ನಾವು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿಲ್ಲ: ಸಂಸದ ರಾಘವೇಂದ್ರ

KannadaprabhaNewsNetwork | Published : Apr 11, 2024 12:45 AM

ಸಾರಾಂಶ

ನಾವು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿಲ್ಲ. ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಹರಿಹರದಲ್ಲಿ ಪರೋಕ್ಷವಾಗಿ ಪಕ್ಷದ ಮುಖಂಡ ಕೆ.ಎಸ್. ಈಶ್ವರಪ್ಪರ ಬಂಡಾಯಕ್ಕೆ ಉತ್ತರ ನೀಡಿದ್ದಾರೆ.

- ಈಶ್ವರಪ್ಪರ ಬಂಡಾಯ ವಿಚಾರ ತಲೆಕೆಡಿಸಿಕೊಂಡಿಲ್ಲ ಎಂದು ಪ್ರತಿಕ್ರಿಯೆ

- ಹರಿಹರ ತಾಲೂಕು ಕಾಗಿನೆಲೆ ಕನಕ ಗುರು ಪೀಠದ ಶಾಖಾ ಮಠಕ್ಕೆ ಪ್ರಹ್ಲಾದ ಜೋಷಿ, ರಾಘವೇಂದ್ರ ಭೇಟಿ

- ಸತ್ಕರಿಸಿದ ಬಿಜೆಪಿ ಮುಖಂಡರಿಗೆ ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಾದ ಕನ್ನಡಪ್ರಭ ವಾರ್ತೆ ಹರಿಹರ

ನಾವು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿಲ್ಲ. ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಪರೋಕ್ಷವಾಗಿ ಪಕ್ಷದ ಮುಖಂಡ ಕೆ.ಎಸ್. ಈಶ್ವರಪ್ಪರ ಬಂಡಾಯಕ್ಕೆ ಉತ್ತರ ನೀಡಿದರು.

ತಾಲೂಕಿನ ಬೆಳ್ಳೂಡಿ ಸಮೀಪದ ಕಾಗಿನೆಲೆ ಕನಕಗುರು ಪೀಠದ ಶಾಖಾ ಮಠಕ್ಕೆ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಭೇಟಿ ನೀಡಿ, ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದು, ಅನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಗಿನೆಲೆ ಶ್ರೀಗಳ ಜನ್ಮದಿನ ಹಿನ್ನೆಲೆ ಮಠಕ್ಕೆ ಭೇಟಿ ನೀಡಿದ್ದೇನೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಪ್ರತಿ ಚುನಾವಣಾ ಸಂದರ್ಭದಲ್ಲೂ ನಮಗೆ ಸವಾಲುಗಳು ಇದ್ದೇ ಇರುತ್ತವೆ. ಹೀಗಾಗಿ, ಮೊದಲೇ ಶಸ್ತ್ರ ಅಭ್ಯಾಸ ಮಾಡಿದ್ದೇವೆ, ಈಶ್ವರಪ್ಪರ ಬಂಡಾಯದ ವಿಚಾರ ತಲೆಕೆಡಿಸಿಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದರು.

ಕುದುರೆಗೆ ಜೀನು ಕಟ್ಟಿದಂತೆ ನಾನು ಕ್ಷೇತ್ರದ ಅಭಿವೃದ್ಧಿ, ಚುನಾವಣೆ, ಮೋದಿಜಿ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗ್ತಾ ಇದ್ದೇನೆ. ಈಶ್ವರಪ್ಪ ಬಂಡಾಯ ವಿಚಾರದ ಬಗ್ಗೆ ಏನೂ ಮಾತನಾಡಲ್ಲ. ಪಾಸಿಟಿವ್ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ, ವಿಶ್ವಾಸ ಇದೆ, ಗೆದ್ದೆ ಗೆಲ್ಲುತ್ತೇವೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಶಿರಹಟ್ಟಿ ಫಕೀರೇಶ್ವರ ಗುರುಪೀಠದ ದಿಂಗಾಲೇಶ್ವರ ಶ್ರೀಗಳು ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಗೆಗಿನ ಪ್ರಶ್ನೆಗೆ, ಈ ಕುರಿತು ಪ್ರತಿಕ್ರಿಯೆ ನೀಡಲ್ಲ. ದಿಂಗಾಲೇಶ್ವರ ಶ್ರೀಗಳು ಏನೇ ಹೇಳಿದರೂ ಅದು ನನಗೆ ಆಶೀರ್ವಾದ ಎಂದು ತಿಳಿಯುವೆ ಎಂದರು.

ಮುಸ್ಲಿಂ ಲೀಗ್‌ನಿಂದಾಗಿ ಸ್ವಾತಂತ್ರ್ಯ ಪಡೆಯುವ ಸಂದರ್ಭ ದೇಶ ವಿಭಜನೆ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷವೂ ಅದೇ ಮಾರ್ಗದಲ್ಲಿ ಸಾಗುತ್ತಿರುವ ಅನುಮಾನ ಮೂಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟಗಳಿರಲಿಲ್ಲ. ಬದಲಿಗೆ ಮುಸ್ಲಿಂ ಲೀಗ್ ಧ್ವಜಗಳಿದ್ದವು. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಮಾನಸಿಕತೆ ಏನೆಂಬುದನ್ನು ಇದು ಬಿಂಬಿಸುತ್ತದೆ. ಮತ ಪಡೆಯಲು ದೇಶವನ್ನು ಮುಸ್ಲಿಂ ಲೀಗ್‌ಗೆ ಕಾಂಗ್ರೆಸ್ಸಿನವರು ಒಪ್ಪಿಸುತ್ತಿದ್ದಾರೆಂದು ಆರೋಪಿಸಿದರು.

- - - -೧೦ಎಚ್‌ಆರ್‌ಆರ್೨:

ಹರಿಹರದ ಬೆಳ್ಳೂಡಿ ಸಮೀಪದ ಕಾಗಿನೆಲೆ ಕನಕ ಗುರು ಪೀಠದ ಶಾಖಾ ಮಠಕ್ಕೆ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಿವಮೊಗ್ಗ ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ, ನಿರಂಜನಾನಂದಪುರಿ ಶ್ರೀಗಳನ್ನು ಸತ್ಕರಿಸಿ, ಆಶೀರ್ವಾದ ಪಡೆದರು.

Share this article