ಬೇಲೂರು: ಬೇಲೂರಿಗೆ ಶುಕ್ರವಾರ ಆಗಮಿಸಿದ ಕನ್ನಡ ರಥವನ್ನು ಪಟ್ಟಣದ ವಿಷ್ಣುಸಮುದ್ರ ಕೆರೆಯ ಬಳಿ ರಥವನ್ನು ಬರಮಾಡಿಕೊಂಡು ಶಾಲಾ ಮಕ್ಕಳು, ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘದ ಮಹಿಳೆಯರ ಪೂರ್ಣಕುಂಭ ಹಾಗೂ ವಿವಿಧ ಕನ್ನಡಪರ ಸಂಘಟನೆ ಪ್ರಮುಖರೊಂದಿಗೆ ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಿಂದ ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಮೂಲಕ ತೆರಳಲಾಯಿತು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ೨೦೨೩ ನವೆಂಬರ್ ೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿಯಲ್ಲಿ ಚಾಲನೆ ನೀಡಿದ್ದರು. ನಾವು ಎಲ್ಲೇ ಇದ್ದರೂ ಕನ್ನಡಿಗರಾಗಿರಬೇಕು, ಮೈಸೂರು ರಾಜ್ಯವು ಕರ್ನಾಟಕವಾಗಿ ಮಾರ್ಪಾಡಾಗಿದ್ದು ಸರ್ವ ಭಾಷಿಗರು, ಧರ್ಮೀಯರು ಕನ್ನಡದ ಬಗ್ಗೆ ಗೌರವ ಕೊಡಬೇಕೆಂದರು.
ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕನ್ನಡ ನೆಲದಲ್ಲಿದ್ದುಕೊಂಡವರು ಕನ್ನಡ ಭಾಷೆಗೆ ಗೌರವ ಕೊಡಬೇಕು, ಇಲ್ಲಿದ್ದುಕೊಂಡು ಕನ್ನಡ ವಿರೋಧಿಯಾಗಿ ಕೆಲಸ ಮಾಡಿದರೆ ಸಂಘಟನೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.ಕಸಾಪ ಮಾಜಿ ಅಧ್ಯಕ್ಷ ಎಚ್.ಎಂ. ದಯಾನಂದ್, ಕಸಾಪ ಅಧ್ಯಕ್ಷ ಮಾ.ನ .ಮಂಜೇಗೌಡ ರಥ ಸ್ವಾಗತಕ್ಕೆ ಶುಭಕೋರಿದರು. ಶ್ರೀಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ದೇಗುಲದ ಪುರೋಹಿತರಾದ ಶ್ರೀನಿವಾಸಭಟ್ಟರ್ ತಂಡವರು ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ತಾ.ಪಂ.ಇಒ ವಸಂತ ಕುಮಾರ್, ಪುರಸಭೆ ಸದಸ್ಯ ಜಮಾಲುದ್ದೀನ್, ಪ್ರಭಾಕರ್, ಬಿಇಒ ರಾಜೇಗೌಡ, ಪುರಸಭೆ ಸಿಒ ಸುಜಯ ಕುಮಾರ್, ಕಸಾಪ ಅಧ್ಯಕ್ಷ ಮಂಜೇಗೌಡ, ಮ.ಶಿವಮೂರ್ತಿ, ಅನಂತರಾಜೇ ಅರಸು, ಕರವೇ ಅಧ್ಯಕ್ಷ ಚಂದ್ರಶೇಖರ್, ಕರವೇ ಪ್ರವೀಣ್ ಶೆಟ್ಟಿ ಬಣದ ಬೋಜೇಗೌಡ, ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳೆಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಅಧಿಕಾರಿ ವರ್ಗದವರು ಇದ್ದರು.