ಧಾರವಾಡ: ಯುವಕರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ಬೆಳೆಸುವ ಸತ್ಕಾರ್ಯ ಸಂಸ್ಕಾರ ಭಾರತಿ ಮಾಡುತ್ತಲಿದೆ ಎಂದು ಖ್ಯಾತ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಹೇಳಿದರು.
ಸಂಗೀತ ಯಾನ ಕೃತಿಯನ್ನು ಪರಿಚಯಿಸಿದ ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ, ಸಂಗೀತ ಸಾಧಕರ ಯಾನದಲ್ಲಿ ಆಯಾ ಕಾಲದ ಜ್ಞಾನ ಮತ್ತು ಪರಂಪರೆಯನ್ನು ಪ್ರಸ್ತುತ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಗುರುತರವಾದ ಜವಾಬ್ದಾರಿಯನ್ನು ಸುರೇಶ ಗುದಗನವರ ನಿಷ್ಠೆಯಿಂದ ಮಾಡಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ. ಪಿ.ಜಿ. ಕೆಂಪಣ್ಣವರ ಹೆಜ್ಜೆ ಗುರುತು ಕೃತಿಯನ್ನು ಪರಿಚಯಿಸಿದರು. ನೋವಿನಲ್ಲೂ ನಲಿವನ್ನು ಕಂಡ ಮಹಿಳಾ ಸಾಧಕಿಯರ ಅಪೂರ್ವ ಅರವತ್ತು ಚಿತ್ರಣಗಳು ನಿಜಕ್ಕೂ ಇಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶಿ ಎಂದರು.ಮುಖ್ಯ ಅತಿಥಿಯಾಗಿ ಉದ್ಯಮಿ ಶಿವಶಂಕರ ಕೆಂಗಾನೂರ, ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ಮತ್ತು ಲೇಖಕ ಸುರೇಶ ಗುದಗನವರ ಮಾತನಾಡಿದರು.ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಗುರುರಾಜ ಜಮಖಂಡಿ ಮತ್ತು ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾದ ಡಾ. ಮೃತ್ಯುಂಜಯ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು.