ವಸಂತಕುಮಾರ್ ಕತಗಾಲ ಕಾರವಾರ
ಬೇಡ್ತಿ-ವರದಾ ಯೋಜನೆ ಅತ್ಯಂತ ಅವೈಜ್ಞಾನಿಕ, ಪರಿಸರ ನಾಶ, ಅವ್ಯವಹಾರಿಕ ಯೋಜನೆಯಾಗಿದೆ. ಇದು ಪಶ್ಚಿಮ ಘಟ್ಟಕ್ಕೆ ಕಂಟಕ ತರಲಿದೆ ಎಂದು ತಜ್ಞರು, ಪರಿಸರವಾದಿಗಳು ಕಟುವಿಮರ್ಶೆ ಮಾಡಿದ್ದಾರೆ.ಬೇಡ್ತಿ-ವರದಾ ಯೋಜನೆ ವ್ಯಾಪ್ತಿ ಇರುವುದೇ ಬೇಡ್ತಿ ಮತ್ತು ಶಾಲ್ಮಲಾ ಕಣಿವೆ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಎಂಬುದು ವಿಶೇಷ ಸಂಗತಿ. ಇದು ವನ್ಯಜೀವಿ ಕಾಯಿದೆ ಅಡಿಯಲ್ಲಿ ಘೋಷಣೆ ಆಗಿದೆ. ಈ ಹಿಂದೆ 2013ರಲ್ಲಿ ಗಣೇಶಪಾಲ್ ಜಲವಿದ್ಯುತ್ ಯೋಜನೆ ರದ್ದಾಗಲು ಈ ಕಾಯಿದೆ ಅಂಶ ಪ್ರಮುಖ ಪಾತ್ರ ವಹಿಸಿತ್ತು. 2022ರ ಬೇಡ್ತಿ-ವರದಾ ಯೋಜನೆಗೆ ತಡೆ ನೀಡಲು ವನ್ಯಜೀವಿ ಸಂರಕ್ಷಿತ ಪ್ರದೇಶ ಆದೇಶ ಮುಖ್ಯ ಕಾರಣಗಳಲ್ಲಿ ಒಂದಾಗಿತ್ತು.
ಸಾವಿರ ಎಕರೆ ಬೆಟ್ಟ-ಅರಣ್ಯ ನಾಶ: ಬೇಡ್ತಿ-ವರದಾ ಯೋಜನೆ ಜಾರಿಯಿಂದ ನೀರಾವರಿ ಕಾಲುವೆ ಚಾನೆಲ್, ರಸ್ತೆ ಕಾಮಗಾರಿ, ವಿದ್ಯುತ್ ಮಾರ್ಗ ಗಳಿಂದ ಬೆಟ್ಟ-ಅರಣ್ಯ, ಗುಡ್ಡ, ಕಣಿವೆ ತುಂಡು ತುಂಡಾಗುತ್ತವೆ. ನಾಶವಾಗುತ್ತವೆ. ಭೂಕುಸಿತ ವ್ಯಾಪಕವಾಗುತ್ತದೆ. ಮಲೆನಾಡಿನಲ್ಲಿ ಜನಜೀವನ ಅಸಹಾಯಕ ಪರಿಸ್ಥಿತಿಗೆ ತಲುಪಲಿದೆ. ವನ್ಯಜೀವಿಗಳು ಅತಂತ್ರವಾಗಲಿವೆ. ವನ್ಯಜೀವಿಗಳ ಹಾವಳಿ ಮಲೆನಾಡಿಗರಿಗೆ ಇನ್ನೂ ಗಂಭೀರ ಸ್ಥಿತಿ ತರಲಿದೆ.2021ರಲ್ಲಿ ಸರ್ಕಾರವೇ ರಚಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಉ.ಕ. ಜಿಲ್ಲೆಯ ಬೇಡ್ತಿ ಶಾಲ್ಮಲಾ ಕಣಿವೆಗಳನ್ನು ಸೂಕ್ಷ್ಮಭೂಕುಸಿತ ಸಂಭಾವ್ಯಪ್ರದೇಶಗಳು ಎಂದು ಗುರುತಿಸಿದೆ. ಅಲ್ಲದೆ ಈ ನಾಲ್ಕೂ ವರ್ಷಗಳಲ್ಲಿ ಇಲ್ಲಿ ಭಾರೀ ಭೂಕುಸಿತಗಳು ಘಟಿಸಿವೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ಇಡೀ ಉ.ಕ. ಜಿಲ್ಲೆ ಬೃಹತ್ ಯೋಜನೆಗಳ ಭಾರದಿಂದ ನಲುಗಿದೆ. 2023-24ರಲ್ಲೇ ಈ ಬಗ್ಗೆ ಎನ್.ಡಬ್ಲ್ಯೂ.ಡಿ.ಎ. ಜತೆ ಪರಿಸರ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೇ ಹೊಸ ಯೋಜನೆ ಪ್ರಸ್ತಾಪ ಬೇಡವೆಂದು ವಾದಿಸಲಾಗಿತ್ತು. ಇದನ್ನು ಒಪ್ಪಿ 2004ರಲ್ಲಿ ಬೇಡ್ತಿ-ವರದಾ ಯೋಜನೆ ನಿಂತಿತ್ತು.
2014ರಲ್ಲಿ ಪಶ್ಚಿಮಘಟ್ಟದ ಕಾರ್ಯಪಡೆ-ಜೀವವೈವಿಧ್ಯ ಮಂಡಳಿ ಪ್ರಾಯೋಜನೆ ಮಾಡಿರುವ ಭಾರತೀಯ ವಿಜ್ಞಾನ ಸಂಸ್ಥೆ ನೀಡಿರುವ ವರದಿ ಪ್ರಕಟವಾಗಿದೆ. ಈ ಪ್ರದೇಶದಲ್ಲಿ ಪರಿಸರ ಧಾರಣಾ ಸಾಮರ್ಥ್ಯ ಮುಗಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಹೊಸ ಬೃಹತ್ ಅರಣ್ಯ ನಾಶ ಯೋಜನೆಗಳು ಬೇಡವೇ ಬೇಡ ಎಂದು ಐಐಎಸ್ಸಿ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆಯ ಬೃಹತ್ ಯೋಜನೆಗೆ ಉಕ ಜಿಲ್ಲೆಯಲ್ಲಿ ಅವಕಾಶ ಬೇಡವೇ ಬೇಡ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಘಟ್ಟದಲ್ಲಿ ಎತ್ತಿನ ಹೊಳೆ ತಿರುವು ಯೋಜನೆ 12 ವರ್ಷಗಳಿಂದ ನಿರ್ಮಾಣವಾಗುತ್ತಿದೆ. ರಾಜ್ಯ ಸರ್ಕಾರ ₹15 ಸಾವಿರ ಕೋಟಿ ವೆಚ್ಚ ಮಾಡಿದೆ. ಇದೊಂದು ವಿಫಲ ನಿರಾವರಿ ಯೋಜನೆ ಆಗಿದೆ. ಪುನಃ ನದಿ ತಿರುವು ಯೋಜನೆ ಕೈಗೊಳ್ಳುವ ಹುಚ್ಚು ಸಾಹಸ ಮಾಡಬೇಡಿ ಎಂದು ಸರ್ಕಾರಕ್ಕೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಈಗಾಗಲೆ ಸಮಿತಿ ಗೌರವಾಧ್ಯಕ್ಷ ಗಂಗಾಧರೇಂದ್ರ ಸರಸ್ವತಿ ಶ್ರೀಗಳಿಗೆ ಬೇಡ್ತಿ-ವರದಾ ಯೋಜನೆಯ ಸ್ವತಂತ್ರ ಪರಿಸರ ಪರಿಣಾಮ ವರದಿಯನ್ನು ವೃಕ್ಷಲಕ್ಷ ಆಂದೋಲನ ನೀಡಿದೆ.
1990ರ ದಶಕದಲ್ಲಿ ಕೆಪಿಸಿ ಬೇಡ್ತಿ-ತಟ್ಟಿಹಳ್ಳ ತಿರುವು ಯೋಜನೆ ಬೇಡ್ತಿಯಲ್ಲಿ ನೀರಿಲ್ಲದ ಕಾರಣ ನಿಂತಿದೆ. ರಾಜ್ಯ ನೀರಾವರಿ ಇಲಾಖೆ ಹಾಗೂ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯವರು (ಎನ್.ಡಬ್ಲ್ಯೂ.ಡಿ.ಎ.) ನೀಡಿರುವ ಬೇಡ್ತಿ ನದಿ ನೀರಿನ ಲಭ್ಯತೆ ಅಂಕಿ-ಸಂಖ್ಯೆ ತಪ್ಪಿದೆ. 20 ಟಿಎಂಸಿ ನೀರು ಬೇಡ್ತಿ ವರದಾ ಯೋಜನೆಗೆ ಲಭ್ಯವಾಗಲಿದೆ ಎಂಬ ಮಾಹಿತಿ ವಾಸ್ತವಕ್ಕೆ ದೂರವಾದ ತಪ್ಪು ಮಾಹಿತಿ ಆಗಿದೆ. ರಾಜ್ಯ ನೀರಾವರಿ ಇಲಾಖೆ ತಪ್ಪು ಮಾಹಿತಿ ನೀಡಿದೆ ಎಂದು ತಜ್ಞರು ಆಪಾದಿಸಿದ್ದಾರೆ. ಈ ಯೋಜನೆ ವಿರುದ್ಧ ಪರಿಸರವಾದಿಗಳು, ತಜ್ಞರು, ವಿಜ್ಞಾನಿಗಳು ಹಾಗೂ ನದಿಪಾತ್ರದ ಜನತೆ ತಿರುಗಿ ಬೀಳುವ ಸಾಧ್ಯತೆ ಹೆಚ್ಚಿದೆ.