ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ವೀಕೆಂಡ್ ಹಿನ್ನೆಲೆಯಲ್ಲಿ ಎರಡು ದಿನ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದು, ಅಂದಾಜು ಒಂದೂವರೆ ಲಕ್ಷಕ್ಕೂ ಅಧಿಕ ದೇಶ, ವಿದೇಶಿ ಪ್ರವಾಸಿಗರು ಹಂಪಿ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ.
ಶನಿವಾರ 90 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರೆ, ಭಾನುವಾರ 60 ಸಾವಿರಕ್ಕೂ ಅಧಿಕ ಪ್ರವಾಸಿಗರು ಧಾವಿಸಿದ್ದರು. ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಪ್ರವಾಸೋದ್ಯಮ ನೆಚ್ಚಿರುವ ಹೊಟೇಲ್, ರೆಸಾರ್ಟ್, ಹೋಂ ಸ್ಟೇ ಮಾಲೀಕರು ಮತ್ತು ಕಾರ್ಮಿಕರಿಗೂ ಅನುಕೂಲ ಆಗಿದೆ. ಇನ್ನೊಂದೆಡೆ ಪ್ರವಾಸಿ ಮಾರ್ಗದರ್ಶಿಗಳು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಹಂಪಿ ಚರಿತ್ರೆ ಕುರಿತು ಪುಸ್ತಕ ಮಾರಾಟ ಮಾಡುವವರಿಗೂ ಅನುಕೂಲ ಆಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕೂಡ ಸೃಷ್ಟಿ ಆಗುತ್ತಿದೆ.ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಾಲಯ, ಎದುರು ಬಸವಣ್ಣ ಮಂಟಪ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪ, ಶ್ರೀಕೃಷ್ಣ ದೇವಾಲಯ, ಹಜಾರ ರಾಮ ದೇವಾಲಯ, ಮಹಾನವಮಿ ದಿಬ್ಬ, ಅರಮನೆ ಅಧಿಷ್ಠಾನ, ಪಾನ್ ಸುಪಾರಿ ಬಜಾರ್, ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ಕೋದಂಡ ರಾಮ ದೇವಾಲಯ, ಕಮಲ ಮಹಲ್, ಆನೆಲಾಯ, ರಾಜರ ರಹಸ್ಯ ಸಭಾಗೃಹ, ಪುಷ್ಕರಣಿಗಳು, ಪುರಂದರ ದಾಸರ ಮಂಟಪ, ರಾಜರ ತುಲಾಭಾರ, ಮಾಲ್ಯವಂತ ರಘುನಾಥ ದೇವಾಲಯ, ವಿಜಯ ವಿಠಲ ದೇವಾಲಯ, ಸಪ್ತಸ್ವರ ಮಂಟಪ, ಕಲ್ಲಿನತೇರು, ಅಲೆಕ್ಸಾಂಡರ್ ಗ್ರೀನ್ ಲಾ ತನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿರುವ ಮರುಭೂಮಿಯಲ್ಲಿ ದೊರೆಯುವ ಗಿಡವೊಂದನ್ನು ವೀಕ್ಷಿಸಿ ಪ್ರವಾಸಿಗರು ಖುಷಿಯಾದರು.
ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್, ದರೋಜಿ ಕರಡಿಧಾಮ ಮತ್ತು ತುಂಗಭದ್ರಾ ಜಲಾಶಯವನ್ನೂ ಪ್ರವಾಸಿಗರು ವೀಕ್ಷಿಸಿದರು. ತುಂಗಭದ್ರಾ ಜಲಾಶಯಕ್ಕೆ ಪ್ರವಾಸಿಗರು ಬೆಳಗ್ಗೆ 7:30ರಿಂದಲೇ ಆಗಮಿಸಿದ್ದು, ವಿಶೇಷವಾಗಿತ್ತು.ಈ ವೇಳೆ ಕನ್ನಡಪ್ರಭದೊಂದಿಗೆ ಮಾತನಾಡಿದ ಪ್ರವಾಸಿಗರು, ಬಿಸಿಲು ಏರುವ ಮುನ್ನವೇ ತುಂಗಭದ್ರಾ ಜಲಾಶಯ ವೀಕ್ಷಿಸಿ, ಹಂಪಿ ಸ್ಮಾರಕಗಳನ್ನು ವೀಕ್ಷಿಸುತ್ತೇವೆ. ಹಂಪಿ ಪ್ರದೇಶವನ್ನು ಮೂರು ದಿನಗಳವರೆಗೆ ನೋಡಿದರೂ ಸಾಕಾಗುವುದಿಲ್ಲ, ನಿಜಕ್ಕೂ ಹಂಪಿ ಪ್ರವಾಸೋದ್ಯಮಕ್ಕೆ ಬಂದರೆ, ಬೋರ್ ಆಗುವುದಿಲ್ಲ ಎಂದು ಅಭಿಪ್ರಾಯಿಸಿದರು.
ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ವಿಜಯನಗರ ಎಸ್ಪಿ ಎಸ್. ಜಾಹ್ನವಿ ಸೂಕ್ತ ಬಂದೋಬಸ್ತ್ಗೆ ಪೊಲೀಸರನ್ನು ಕೂಡ ನಿಯೋಜನೆ ಮಾಡಿದ್ದರು. ಪ್ರವಾಸಿಗರಿಗೆ ತೊಂದರೆ ಆಗದಂತೆ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರು ಮತ್ತು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರವಾಸಿಗರು; ಪೊಲೀಸರ ಕಾರ್ಯವನ್ನೂ ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದರು.