ಕನ್ನಡಪ್ರಭ ವಾರ್ತೆ ಬೆಳಗಾವಿ
ಆಸ್ತಿ ವಿಚಾರವಾಗಿ ತಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಮಾಡಲಾಗಿದೆ ಎಂದು ಆರೋಪಿಸಿ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ ದೀಪಾ ಸಿದ್ನಾಳ ಅವರು ಮಾಜಿ ಸಂಸದ ದಿ.ಎಸ್.ಬಿ.ಸಿದ್ನಾಳ ಅವರ ಪುತ್ರ ಶಿವಕಾಂತ ಸಿದ್ನಾಳ ಕುಟುಂಬದ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ವಿಜಯಕಾಂತ ಡೇರಿ ಪಾಲುದಾರಿಕೆ ಹಾಗೂ ಅದರ ಆಸ್ತಿ ಹೊಡೆಯುವ ಉದ್ದೇಶದಿಂದ ಶಶಿಕಾಂತ ಸಿದ್ನಾಳ್, ಪತ್ನಿ ವಾಣಿ ಸಿದ್ನಾಳ್ ಹಾಗೂ ಪುತ್ರ ದಿಗ್ವಿಜಯ ಸಿದ್ನಾಳ್ ಅವರು ಸೇರಿಕೊಂಡು ತಮ್ಮ ವಿರುದ್ಧ ವಾಮಾಚಾರ ಮಾಡಿ ಆಸ್ತಿ ಹೊಡೆಯುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಶಿವಕಾಂತ ಸಿದ್ನಾಳ್ ಅವರ ಒಡೆತನದ ವಿಜಯಕಾಂತ ಡೇರಿ 2006ರಲ್ಲಿ ಸ್ಥಾಪನೆಯಾಗಿತ್ತು. ಶಿವಕಾಂತ ಅವರು ವಿಜಯ್ ಸಂಕೇಶ್ವರ್ ಅವರ ಪುತ್ರಿ ದೀಪಾ ಅವರನ್ನು ಮದುವೆಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಶಿವಕಾಂತ ಅವರು ಅನಾರೋಗ್ಯದಿಂದ ತೀರಿ ಹೋದ ನಂತರ ವಿಜಯಕಾಂತ ಡೇರಿ ಆಸ್ತಿ ಹೊಡೆಯುವ ಉದ್ದೇಶದಿಂದ ಶಿವಕಾಂತ ಸಹೋದರರ ಕುಟುಂಬ ವಾಮಾಚಾರದ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.ಶಿವಕಾಂತ್ ಸಿದ್ನಾಳ್ ಅವರು ತೀರಿಹೋದ ನಂತರ ಅವರ ಸಹೋದರ ಶಶಿಕಾಂತ ಸಿದ್ನಾಳ್, ಪತ್ನಿ ವಾಣಿ ಸಿದ್ನಾಳ್ ಹಾಗೂ ಪುತ್ರ ದಿಗ್ವಿಜಯ ಸಿದ್ನಾಳ್ ಅವರು ಸೇರಿಕೊಂಡು ಆಸ್ತಿ ಹೊಡೆಯುವ ಹುನ್ನಾರದಿಂದ ವಾಮಾಚಾರ ಮಾಡುತ್ತಿದ್ದಾರೆ. ಹಾಗೆಯೇ ಶಿವಕಾಂತ್ ಅವರ ಸಮಾಧಿ ಮೇಲೆಯೂ ವಾಮಾಚಾರ ಮಾಡಲಾಗಿದೆ ಎಂದು ವಿಜಯ್ ಸಂಕೇಶ್ವರ್ ಪುತ್ರಿ ದೀಪಾ ಸಿದ್ನಾಳ್ ಜೂ.29 ರಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ವಿಜಯಕಾಂತ ಹಾಲಿನ ಡೇರಿಯಲ್ಲಿ ಸದ್ಯ ಪ್ರತಿದಿನ 1.20 ಲಕ್ಷ ಹಾಲು ಉತ್ಪಾದನೆ ಮಾಡುತ್ತಿದ್ದು ಆದಿತ್ಯ ಮಿಲ್ಕ್ ಬ್ರ್ಯಾಂಡ್ ಅಡಿಯಲ್ಲಿ ಹಾಲಿನ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ವಿಜಯಕಾಂತ ಹಾಲಿನ ಡೇರಿಗೆ ಉದ್ಯಮಿ ವಿಜಯ್ ಸಂಕೇಶ್ವರ್ ಚೇರಮನ್ ಆಗಿದ್ದಾರೆ.ಆಸ್ತಿ ವಿಚಾರವಾಗಿ ತಮ್ಮ ಮೇಲೆ ವಾಮಾಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ದೀಪಾ ಸಿದ್ನಾಳ ಎಂಬುವರು ನೀಡಿದ ದೂರಿನ ಮೇರೆಗೆ ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ
- ಯಡಾ ಮಾರ್ಟಿನ ಮಾರ್ಬನ್ಯಾಂಗ, ಪೊಲೀಸ್ ಆಯುಕ್ತ.