ಮಹಿಳೆಯರನ್ನು ಗೌರವದಿಂದ ಕಾಣಬೇಕು: ಮಠಪತಿ

KannadaprabhaNewsNetwork | Published : Mar 3, 2024 1:32 AM

ಸಾರಾಂಶ

ವಿಧವೆಯನ್ನು ಕೀಳಾಗಿ ಕಂಡು ಮರು ಮದುವೆಯಿಂದ ವಂಚಿಸುತ್ತಿರುವುದು ದುರ್ದೈವ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಸಮಾಜದಲ್ಲಿ ವಿಧವೆಯರಿಗೆ, ಮಕ್ಕಳಾಗದವರಿಗೆ ಮತ್ತು ಹೆಣ್ಣುಮಕ್ಕಳನ್ನು ಕಳಂಕಿತ ದೃಷ್ಟಿಯಿಂದ ನೊಡದೇ ಅವರನ್ನು ಗೌರವದಿಂದ ಕಾಣಬೇಕು ಎಂದು ಕಲಬುರಗಿಯ ಭೇಟಿ ಬಚಾವೊ ಭೇಟಿ ಪಡಾವೊ ಯೊಜನೆಯ ಸಂಪನ್ಮೂಲ ವ್ಯಕ್ತಿ ಶಿವಯೊಗಿ ಮಠಪತಿ ಹೇಳಿದರು.

ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಲಬುರಗಿ ಅವರ ಆಶ್ರಯದಲ್ಲಿ ಹೆಣ್ಣು ಮಗಳನ್ನು ಉಳಿಸಿ ಮಗಳನ್ನು ಓದಿಸಿ ಎಂಬ ಘೋಷ ವಾಕ್ಯದೊಂದಿಗೆ ಭೇಟಿ ಬಚಾವೊ ಭೇಟಿ ಪಡಾವೊ ಯೊಜನೆಯಡಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದದರು.

ಸಮಾಜದಲ್ಲಿ ಹೆಣ್ಣು ಎಲ್ಲರಿಗೂ ಸಮಾನರು ಎಂದು ಹೇಳಲಾಗುತ್ತದೆ. ಆದರೆ ಗಂಡನನ್ನು ಕಳೆದುಕೊಂಡ ವಿಧವೆಯನ್ನು ಕೀಳಾಗಿ ಕಂಡು ಅವರನ್ನು ಮರು ಮದುವೆಗೆ ಅವಕಾಶ ಮಾಡಿ ಕೊಡುವುದಿಲ್ಲ. ಆದರೆ, ಹೆಂಡತಿ ತೀರಿದ ಬಳಿಕೆ ಗಂಡನನ್ನು ಮರು ಮದುವೆಗೆ ವಿಚಾರ ಮಾಡುತ್ತೇವೆ. ಅಲ್ಲದೇ ಅವರಿಗೆ ಯಾವುದೇ ಶುಭಕಾರ್ಯಗಳಲ್ಲಿ ಅವಕಾಶ ಕೊಡುವುದಿಲ್ಲ. ಹಾಗೆಯೇ ಮಕ್ಕಳಾಗದಿರುವ ಹೆಣ್ಣುಮಕ್ಕಳ ಕೈಯಲ್ಲಿ ಮಕ್ಕಳನ್ನು ಕೊಡುವುದಿಲ್ಲ, ಹೀಗೆ ಹೆಣ್ಣು ಮಗಳನ್ನು ಕೀಳಾಗಿ ಕಾಣುವುದನ್ನು ಬಿಟ್ಟು ಅವರನ್ನು ಗೌರವದಿಂದ ಕಾಣಬೇಕು. ಅಲ್ಲದೇ ಗರ್ಭಾವಸ್ಥೆಯಲ್ಲಿ ಹೆಣ್ಣು ಮಗಳ ಜನನವಾಗುತ್ತದೆ ಎಂದು ಅರಿತು ಭ್ರೂಣ ಹತ್ಯೆ ಮಾಡುವುದನ್ನು ಬಿಟ್ಟಾಗ ಮಾತ್ರ ಹೆಣ್ಣು ಮಕ್ಕಳನ್ನು ಉಳಿಸಲು ಸಾಧ್ಯ ಎಂದರು.

ಸಿಡಿಪಿಓ ಆರತಿ ತುಪ್ಪದ ಮಾತನಾಡಿ, ಹೆಣ್ಣುಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತಂದು ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ಮನದಟ್ಟು ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಯೊಜನೆಯಾಗದ ಭೇಟಿ ಬಚಾವೊ ಭೇಟಿ ಪಡಾವ ಯೊಜನೆ ಮುಖ್ಯವಾಗಿ ಪುರುಷರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಧ್ಯಪಕರಾದ ಮಲ್ಲಪ್ಪ ಮಾನೇಗಾರ, ಅನಿಲಕುಮಾರ, ಮರೆಪ್ಪ ಮೇತ್ರಿ, ಮೇಲ್ವಿಚಾರಕಿ ಗೀತಾ ಯಡ್ರಾಮಿ, ಜಯಶ್ರೀ ಪೂಜಾರಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿ ಕವಿತಾ ಅವರು ಪ್ರಾಥನೆಗೀತೆ ಹಾಡಿದರು. ಮಾತೃ ವಂದನಾ ಯೊಜನೆಯ ಜಿಲ್ಲಾ ಸಂಯೊಜಕಿ ವಿಜಯಲಕ್ಷ್ಮೀ ಜಾಧವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share this article