ಜಿಲ್ಲಾಡಳಿತ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ
ಗೋಡ್ಸೆ ಮಹಾತ್ಮ ಗಾಂಧಿಜೀ ದೇಹಕ್ಕೆಗುಂಡು ಹೊಡೆದ. ಆದರೆ, ಗಾಂಧೀಜಿ ಅವರ ತತ್ವಕ್ಕೆ ಗುಂಡು ಹೊಡೆದವರಾರು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಗಾಂಧೀಜಿ ಅನುಯಾಯಿಗಳಾಗಿ, ರಾಜಕೀಯ ವಾರಸುದಾರರಾಗಿ, ಅವರ ತತ್ವಗಳನ್ನು ತಮ್ಮ ಬದುಕಿನಲ್ಲಿ, ರಾಜಕಾರಣದಲ್ಲಿ ಅಳವಡಿಸಿ ಕೊಳ್ಳಲಿಲ್ಲವೋ ಅವರೆಲ್ಲ ಗಾಂಧಿ ತತ್ವಕ್ಕೆ ಗುಂಡು ಹೊಡೆದಿದ್ದಾರೆ. ಸತ್ಯದ ಬದಲು ಅಸತ್ಯ, ಪ್ರಾಮಾಣಿಕತೆಯ ಬದಲು ಅಪ್ರಾಮಾಣಿಕತೆ, ಸರಳತೆಯ ಬದಲು ಐಷಾರಾಮ, ಸಾರ್ವಜನಿಕ ಹಿತದ ಬದಲು ಸ್ವಜನ ಪಕ್ಷಪಾತ ಅನುಸರಿಸಿದ್ದಾರೋ, ಅವರೆಲ್ಲರೂ ಗಾಂಧಿ ತತ್ವಗಳಿಗೆ ಗುಂಡು ಹೊಡೆದಿದ್ದಾರೆ ಎಂದರು.ಗಾಂಧೀಜಿ ಅವರ ಸಂದೇಶಗಳು, ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಅವು ಮುಂದೆಯೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಹೇಳಿದರು. ಗಾಂಧೀಜಿಗೆ ಪತ್ರಕರ್ತರು ನಿಮ್ಮ ಸಂದೇಶ ಏನೆಂದು ಪ್ರಶ್ನೆ ಮಾಡಿದ್ದಾಗ ಗಾಂಧೀಜಿ ‘ನನ್ನ ಜೀವನವೇ ನನ್ನ ಸಂದೇಶ’ ಎಂದಿದ್ದರು. ಬಹುತೇಕ ದಾರ್ಶನಿಕರು ರಾಜಕಾರಣಿಗಳು ಸಾಮಾನ್ಯವಾಗಿ ಅವರ ಹೇಳಿಕೆ ಅಥವಾ ಸಂದರ್ಭ ವನ್ನು ಬಳಸಿಕೊಳ್ಳುತ್ತೇವೆ. ಆದರೆ ಗಾಂಧೀಜಿ ತಮ್ಮ ಬದುಕನ್ನೇ ಸಂದೇಶವಾಗಿಸಿದ್ದರು.
ಹುತಾತ್ಮ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಒಳಾವರಣದ ಉದ್ಯಾನವನದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ನೆನಪಿ ನಂಗಳದಲ್ಲಿ ಶುಕ್ರವಾರ ಹುತಾತ್ಮರ ದಿನಾಚರಣೆ ನಡೆಯಿತು.
ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದ ನಂತರ ಟಿಎಂಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಸುರೇಂದ್ರ ನಾಯಕ್ ಮತ್ತು ಲಾಲಿತ್ಯ ತಂಡ ಗಾಂಧೀಜಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ ಮತ್ತಿತರ ಭಜನೆಗಳನ್ನು ಹಾಡಿದರು.ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಚಿಕ್ಕಮಗಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್ಸ್ವಾಮಿ, ಕಲಾ ಸಂಘದ ಅಧ್ಯಕ್ಷ ಮೋಹನ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ. ಮಂಜುನಾಥ ಜೋಷಿ, ಮುಖಂಡರಾದ ರಾಧಾ ಸುಂದ್ರೇಶ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಮೊದಲಾದವರಿದ್ದರು.ಫೋಟೋ ಜಿಲ್ಲಾಧಿಕಾರಿಳ ಕಚೇರಿ ಉದ್ಯಾನವನದಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಎಂ.ಸಿ.ಶಿವಾನಂದಸ್ವಾಮಿ, ಎಂ.ಮಲ್ಲೇಶ್ಸ್ವಾಮಿ, ಮೋಹನ್, ಪಿ.ಮಂಜುನಾಥ ಜೋಷಿ, ರಾಧಾ ಸುಂದ್ರೇಶ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಇದ್ದರು.