ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಸೇರಿದಂತೆ ಹಲವು ಭಾಗಗಳ ರೈತರ ಪಹಣಿಯಲ್ಲಿ ನೈಸ್ ಹೆಸರು ಬರುತ್ತಿದ್ದು, ಅದನ್ನು ತೆಗೆದು ಹಾಕುವ ಸಂಬಂಧ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ (ಕೈ) ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಬೆಂಗಳೂರು - ಮೈಸೂರು ನೈಸ್ ರಸ್ತೆಗಾಗಿ ಈ ಭಾಗದಲ್ಲಿಯೂ ನೂರಾರು ಎಕರೆ ಕೃಷಿ ಭೂಮಿ ಗುರುತಿಸಲಾಗಿತ್ತು. ಈಗಲೂ ಪಹಣಿಯಲ್ಲಿ ನೈಸ್ ಹೆಸರು ಬರುತ್ತಿರುವುದು ಗಮನಕ್ಕೆ ಬಂದಿದೆ ಎಂದರು.ಕೈಲಾಂಚ ಹೋಬಳಿಯ ವಿಭೂತಿಕೆರೆಯಲ್ಲಿ 131 ಎಕರೆ, ಲಕ್ಕೋಜನಹಳ್ಳಿ 152, ಶಿವನಹಳ್ಳಿ ಗ್ರಾಮದಲ್ಲಿ 58 ಎಕರೆ ಕೃಷಿ ಭೂಮಿ ಪಹಣಿ ನೈಸ್ ಹೆಸರಿನಲ್ಲಿ ಬರುತ್ತಿದೆ. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ಆ ಭೂಮಿ ಹಸ್ತಾಂತರ ಮಾಡಲಾಗಿತ್ತು. ಈಗ ರೈತರು ಅನುಭೋಗದಲ್ಲಿದ್ದರು ಮಾರಾಟ ಮಾಡಲು ಆಗುತ್ತಿಲ್ಲ. ಪಹಣಿಯಲ್ಲಿ ನೈಸ್ ಎಂದು ದಾಖಲಾಗಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಚರ್ಚೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆ ಎಂದು ಹೇಳಿದರು.
ಕಂದಾಯ ತೆಗೆದುಕೊಳ್ಳುವುದಷ್ಟೆ ಗ್ರಾಪಂ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಆಗಬಾರದು. ಜನರಿಗೆ ಸರ್ಕಾರದ ಸವಲತ್ತು ತಲುಪಿಸುವುದು ನಿಮ್ಮ ಕೆಲಸ. ಜನರಿಗೆ ಅನುಕೂಲವಾಗುವ ನರೇಗಾ ಯೋಜನೆ ಸದ್ಭಳಕೆ ಮಾಡಬಹುದಿತ್ತು, ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಿಲ್ಲ. ಕನಿಷ್ಠ 6 ಕೋಟಿ ರು.ಗಳಷ್ಟು ಖರ್ಚು ಮಾಡಲು ಅವಕಾಶವಿದೆ. ಮೊದಲು ಜನರಿಗೆ ಸಹಾಯ ಮಾಡುವುದನ್ನು ಕಲಿಯಿರಿ ಎಂದರು.ಗ್ರಾಮೀಣ ಮಕ್ಕಳಿಗೆ ಒಂದೇ ಸೂರಿನಡಿ ಹಲವು ಸವಲತ್ತು ಕೊಟ್ಟು ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಬನ್ನಿಕುಪ್ಪೆ ಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ. ವಿಭೂತಿಕೆರೆ ಮತ್ತು ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಶಾಲೆಗಳು ಈ ಹೈಟೆಕ್ ಶಾಲೆಗೆ ವಿಲೀನವಾಗಲಿವೆ. ತೆಂಗಿನಕಲ್ಲು, ಅವ್ವೇರಹಳ್ಳಿ ಕೆರೆ ತುಂಬಿಸುವ ಯೋಜನೆ ನಡೆಯುತ್ತಿದೆ.
ಶುದ್ದ ಕುಡಿಯುವ ನೀರಿನ ಘಟಕಗಳನ್ನು ಗ್ರಾಪಂ ಸುಪರ್ದಿಗೆ ತೆಗೆದುಕೊಂಡು ನಿರ್ವಹಣೆ ಮಾಡಬೇಕು. 15 ನೇ ಹಣಕಾಸು ಯೋಜನೆಯ ಅನುದಾನವನ್ನು ಬೋರ್ ವೆಲ್ ಕೊರೆಸಲು ಹಾಗೂ ಟ್ಯಾಂಕರ್ ನೀರು ಪೂರೈಕೆಗಾಗಿ ಮೀಸಲಿಡಬೇಕು. ಸರ್ಕಾರದ ವಿವಿಧ ಅನುದಾನ ಮೀಸಲು ನಿಗದಿಯಂತೆ ಬಳಕೆ ಮಾಡುವುದು. ಗ್ರಾಪಂಗೆ ಮಂಜೂರಾಗಿರುವ 147 ಮನೆಗಳಲ್ಲಿ 42 ಮನೆಗಳು ಉಳಿದಿವೆ. ಜನರಿಗೆ ಸಕಾಲದಲ್ಲಿ ಜಿಪಿಎಸ್ ಮಾಡಿ ವಸತಿ ಮನೆಗಳು ಬಾಕಿ ಉಳಿಯದಂತೆ ಕ್ರಮ ವಹಿಸಿ ಎಂದು ಸೂಚನೆ ನೀಡಿದರು.ಸರ್ಕಾರ ಬಂದು ಎರಡು ವರ್ಷ ಆಗುತ್ತಿದ್ದು, ಸರ್ಕಾರದಿಂದ ಈ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 2 ಕೋಟಿ ಅನುದಾನ ಬಂದಿದೆ. ಜಕ್ಕನಹಳ್ಳಿ ಕೆರೆ 50 ಲಕ್ಷದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಈಗ 3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್.ರಾಜು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸದಾಕಾಲ ಚಿಂತನೆ ನಡೆಸಿ, ಪ್ರತಿ ಹಳ್ಳಿಗಳಿಗೂ ತೆರಳಿ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಶಾಶ್ವತ ಅಭಿವೃದ್ಧಿ ಕೆಲಸ ಮಾಡುತ್ತಿರುವ ಶಾಸಕ ಇಕ್ಬಾಲ್ ಹುಸೇನ್ ರವರು ಕಾರ್ಯ ಶ್ಲಾಘನೀಯ ಎಂದರು.ಪ್ರತಿಪಕ್ಷದವರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಇಲ್ಲಸಲ್ಲದ ಟೀಕೆಗಳಲ್ಲಿ ತೊಡಗಿದ್ದಾರೆ. ಜಾತಿ ಧರ್ಮಗಳ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷೆ ಜ್ಯೋತಿ, ಪಿಡಿಒ ಶಿವಕುಮಾರ್, ಸದಸ್ಯರಾದ ಹೇಮಂತ್, ಯಶೋಧಮ್ಮ, ಚಂದ್ರಗಿರಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಯರಾಮಯ್ಯ, ರಾಜಸ್ವ ನಿರೀಕ್ಷಕ ರಾಜಶೇಖರ್, ತಾಪಂ ಸಹಾಯಕ ನಿರ್ದೇಶಕ ರೂಪೇಶ್ಕುಮಾರ್, ಬಿಲ್ ಕಲೆಕ್ಟರ್ ಗಿರೀಶ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.ಕೋಟ್............
ಕ್ಷೇತ್ರದ ಶಾಸಕನಾಗಿ ಆಯ್ಕೆ ಆಗುವುದು ಮುಖ್ಯವಲ್ಲ. ಪ್ರತಿನಿತ್ಯ ನಿಮ್ಮ ಕಷ್ಟ-ಸುಖಗಳಿಗೆ ಭಾಗಿಯಾಗಿ, ಅಭಿವೃದ್ಧಿ ಕೆಲಸ ಮಾಡುತ್ತಾ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಬೇರೆಯವರಂತೆ ಶಾಸಕರಾಗಿ ಆಯ್ಕೆಯಾಗಿ ಹೋಗಿ ನಿಮ್ಮನ್ನು ಮರೆಯುವವನು ನಾನಲ್ಲ. ನಾನು ಪ್ರಧಾನಿ, ಮುಖ್ಯಮಂತ್ರಿ ಮಗನಲ್ಲ, ನಾನು ಸಾಮಾನ್ಯ ರೈತನ ಮಗನಾಗಿದ್ದು ಕ್ಷೇತ್ರದ ಜನರ ಆಶೀರ್ವಾದದಿಂದ ಕ್ಷೇತ್ರದ ಅಭಿವೃದ್ಧಿ ಮಾಡುವ ಬದ್ದತೆಯಿಂದ ನಿಮ್ಮ ಸೇವೆ ಮಾಡುತ್ತಿದ್ದೇನೆ.-ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ
20ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ (ಕೈ) ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.