ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಮಿಕರ ಸಂಘಟಿತ ಹೋರಾಟ ಸದಾ ಮುಂದುವರಿಯಬೇಕು ಎಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷೆ ಸಿ. ರೇಣುಕಾಂಬ ತಿಳಿಸಿದರು.ನಗರದ ಜೆಎಲ್ ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಕಾರ್ಮಿಕ ಹಕ್ಕುಗಳ ಸೇವಾ ಸಮಿತಿಯು ಭಾನುವಾರ ಆಯೋಜಿಸಿದ್ದ ಕಾರ್ಮಿಕ ಹಕ್ಕುಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದುಡಿಯುವ ಕಡೆ ಸಮಸ್ಯೆ ಬಂದಾಗ ಕಾರ್ಮಿಕರು ಸುಮ್ಮನಿರಬಾರದು, ಕಾರ್ಮಿಕ ಸಂಘಗಳ ನೆರವಿನಿಂದ ಬಗೆಹರಿಸಿಕೊಳ್ಳಬೇಕು ಎಂದರು.
ಯಾವುದೇ ಕಾರ್ಖಾನೆ ಏಳಿಗೆಯಲ್ಲಿ ಕಾರ್ಮಿಕರ ಪಾತ್ರ ಪ್ರಮುಖ. ಕಾರ್ಮಿಕರು ವಿವಿಧ ಪಾಳಿಗಳಲ್ಲಿ ದುಡಿಯುವಾಗಿನ ಕಷ್ಟ ಅವರ ಕುಟುಂದವರಿಗೇ ಗೊತ್ತು. ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ನೀಡುವುದು ಕಷ್ಟವಾಗುತ್ತಿರುತ್ತದೆ. ಹೀಗಾಗಿ ಕುಟುಂಬದ ಮಹಿಳೆಯರ ಹೊಣೆಗಾರಿಕೆಯೂ ಕಡಿಮೆ ಇಲ್ಲ ಎಂದು ಅವರು ಹೇಳಿದರು.ಇಎಸ್ಐ ಅಧಿಕಾರಿ ಉಮೇಶ್ ಮಾತನಾಡಿ, ಕಾರ್ಮಿಕರು ಹಾಗೂ ಅವರ ಇಡೀ ಕುಟುಂಬವೇ ಇಎಸ್ಐ ವ್ಯಾಪ್ತಿಗೆ ಬರುತ್ತದೆ. ಆದರೆ, ಇಎಸ್ಐನಿಂದ ದೊರೆಯುವ ಸೌಲಭ್ಯದ ಅರಿವು ಸಾಕಷ್ಟು ಜನರಿಗಿಲ್ಲ. ಕೇವಲ ವೈದ್ಯಕೀಯ ಸೌಲಭ್ಯದ ಬಗ್ಗೆ ಮಾತ್ರವೇ ಗಮನ ನೀಡುತ್ತಾರೆ. ಇದು ಸರಿಯಲ್ಲ. ಬದಲಾಗಿ ಏನೇನು ಸವಲುತ್ತುಗಳಿವೆ ಎಂಬುದನ್ನು ತಿಳಿದಿರಬೇಕು ಎಂದರು.
ತಮ್ಮ ಮಕ್ಕಳು ವೈದ್ಯರಾಗಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ಇಎಸ್ಐ ಸಹ ನೆರವಾಗುತ್ತದೆ. ನೀಟ್ ನಲ್ಲಿ ಇಎಸ್ಐ ಕೋಟಾ ಜಾರಿಗೆ ಬಂದಿದ್ದು, ಶೇ.5 ರಷ್ಟು ಅವಕಾಶವಿದೆ. ಹೀಗಾಗಿ, ಕಾರ್ಮಿಕರು ಈ ಯೋಜನೆ ಬಗ್ಗೆ ಸಂಬಂಧಿತ ಇಎಸ್ಐ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯುವುದು ಅಗತ್ಯ ಎಂದು ಅವರು ತಿಳಿಸಿದರು.ಭವಿಷ್ಯ ನಿಧಿ ಪ್ರವರ್ತಕ ಅಧಿಕಾರಿ ಬಿ.ಎನ್. ರಮೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸ್ವಯಂ ಸೇವಕ ಎನ್. ಲೋಕೇಶ್, ಸಮಿತಿಯ ರಾಜ್ಯಾಧ್ಯಕ್ಷ ಆರ್. ಶ್ರೀನಿವಾಸ್, ಪದಾಧಿಕಾರಿಗಳಾದ ಮೌಲ್ಯ ಜೈಕುಮಾರ್, ತೇಜಸ್ ಪೃಥ್ವಿರಾಜ್, ಸ್ಫೂರ್ತಿ, ಶಿವರಾಡು ಮೊದಲಾದವರು ಇದ್ದರು.