ಪ್ರಜ್ಞಾವಂತಿಕೆ ಮೂಡಿಸುವಲ್ಲಿ ಚುಟುಕು ಸಾಹಿತ್ಯ ಪರಿಣಾಮಕಾರಿ

KannadaprabhaNewsNetwork | Published : Sep 25, 2024 12:54 AM

ಸಾರಾಂಶ

ಬೇಲೂರು: ಚುಟುಕು ಸಾಹಿತ್ಯ ಎಂಬುದು ಪ್ರತಿಯೊಬ್ಬರ ಬದುಕಿನ ಜೀವನ ಶೈಲಿ ಹಾಗೂ ಪ್ರಜ್ಞಾವಂತಿಕೆ ಮೂಡಿಸುವಲ್ಲಿ ಪರಿಣಾಮಕಾರಿಯಾಗಿದ್ದು, ಚುಟುಕುಗಳು ಯಾರ ಸ್ವತ್ತಾಗದೇ ಜನಸಾಮಾನ್ಯರ ಮನಸ್ಸಿನ ಭಾವನೆಯಿಂದ ಅರಳುವಂತಹದ್ದಾಗಿವೆ ಎಂದು ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್‌ ಅರಸ್ ಹೇಳಿದರು.

ಬೇಲೂರು: ಚುಟುಕು ಸಾಹಿತ್ಯ ಎಂಬುದು ಪ್ರತಿಯೊಬ್ಬರ ಬದುಕಿನ ಜೀವನ ಶೈಲಿ ಹಾಗೂ ಪ್ರಜ್ಞಾವಂತಿಕೆ ಮೂಡಿಸುವಲ್ಲಿ ಪರಿಣಾಮಕಾರಿಯಾಗಿದ್ದು, ಚುಟುಕುಗಳು ಯಾರ ಸ್ವತ್ತಾಗದೇ ಜನಸಾಮಾನ್ಯರ ಮನಸ್ಸಿನ ಭಾವನೆಯಿಂದ ಅರಳುವಂತಹದ್ದಾಗಿವೆ ಎಂದು ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಂಚಾಲಕ ಡಾ. ಎಂ.ಜಿ.ಆರ್‌ ಅರಸ್ ಹೇಳಿದರು.

ಶ್ರೀ ಚೆನ್ನಕೇಶವ ದಾಸೋಹ ಭವನದಲ್ಲಿ ಭಾನುವಾರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ, ಪದಗ್ರಹಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಗಳಿಂದ ಚುಟುಕು ಸಾಹಿತ್ಯಕ್ಕೆ ನ್ಯಾಯ ಸಿಗುತ್ತಿಲ್ಲ, ಮಹಾಕಾವ್ಯ ಬರೆದಿರುವೆನೆಂದು ಬೀಗುವರಿಂದಲೂ ಸಾಹಿತ್ಯ ಲೋಕಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಂತ ಚುಟುಕು ಕವಿಗಳು ನಿರಾಸೆಯಿಂದ ಬಳಲುವ ಅಗತ್ಯವಿಲ್ಲ, ಚುಟುಕು ಸಾಹಿತ್ಯವೇ ಜನಮಾನಸದಲ್ಲಿ ಸದಾ ಉಳಿಯುತ್ತದೆ ಎಂದರು.

ತಹಸೀಲ್ದಾರ್ ಮಮತಾ ಮಾತನಾಡಿ, ಇತ್ತೀಚೆಗೆ ಜನರಲ್ಲಿ ಸಾಹಿತ್ಯದ ಓದು ಇಳಿಮುಖವಾಗುತ್ತಿದ್ದು ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ನಂ ಲೋಕೇಶ್ ಮಾತನಾಡಿ, ಸಾಹಿತ್ಯ ಎಂಬುದು ಈ ಕಾಲಘಟ್ಟದಲ್ಲಿ ಕೇವಲ ಪ್ರಶಸ್ತಿಗಾಗಿ ಹಾಗೂ ಹೆಸರಿಗಾಗಿ ಎನ್ನುವಂತಾಗಿದೆ. ಆದರೆ ಚುಟುಕು ಸಾಹಿತಿಗಳು ಇದ್ಯಾವುದಕ್ಕೂ ಬೆಲೆಕೊಡದೆ ಇಂದಿನ ಸಾಮಾಜಿಕ ನೆಲೆಗಟ್ಟುಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಡಂಬನೆ ಹಾಗೂ ನೈಜತೆಯಿಂದ ಕೂಡಿದ ಸರಳ ಶೈಲಿಯಲ್ಲಿ ಮಂಡಿಸುತ್ತಿರುವುದು ಸ್ವಾಗತಾರ್ಹ. ಚುಟುಕು ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಅವರ ಬರವಣಿಗೆ ಶೈಲಿ ಹಾಗೂ ಸೌಮ್ಯ ಸ್ವಭಾವ ನಮ್ಮೆಲ್ಲರಿಗೂ ಖುಷಿ ತಂದಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಕಿರಣ್ ಕಿಮಾರ್ ಅವರ ಸ್ವರಚಿತ ಚುಟುಕಾಮೃತ ಕೃತಿಯನ್ನು ತಹಸೀಲ್ದಾರ್ ಎಂ.ಮಮತಾ ಬಿಡುಗಡೆ ಮಾಡಿದರು. ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಜಿಲ್ಲಾ ಚುಟುಕು ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಅರಸೀಕೆರೆ ತಾಲೂಕು ಚುಸಾಪ ಅಧ್ಯಕ್ಷೆ ಪದ್ಮಮೂರ್ತಿ ವಹಿಸಿದ್ದರು.

ಕೌಸ್ತುಭ ಮಾಸಪತ್ರಿಕೆ ಸಂಪಾದಕರಾದ ಚುಟುಕು ಸಿರಿ ಡಾ, ರತ್ನಾ ಹಾಲಪ್ಪಗೌಡ , ಮೂಡಿಗೆರೆ ಕಾಲೆಜು ಉಪಪ್ರಾಂಶುಪಾಲ ಡಾ, ಜಗದೀಶ್ ನಾಯಕ್, ಗಂಗಾಧರ್, ಪಾಲಾಕ್ಷ ಎಸ್.ಬಿ, ಮೋಹನರಾಜ, ಅಂದಲೆ ವೀರಭದ್ರೇಗೌಡ, ಮಾ.ನ. ಮಂಜೇಗೌಡ್ರು, ಪದ್ಮಾಮೂರ್ತಿ, ಪ್ರೇಮ ಮಂಜುನಾಥ್, ಮಲ್ಲೇಶ್ ಜಿ. ಸುಂದರೇಶ್ ಧರ್ಮ, ಗಿರೀಶ್ ಎಚ್.ಪಿ, ಕಿರಣ್‌ ಕುಮಾರ್ ಬಿ, ದೇವರಾಜು, ಪರಮೇಶ್ವರಪ್ಪ, ನಂಜುಂಡಯ್ಯ, ಚಂದ್ರು, ಕಿರಣ್ ಗುಜರ್, ಕಲಾವತಿ, ಪಲ್ಲವಿ, ಗ ಸುಮಾದೊರೆಸಾನಿ ಇದ್ದರು.

Share this article