ ನೀರಿನ ತೊಂದರೆ ಉಂಟಾಗಬಹುದು ಎಂದು ಜಿಲ್ಲಾಡಳಿತದಿಂದ ಅಂದಾಜಿಸಲಾಗಿದೆ. ನೀರಿನ ತೊಂದರೆ ಉಂಟಾದ ಹಳ್ಳಿಗಳ ಜನರಿಗೆ ತೊಂದರೆ ಉಂಟಾಗದಂತೆ ನೀರು ನೀಡಲು ತಾಲೂಕಾ ಆಡಳಿತದಿಂದ ಖಾಸಗಿ ಕೊಳವೆಬಾವಿಗಳನ್ನು ಹಾಗೂ ಸರಬರಾಜಿಗೆ ಖಾಸಗಿ ಟ್ಯಾಂಕರ್‌ಗಳನ್ನು ಗುರುತಿಸಿಕೊಳ್ಳಲಾಗಿದೆ.

ಕಳೆದ ಹಲವಾರು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಮಲೆನಾಡಿನ ತಾಲೂಕುಗಳನ್ನು ಕೂಡ ಕಾಡುತ್ತಿದೆ. ಪ್ರತಿವರ್ಷ ಲಕ್ಷಾಂತರ ರುಪಾಯಿ ನೀರು ಪೂರೈಕೆಗಾಗಿಯೇ ಸರ್ಕಾರದಿಂದ ವೆಚ್ಚ ಮಾಡಲಾಗುತ್ತಿದೆ. ಪ್ರತಿ ಬಾರಿಯು ಅದೇ ಹಳ್ಳಿಗಳಲ್ಲೇ ನೀರಿನ ಸಮಸ್ಯೆಯಾಗುತ್ತಿದೆ. ಮತ್ತೆ ಮತ್ತೆ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡಿ ಹಣವನ್ನು ದುಂದು ವೆಚ್ಚ ಮಾಡಲಾಗುತ್ತಿದೆ. ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಬೇಕಿದೆ.

ನಗರಸ್ಥಳೀಯ ಸಂಸ್ಥೆ

ಊರುವಾರ್ಡ್

ಅಂಕೋಲಾ೯

ಭಟ್ಕಳ೧೦

ಹಳಿಯಾಳ೦

ಹೊನ್ನಾವರ೦

ಕಾರವಾರ೬

ಕುಮಟಾ೮

ಮುಂಡಗೋಡ೦

ಸಿದ್ದಾಪುರ೫

ಶಿರಸಿ೦

ಜಾಲಿ೩

ಯಲ್ಲಾಪುರ೧

ದಾಂಡೇಲಿ೦

ಮಂಕಿ೧೧