ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?

KannadaprabhaNewsNetwork |  
Published : Feb 12, 2026, 03:30 AM IST
ಅಥಣಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸಾರಿಗೆ ವ್ಯವಸ್ಥೆ ದೊರೆಯದೆ ಸಂಕಷ್ಟ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಬಸ್‌ ಸಿಕ್ಕರೂ ಬಸ್‌ ಭರ್ತಿಯಾಗಿ ನೇತಾಡುತ್ತಾ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿದ್ದು ಗೊತ್ತಿಲ್ಲದಂತೆ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಣ್ಣಾಸಾಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸಾರಿಗೆ ವ್ಯವಸ್ಥೆ ದೊರೆಯದೆ ಸಂಕಷ್ಟ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಬಸ್‌ ಸಿಕ್ಕರೂ ಬಸ್‌ ಭರ್ತಿಯಾಗಿ ನೇತಾಡುತ್ತಾ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿದ್ದು ಗೊತ್ತಿಲ್ಲದಂತೆ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿ ಸಾರಿಗೆ ಘಟಕದ ಅಧಿಕಾರಿಗಳು ತಾಲೂಕಿನ ವಿವಿಧ ಗ್ರಾಮಾಂತರ ಪ್ರದೇಶಗಳ ಮಾರ್ಗದಲ್ಲಿ ಪ್ರತಿನಿತ್ಯ ಓಡಿಸುವ ಸಾರಿಗೆ ಬಸ್‌ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಮಯ ಮತ್ತು ಮಾರ್ಗವನ್ನು ಹೊಂದಿಸದೇ ಇರುವುದರಿಂದ ನಿತ್ಯ ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿ ಅನುಭವಿಸಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮೇಲಿಂದ ಮೇಲೆ ವಿದ್ಯಾರ್ಥಿಗಳು, ಪೋಷಕರು, ಮಹಿಳೆಯರು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸೂಕ್ತ ಬಸ್‌ ಸೌಲಭ್ಯಕ್ಕೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಪ್ರಯೋಜನಕ್ಕೆ ಬಾರದಾಗಿದೆ.

ಅಥಣಿ ತಾಲೂಕಿನ ಐನಾಪುರ ಮಾರ್ಗದಲ್ಲಿ ತಂಗಡಿ, ಶಿನಾಳ, ಹುಲಗಬಾಳಿ ಗ್ರಾಮಗಳಿಗೆ ಮತ್ತು ಖಿಳೇಗಾವಿ ಮಾರ್ಗದಲ್ಲಿನ ಪಾರ್ಥನಹಳ್ಳಿ, ಗುಂಡಿವಾಡಿ, ಬಳ್ಳಿಗೇರಿ ಮತ್ತು ಮಲಬಾದ, ಅನಂತಪುರ, ಕೊಟ್ಟಲಗಿ ಮಾರ್ಗದಲ್ಲಿನ ಯಕಂಚಿ, ಎಲಡಗಿ, ಅಡಹಳ್ಳಿ, ಕೋಹಳ್ಳಿ, ಐಗಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳಿಗೆ, ಶಿರಹಟ್ಟಿ ಮಾರ್ಗದಲ್ಲಿನ ಗ್ರಾಮಗಳಿಗೆ ಸಾರಿಗೆ ಬಸ್‌ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ-ಕಾಲೇಜಿನ ತರಗತಿಗಳಿಗೆ ತೆರಳಲಾಗದೇ, ಸಮಯಕ್ಕೆ ಸರಿಯಾಗಿ ಮನೆಗೂ ಹೋಗಲಾಗದ ತೊಂದರೆ ಅನುಭವಿಸುತ್ತಿದ್ದಾರೆ.

ಮಹಿಳಾ ಪ್ರಯಾಣಿಕರೇ ಹೆಚ್ಚು:

ಸರ್ಕಾರ ಗ್ಯಾರಂಟಿ ಯೋಜನೆ ಆರಂಭಿಸಿದ ನಂತರ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ, ಪುರುಷ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳಲ್ಲಿ ಆಸನವೇ ಸಿಗದಂತಾಗಿದೆ. ಬಸ್‌ನಲ್ಲಿ ಪ್ರಯಾಣಿಸಬೇಕಾದರೆ ಪ್ರಾಣದ ಹಂಗು ತೊರೆದು ಬಾಗಿಲಿಗೆ ನೇತಾಡಿಕೊಂಡು ಪ್ರಯಾಣಿಸಬೇಕು. ಇಂತಹ ದೃಶ್ಯಗಳು ಸಾಮಾನ್ಯವಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಜನರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಥಣಿ ಸಾರಿಗೆ ಘಟಕದಲ್ಲಿ ಬಸ್‌ಗಳ ಕೊರತೆ ಇದ್ದು, ಹುಬ್ಬಳ್ಳಿ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಕಾಗವಾಡ ಶಾಸಕ ರಾಜು ಕಾಗೆ ಅವರು ಈ ಘಟಕಕ್ಕೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು. ಘಟಕ ವ್ಯವಸ್ಥಾಪಕರು ಕೂಡ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ನೊಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಮಹಿಳಾ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

ಗೂಡ್ಸ್‌ ವಾಹನಗಳಲ್ಲಿ ಪ್ರಯಾಣ:

ಗ್ರಾಮೀಣ ಭಾಗದಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಅಥಣಿ ಪಟ್ಟಣಕ್ಕೆ ಆಗಮಿಸುತ್ತಾರೆ. ಸಕಾಲಕ್ಕೆ ಬಸ್ ಸಿಗದಿದ್ದಾಗ ಅನಿವಾರ್ಯವಾಗಿ ಗೂಡ್ಸ್‌ ವಾಹನಗಳಲ್ಲಿ ಒಬ್ಬರ ಮೇಲೊಬ್ಬರು ಕುಳಿತು, ನಿಂತುಕೊಂಡು ಪ್ರಯಾಣಿಸಬೇಕಿದೆ. ಹಣ ನೀಡಿ, ಗೂಡ್ಸ್‌ ವಾಹನದಲ್ಲಿ ತೆರಳಬೇಕು. ಇಲ್ಲವೇ ಪಾದಯಾತ್ರೆ ಮಾಡಬೇಕಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

--------ಕೋಟ್‌.....

ನಮ್ಮ ಘಟಕದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂದು ಗ್ರಾಮಾಂತರ ಪ್ರದೇಶಗಳಿಗೆ ಬೆಳಗ್ಗೆ ಹಾಗೂ ಸಂಜೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಈಗ ಅಂತಹ ಸಮಸ್ಯೆಗಳೇನೂ ಇಲ್ಲ. ಎಲ್ಲ ಮಾರ್ಗಗಳಲ್ಲಿ ಎರಡೆರಡು ಬಸ್‌ ಕೇಳುತ್ತಾರೆ. ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ಪ್ರಯತ್ನಿಸಿದ್ದೇವೆ. ಸರ್ಕಾರಕ್ಕೆ ಹೆಚ್ಚುವರಿ ಬಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಹೊಸ ಬಸ್ ಬಂದ ನಂತರ ಅಗತ್ಯ ಮಾರ್ಗಗಳಲ್ಲಿ ಓಡಿಸಲಾಗುವುದು.

- ಎನ್.ಎಂ.ಕೇರಿ, ಅಥಣಿ ಘಟಕ ವ್ಯವಸ್ಥಾಪಕರು.

-----

ಕೋಟ್‌

ಬಸ್‌ ಕೊರತೆಯಿಂದ ಪ್ರತಿ ದಿನ ಕಾಲೇಜಿಗೆ ಸಕಾಲದಲ್ಲಿ ಹೋಗಿ ಬರುವುದು ಸಾಧ್ಯವಾಗುತ್ತಿಲ್ಲ. ನಮ್ಮ ಕಾಲೇಜಿನ ಪ್ರಾಚಾರ್ಯರಿಗೆ ಸಮಸ್ಯೆಯ ಬಗ್ಗೆ ಹೇಳಿದ್ದೇವೆ. ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಿ ಹೆಚ್ಚುವರಿ ಬಸ್‌ಗಳನ್ನು ಬಿಡುವ ವ್ಯವಸ್ಥೆ ಮಾಡಬೇಕು.

- ಭುವನೇಶ್ವರಿ, ವಿದ್ಯಾರ್ಥಿನಿ, ತಂಗಡಿ.

-------------

ಅಥಣಿ ಸಾರಿಗೆ ಘಟಕದಿಂದ ಹೆಚ್ಚುವರಿ ಬಸ್‌ ಇಲ್ಲದ ಕಾರಣ ಶಾಲೆ, ಕಾಲೇಜು ಬಿಟ್ಟ ನಂತರ ಮಕ್ಕಳ ಪರದಾಟ ಹೇಳದಂತಾಗಿದೆ. ಬಸ್‌ಗಳ ಕೊರತೆಯಿಂದ, ಖಾಸಗಿ ವಾಹನಗಳಿಗೆ ಪ್ರತಿದಿನ ಹಣ ನೀಡಿ ಪ್ರಯಾಣಿಸಲಾಗದೇ ಅನೇಕ ವಿದ್ಯಾರ್ಥಿಗಳು ಬಸ್‌ಗಳಿಗೆ ಜೋತುಬಿದ್ದು ತೆರಳುತ್ತಾರೆ. ಅನೇಕ ವಿದ್ಯಾರ್ಥಿಗಳಿಗೆ ಬಸ್ ಸಿಗದೇ ಶಾಲಾ, ಕಾಲೇಜು ಬಿಟ್ಟ ನಂತರ ಬಹಳ ಹೊತ್ತಿಗೆ ನಡೆದುಕೊಂಡು ಗ್ರಾಮಗಳಿಗೆ ಬರುತ್ತಿದ್ದಾರೆ.

- ಭೀಮಪ್ಪ ಬಿರಾದಾರ, ಬಾಡಗಿ ಗ್ರಾಮಸ್ಥರು.

---------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ
ಅಭಿವೃದ್ಧಿ ಕಾರ್‍ಯಗಳಿಗೆ ಸ್ಥಳೀಯರ ಸಹಕಾರ ಅಗತ್ಯ: ಹರೀಶ್‌ ಪೂಂಜ