- ಲಕ್ಷಾಂತರ ಹಣ ವಂಚಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ । ಕೆಆರ್ಎಸ್ ಪಕ್ಷ ಸಾಥ್
ತಾಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸ್ವಸಹಾಯ ಸಂಘದ ಸದಸ್ಯರಿಗೆ ವಂಚಿಸಿರುವ ಚಿತ್ರದುರ್ಗ ತಾಲೂಕಿನ ವಿಶಾಲಮ್ಮ, ಚನ್ನಗಿರಿ ತಾಲೂಕಿನ ಸೋಮಲಾಪುರದ ರಂಜಿತ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕಾರ್ಯಕರ್ತರು ಸಂಘದ ಸದಸ್ಯರೊಂದಿಗೆ ಪ್ರತಿಭಟಿಸಿದರು.
ಶೆಟ್ಟಿಗೊಂಡನಹಳ್ಳಿ ಗ್ರಾಮದ ರೇಣುಕಾದೇವಿ ಮಹಿಳಾ ಸ್ವಸಹಾಯ ಸಂಘ, ಹಳ್ಳಿ ಚೌಡಮ್ಮ, ಪಾಂಡುರಂಗ ಸ್ವಾಮಿ ಸಂಘ, ಮಾರುತಿ ಸಂಘ, ದುರ್ಗಾಂಬ ಸಂಘ, ಆಂಜನೇಯ ಸಂಘದ 60 ಹೆಚ್ಚು ಮಹಿಳೆಯರಿಗೆ ಸಾಲ ಕೊಡಿಸುವುದಾಗಿ ರಂಜಿತ, ವಿಶಾಲಮ್ಮ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.ಕೆಆರ್ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ವೀರಭದ್ರಪ್ಪ ಮಾತನಾಡಿ, ಈ ಗುಂಪು ಕೂಲಿ ಮಾಡಿ ಜೀವನ ನಡೆಸುವ ಹಳ್ಳಿ ಹೆಣ್ಣುಮಕ್ಕಳನ್ನೆ ಟಾರ್ಗೆಟ್ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಣ್ಣುಮಕ್ಕಳಿಗೆ ಸಹಾಯಧನ ರೂಪದಲ್ಲಿ ₹5 ಲಕ್ಷವರೆಗೂ ಸಾಲ ನೀಡುತ್ತದೆ, ಅಗತ್ಯ ದಾಖಲೆಗಳನ್ನು ಒದಗಿಸಿ ಎಂದು ಭರವಸೆ ನೀಡಿದ್ದರು. ಅನಂತರ ಕಚೇರಿ ಖರ್ಚು, ಅಧಿಕಾರಿಗಳು ಇಂತಿಷ್ಟು ಎಂದು ಹೇಳಿ ಒಬ್ಬರಿಂದ ₹12 ಸಾವಿರದಂತೆ 60 ಜನರಿಂದ ಹಣ ಪಡೆದಿದ್ದಾರೆ. ಅಲ್ಲದೇ ₹20 ಲಕ್ಷ ಬೇಕಾದವರು ₹3 ಲಕ್ಷ ಕೊಡಬೇಕು ಎಂದು ವಸೂಲಿ ಮಾಡಿದ್ದಾರೆ. ಆದರೆ ಅಮಾಯಕ ಹೆಣ್ಣುಮಕ್ಕಳು ಮನೆಗಳಲ್ಲಿ ಯಾರಿಗೂ ಹೇಳದೇ ಹಣ ಕೊಟ್ಟು ಕಳೆದುಕೊಂಡು ಈಗ ಬೀದಿಗೆ ಬಿದ್ದಿದ್ದಾರೆ. ಇಂತಹ ವಂಚನೆ ಮಾಡುವವರಿಗೆ ಕಾನೂನು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಗೌರವಾಧ್ಯಕ್ಷ ಮಂಜುನಾಥ್ ಹಳ್ಳಿಕೇರಿ, ಜಿಲ್ಲಾಧ್ಯಕ್ಷ ಬಸವರಾಜಯ್ಯ, ತಾಲೂಕು ಅಧ್ಯಕ್ಷ ಸ್ವಾಮಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟನಾಯ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಹಮತ್, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್, ಎಸ್ಸಿ,ಎಸ್ಟಿ ಘಟಕ ಅಧ್ಯಕ್ಷ ಹನುಮಂತ್ಪ, ಪ್ರಕಾಶ್ ನಾಯ್ಕ, ಮಹಾಂತೇಶ್ ನಾಯ್ಕ, ಇಮಾಂ ಸಾಬ್ ಮತ್ತಿತರರಿದ್ದರು.
- - --10ಜೆಜಿಎಲ್1:
ಸ್ವಸಹಾಯ ಸಂಘದ ಸದಸ್ಯರಿಗೆ ವಂಚಿಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ಜಗಳೂರು ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಸಂಘಟನೆಗಳ ಸದಸ್ಯರು ಕೆಆರ್ಎಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟಿಸಿದರು.