ಹಗರಿಬೊಮ್ಮನಹಳ್ಳಿ: ಗ್ರಾಮೀಣ ಬಡಜನತೆಯನ್ನು ಸ್ವಸಹಾಯ ಗುಂಪುಗಳ ಮೂಲಕ ಸಂಘಟಿಸಿ, ಆರ್ಥಿಕ ಸಧೃಡರನ್ನಾಗಿ ಮಾಡುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ ಎಂದು ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಹೇಳಿದರು.ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಯೋಜನೆ ಭರವಸೆಯ ಬೆಳಕಾಗಿ ಕಾರ್ಯಪ್ರವೃತ್ತವಾಗಿದೆ. ಲಕ್ಷಾಂತರ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡು, ಕುಟುಂಬದ ಆರ್ಥಿಕತೆಗೆ ಹೆಗಲೊಡ್ಡಿದ್ದಾರೆ. ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಯೋಜನೆಯ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಿ ಗುರುತಿಸಿಕೊಳ್ಳಲಾಗಿದೆ ಎಂದರು.
ಇದೇವೇಳೆ ಅಡವಿ ಆನಂದದೇವನಹಳ್ಳಿ ಹಾಲಿನ ಡೈರಿಯ ಕಟ್ಟಡ ನಿರ್ಮಾಣಕ್ಕೆ ₹೧ಲಕ್ಷ ಸಹಾಯಧನದ ಮಂಜೂರಾತಿ ಪತ್ರ ನೀಡಿದರು. ಸಂಘಗಳ ವ್ಯವಹಾರಕ್ಕೆ ಅನುಗುಣವಾಗಿ ಮಂಜೂರಾದ ಲಾಭಾಂಶದ ಚೆಕ್ಗಳನ್ನು ಸಾಂಕೇತಿಕವಾಗಿ ಒಕ್ಕೂಟಗಳಿಗೆ ವಿತರಿಸಿದರು. ತಾಲೂಕು ಯೋಜನಾಧಿಕಾರಿಗಳಾದ ಟಿ.ಆರ್. ಮಂಜುಳಾ, ಎಂ.ವಾಣಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಶಿಲ್ಪಕಲಾ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಬದಾಮಿ ನಟರಾಜ್, ಸದಸ್ಯರಾದ ಎಚ್. ದಿವಾಕರ, ಯು.ಕೆ. ಕೊಟ್ರೇಶ, ಬ್ರಹ್ಮಾನಂದ ಗುತ್ತಲ್, ಹೊನ್ನೂರಪ್ಪ, ಯೋಜನೆಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಇದ್ದರು.