ವಸಂತಕುಮಾರ ಕತಗಾಲ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಲೀಡ್ ಪಡೆದಿದೆ. ಕಾಂಗ್ರೆಸ್ ಶಾಸಕರಿರುವ 5 ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಗಳಿಕೆಯಲ್ಲಿ ಬಿಜೆಪಿಯದ್ದೆ ನಾಗಾಲೋಟ. ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್ನತ್ತ ಮುಖ ಮಾಡಿದ್ದರೂ ಅಲ್ಲೂ ಬಿಜೆಪಿ ಲೀಡ್ ಗಳಿಸಿದೆ. ದೇಶಪಾಂಡೆ ಮಾತ್ರ ಪ್ರತಿಕ್ರಿಯೆ:
ಬಿಜೆಪಿ ಶಾಸಕರಿರುವ ಖಾನಾಪುರ ಹಾಗೂ ಕುಮಟಾದಲ್ಲಿ ಸಹಜವಾಗಿಯೇ ಕಾಗೇರಿ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಮಾತ್ರ ಸೋಲಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೆ ಉಳಿದ ಯಾವ ಶಾಸಕರಾಗಲಿ, ಮುಖಂಡರಾಗಲಿ ಪ್ರತಿಕ್ರಿಯಿಸುವ ಗೋಜಿಗೂ ಹೋಗಿಲ್ಲ.ಸೈಲ್ ಕ್ಷೇತ್ರದಲ್ಲೆ ಹೆಚ್ಚು ಲೀಡ್: ಸತೀಶ ಸೈಲ್ ಶಾಸಕರಾಗಿರುವ ಕಾರವಾರ ಕ್ಷೇತ್ರದಲ್ಲಿ ಕಾಗೇರಿ ಅವರಿಗೆ ಅತಿ ಹೆಚ್ಚು ಲೀಡ್ ಅಂದರೆ 65428 ಮತಗಳು ಬಂದಿವೆ. ವರ್ಷದ ಹಿಂದಷ್ಟೇ ಗೆದ್ದು ಬಂದಿದ್ದ ಸತೀಶ ಸೈಲ್ಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಸೋಲಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭೀಮಣ್ಣ ನಾಯ್ಕ ಪ್ರತಿನಿಧಿಸುವ ಶಿರಸಿ ಕ್ಷೇತ್ರದಲ್ಲಿ 39928 ಮತಗಳ ಮುನ್ನಡೆ ಕಾಗೇರಿ ಅವರಿಗೆ ದೊರಕಿದೆ. ಭೀಮಣ್ಣ ನಾಯ್ಕ ಸಹ ಈ ಮುನ್ನಡೆ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ. ಪ್ರಚಾರ ಕಾರ್ಯದಲ್ಲಿ ಅಂಜಲಿ ನಿಂಬಾಳ್ಕರ್ ಅವರೊಂದಿಗೆ ಮುಂಚೂಣಿಯಲ್ಲಿದ್ದ ಆರ್.ವಿ. ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ಕ್ಷೇತ್ರದಲ್ಲೂ ಕಾಗೇರಿ 28880 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದರಿಂದ ಯಾರೊಬ್ಬರತ್ತ ಬೊಟ್ಟು ಮಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಶಾಸಕರು ಇದೇ ಧೈರ್ಯದಲ್ಲಿರುವಂತೆ ಕಂಡುಬರುತ್ತಿದೆ.
ಸೋಲಿನಿಂದ ನಿರಾಶೆ: ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಲೀಡ್ ದೊರಕಿರುವುದು ಅಚ್ಚರಿಗೆ ಕಾರಣವಾಗಿದೆ. ಸೋಲಿನಿಂದ ನಿರಾಶರಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ತಿಳಿಸಿದರು.