ಕನ್ನಡ ಸಾಹಿತ್ಯ ಓದಿದಾಗ, ಕನ್ನಡ ಕಲೆಯನ್ನು ಬೆಂಬಲಿಸಿದಾಗ ಮಾತ್ರ ಕನ್ನಡ ಭಾಷೆ ಬದುಕುತ್ತದೆ ಎಂದು ಟಿ ಪಿ ರಮೇಶ್ ಹೇಳಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ನಾವು ಕನ್ನಡದಲ್ಲಿ ಮಾತನಾಡಿದಾಗ, ಕನ್ನಡದಲ್ಲಿ ಬರೆದಾಗ, ಕನ್ನಡದ ಸಾಹಿತ್ಯ ಓದಿದಾಗ, ಕನ್ನಡದ ಕಲೆಯನ್ನು ಬೆಂಬಲಿಸಿದಾಗ ಮಾತ್ರ ಕನ್ನಡ ಭಾಷೆ ಬದುಕುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು. ಸಂತ ಜೋಸೆಫರ ವಿದ್ಯಾ ಸಂಸ್ಥೆ ಮತ್ತು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಸಂಭ್ರಮ- 2025 ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.ಕನ್ನಡ ಅತೀ ಪ್ರಾಚೀನ ಭಾಷೆಯಾಗಿದೆ. ತರ್ಕಬದ್ಧಭಾಷೆಯೂ ಕೂಡ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡಿಗರು ಕನ್ನಡವನ್ನು ಹೆಮ್ಮೆಯಿಂದ ಮಾತನಾಡಬೇಕು. ಪರಭಾಷಿಕರಿಗೆ ಕನ್ನಡವನ್ನು ಮಾತನಾಡುವಂತೆ ಹೇಳಿಕೊಡಬೇಕು ಎಂದು ಹೇಳಿದರು. ಕನ್ನಡ ನಮ್ಮ ಮಾತೃಭಾಷೆ, ಹೃದಯದ ಭಾಷೆಯಾಗಿದೆ. ಕನ್ನಡ ಅನ್ನಕೊಡುವ ಭಾಷೆ, ಆದರೂ ಇತರ ಭಾಷೆಯನ್ನು ಕಲಿಯಬೇಕು. ಗೌರವಿಸಬೇಕು ಎಂದು ಕಿವಿ ಮಾತು ಹೇಳಿದರು. ಭಾರತಾಂಬೆ ತಾಯಿಯಾದರೆ ಕನ್ನಡಾಂಭೆಯನ್ನು ಮಗಳಾಗಿ ಗೌರವಿಸಬೇಕು.ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಉದ್ಘಾಟಿಸಿ, ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಕನ್ನಡ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕೃಷ್ಣಮೂರ್ತಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಒತ್ತಿ ಹೇಳಿದರು. ಕನ್ನಡವನ್ನು ದಿನನಿತ್ಯದ ಬದುಕಿನ ಭಾಷೆಯಾಗಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.ಸಂತ ಜೋಸೆಫ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕನ್ನಡದ ಮೌಲ್ಯಗಳನ್ನು ಕಲಿಸುವಲ್ಲಿ ಶಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಕೆಲ ಮಕ್ಕಳಿಗೆ ಕನ್ನಡವನ್ನು ಓದಲು ಬರುವುದಿಲ್ಲ. ಪೋಷಕರು ಮಕ್ಕಳು ಕನ್ನಡವನ್ನು ಕಲಿಯುವಂತೆ ತಿಳಿಹೇಳಬೇಕು ಎಂದು ತಿಳಿಸಿದರು.ಹತ್ತನೆ ಮತ್ತು ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಪಡೆದ ಯು.ಎನ್. ಕುಶಿ, ಕೆ.ಎಸ್.ರೇಚನ, ಎಚ್.ಜೆ.ಸಹನ, ಎಚ್.ಪಿ.ದುರ್ಗಾಶ್ರಿ, ಧನ್ಯಶ್ರೀ, ಲಿಶ್ಮಾ ಡಯಾಸ್, ಜಾಹ್ನವಿ, ತನಿಶಾ ರೈ, ಎಸ್.ವೈ.ಹಿಮಾನಿ, ಮೆಹರೂಪ್, ಸಿ.ಎಲ್.ಡಿಂಪಲ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕ ಸಿ.ಎಲ್. ಸುಬ್ಬಯ್ಯ, ಸಾಹಿತಿ ಲಾವಣ್ಯ ಮೋಹನ್, ಧರ್ಮಗುರು ಅವಿನಾಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಬಿಇಒ ಎಂ. ಕೃಷ್ಣಪ್ಪ, ಸಾಹಿತಿ ಜಲಕಾಳಪ್ಪ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶೀಲಾ ಡಿಸೋಜ, ಕಸಾಪ ಕಾರ್ಯದರ್ಶಿ ಜ್ಯೋತಿ ಅರುಣ್, ಖಜಾಂಚಿ ದಿನೇಶ್, ಪ್ರಮುಖರಾದ ಮಂಜುನಾಥ್, ಶಿಕ್ಷಕಿ ಅನುರಾಧ ಮತ್ತಿತರ ಗಣ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.