ಕನ್ನಡಪ್ರಭ ವಾರ್ತೆ ಉಡುಪಿ ಉಡುಪಿಯಲ್ಲಿ ಅ.15ರಂದು ನಡೆಸಲು ಉದ್ದೇಶಿಸಲಾಗಿರುವ ಮಹಿಷ ದಸರಾದಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಹಿಷ ದಸರಾ ನಡೆಸಲು ಬಿಡುವುದಿಲ್ಲ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಸಂಯೋಜಕ ಸುನೀಲ್ ಕೆ.ಆರ್ ತಿಳಿಸಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ, ನವರಾತ್ರಿ, ದಸರಾ ಹಬ್ಬಗಳು ಹಿಂದೂ ಸಂಸ್ಕೃತಿಯ ಭಾಗವಾಗಿವೆ. ಅಸುರ ಮನೋಭಾವನೆಯನ್ನು ನಿಗ್ರಹಿಸುವ ದೃಷ್ಟಿಕೋನದಿಂದ ನವರಾತ್ರಿ ಆಚರಿಸುತ್ತೇವೆ. ಆದರೆ ಉಡುಪಿಯಲ್ಲಿ ಕೆಲವು ನಗರ ನಕ್ಸಲರು ಸೇರಿಕೊಂಡು ಮಹಿಷಾ ದಸರಾ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಸುರ ಭಾವನೆಯನ್ನು ಬೆಳೆಸಬೇಕು, ಮಹಿಷಾಸುರನನ್ನು ವೈಭವೀಕರಿಸಬೇಕು ಎನ್ನವುದು ಅವರ ಉದ್ದೇಶವಾಗಿದೆ ಎಂದವರು ಆರೋಪಿದರು. ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಸರ್ಕಾರ ಈ ಮಹಿಷ ದಸರಾಕ್ಕೆ ಅನುಮತಿಯನ್ನು ನೀಡಬಾರದು. ಇದನ್ನು ಮೀರಿ ಮಹಿಷ ದಸರಾ ನಡೆಸಲು ಮುಂದಾದರೆ ಅದನ್ನು ಬಜರಂಗದಳ ತಡೆಯಲಿದೆ. ಸಮಸ್ತ ಹಿಂದೂ ಭಾಂದವರು ಈ ಮಹಿಷ ದಸರಾವನ್ನು ವಿರೋಧಿಸಬೇಕು ಎಂದವರು ಕರೆ ನೀಡಿದರು.