ಅನ್ನ, ನೀರು, ಜೀವ ಕೊಟ್ಟ ಮೋದಿಯನ್ನು ಮಹಿಳೆಯರು ಮರೆಯಬಾರದು

KannadaprabhaNewsNetwork |  
Published : May 03, 2024, 01:01 AM IST
ಮುಂಡರಗಿ ಪಟ್ಟಣದಲ್ಲಿ ಗುರುವಾರ ಹಾವೇರಿ ಲೋಕಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪತ್ನಿ ಚನ್ನಮ್ಮ ಬೊಮ್ಮಾಯಿ ಮತಯಾಚಿಸಿದರು. | Kannada Prabha

ಸಾರಾಂಶ

10 ವರ್ಷಗಳ ಹಿಂದೆ ಅಭಿವೃದ್ಧಿಯಲ್ಲಿ ನಮ್ಮ ದೇಶ ಸಾಕಷ್ಟು ಹಿಂದಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿಕೊಳ್ಳುವಂತಾಗಿದೆ

ಮುಂಡರಗಿ: ಅನ್ನ, ನೀರು, ಜೀವ ಕೊಟ್ಟ ಮೋದಿ ಅವರನ್ನು ಮಹಿಳೆಯರು ಎಂದಿಗೂ ಮರೆಯಬಾರದು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪತ್ನಿ ಚೆನ್ನಮ್ಮ ಬೊಮ್ಮಾಯಿ ಹೇಳಿದರು.

ಅವರು ಗುರುವಾರ ಪಟ್ಟಣದ ಕೈಗಾರಿಕಾ ವಸಾಹಾತು ಪ್ರದೇಶದ ವಿಲ್ಯಾಂಪ್ಸ್ ಇಂಡಸ್ಟ್ರೀಸ್ ಕಚೇರಿ ಆವರಣದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚಿಸಿ ಮಾತನಾಡಿದರು.

ಗರೀಬ್ ಕಲ್ಯಾಣ ಯೋಜನೆಯಲ್ಲಿ ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ, ಜಲ್ ಜೀವನ್ ಮಿಷನ್ ಯೋಜನೆಯಡಿ ದೇಶದ 11.88 ಕೋಟಿ ಕುಟುಂಬಗಳಿಗೆ ಮನೆ ಮನೆಗೆ ಶುದ್ಧ ಕುಡಿಯುವ ನೀರು, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ಕೋವಿಡ್ ಲಸಿಕೆ ಹೀಗೆ ಹಲವು ಯೋಜನೆಗಳನ್ನು ನೀಡಿದ್ದಾರೆ ಎಂದರು.

10 ವರ್ಷಗಳ ಹಿಂದೆ ಅಭಿವೃದ್ಧಿಯಲ್ಲಿ ನಮ್ಮ ದೇಶ ಸಾಕಷ್ಟು ಹಿಂದಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿಕೊಳ್ಳುವಂತಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ. ಅಂತಹ ಅಭಿವೃದ್ಧಿ ಹರಿಕಾರ ಮತ್ತೊಮ್ಮೆ ಪ್ರಧಾನಿಯಾಗಬೇಕಾದರೆ ಹಾವೇರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಮಲದ ಗುರುತಿಗೆ ಮತಹಾಕುವ ಮೂಲಕ ಮೋದಿ ಅವರಿಗೆ ಬಲ ತುಂಬಬೇಕು ಎಂದು ಮನವಿ ಮಾಡಿಕೊಂಡರು.

ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಮಾತನಾಡಿ, ನಮಗೆಲ್ಲ ಮೋದಿ ಅವರ ಅನ್ನ ಮತ್ತು ಜೀವದ ಋಣ ತೀರಿಸಲು ಸದಾವಕಾಶ ಒದಗಿ ಬಂದಿದೆ. ನಾವು 10 ವರ್ಷಗಳ ಅಭಿವೃದ್ಧಿ ಸಾಧನೆ ಪಟ್ಟಿ ನೀಡಿ ಮತ ಕೇಳುತ್ತೇವೆ. ಕೇವಲ ಪೊಳ್ಳು ಭರವಸೆಗಳ ಆಸೆ ಹಚ್ಚಿಸಿ ಮತ ಕೇಳುವುದಿಲ್ಲ ಎಂದರು.

ಬಿಂದು ಮಹೇಶ ಬೊಮ್ಮಾಯಿ ಮಾತನಾಡಿ, ಕೇಂದ್ರದಲ್ಲಿ ಅಭಿವೃದ್ದಿ ಹರಿಕಾರ ಮೋದಿಯಾದರೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ಬಸವರಾಜ ಬೊಮ್ಮಾಯಿ ಅವರು. ಈಗಾಗಲೇ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಎಸ್‌ಸಿ-ಎಸ್‌ಟಿ ಸಮಾಜದ ಮೀಸಲಾತಿ ಹೆಚ್ಚಿಸಿದ್ದಾರೆ. ಹಾವೇರಿ ಕ್ಷೇತ್ರವನ್ನು ಮಾದರಿ ಮಾಡಲು ಅವರಿಗೆ ಮತ ನೀಡಿ ಆರಿಸಿ ಲೋಕಸಭೆಗೆ ಕಳುಹಿಸಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕವಿತಾ ಉಳ್ಳಾಗಡ್ಡಿ, ಸದಸ್ಯೆ ಜ್ಯೋತಿ ಹಾನಗಲ್, ಮುಂಡರಗಿ ಬಿಜೆಪಿ ಮಹಿಳಾ ಮಂಡಲದ ಅಧ್ಯಕ್ಷೆ ಪವಿತ್ರಾ ಕಲ್ಲಕುಟಗರ್ ಮಾತನಾಡಿದರು.

ಜಿಲ್ಲಾ ಬಿಜೆಪಿ ಮಹಿಳಾ ಬಿಜೆಪಿ ಘಟಕದ ಜಯಶ್ರೀ ಉಗಲಾಟದ, ಅಶ್ವಿನಿ ಜರತಾರ್, ವಿಜಯಲಕ್ಷ್ಮಿ ಮಾನ್ವಿ, ವಂದನಾ, ರತ್ನಾ ಕುರುಗೋಡು, ಕಸ್ತೂರಿ, ಸುನೀತಾ ಹಾರೋಗೇರಿ, ವಿನೋದಾ ಕಳಸಾಪುರ, ಆಶಾ ರೋಣದ, ಮೇರಿಜಾನ್ ಪೂಜಾರ, ಪುಷ್ಪಾ ಉಕ್ಕಲಿ, ವೀಣಾ ಬೂದಿಹಾಳ, ರಾಧಾ ಬಾರಕೇರ, ರೇಖಾ ದೇಸಾಯಿ, ಮಂಜುಳಾ ಹಮ್ಮಿಗಿಮಠ ಉಪಸ್ಥಿತರಿದ್ದರು.

ಪ್ರಭಾವತಿ ಬೆಳವಣಕಿಮಠ ಕಾರ್ಯಕ್ರಮ ನಿರೂಪಿಸಿದರು. ಅರುಣಾ ಪಾಟೀಲ ವಂದಿಸಿದರು. ಆನಂತರ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ತೆರಳಿ ಮತ ಯಾಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ