ಕನ್ನಡಪ್ರಭ ವಾರ್ತೆ ಚಿತ್ತಾಪುರ
ಅಂಗನವಾಡಿ ಕೇಂದ್ರಗಳಿಗೆ ೧೮ ತಿಂಗಳಿಂದ ಬಾಕಿ ಇರುವ ಬಾಡಿಗೆ ಬಿಲ್ ಮತ್ತು ೨೨ ತಿಂಗಳ ತರಕಾರಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಹಾಗೂ ಕೇಂದ್ರಗಳಿಗೆ ೬ ವರ್ಷಗಳಿಂದ ಸಿಲಿಂಡರ್ ವಿತರಣೆ ಮಾಡದ ಸರ್ಕಾರದ ಕ್ರಮವನ್ನು ವಿರೋಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಎದುರು ಕರ್ನಾಟಕ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿಯಿಂದ ಧರಣಿ ಸತ್ಯಗ್ರಹ ನಡೆಸಿ ಸರ್ಕಾರದ ವಿರುದ್ಧ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡೂಬಾ ಮಾತನಾಡಿ, ಶಹಬಾದ ವ್ಯಾಪ್ತಿಯಲ್ಲಿ ಸುಮಾರು ೮೮ ಅಂಗನವಾಡಿ ಕೇಂದ್ರಗಳು ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ. ಸುಮಾರು ೧೮ ತಿಂಗಳಿಂದ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಮೊತ್ತ ಪಾವತಿಸಿಲ್ಲ. ಪರಿಣಾಮ ಮನೆ ಮಾಲೀಕರು ಕೇಂದ್ರದಿಂದ ಮಕ್ಕಳನ್ನು ಹೊರಗೆ ಹಾಕಿ ಕೇಂದ್ರ ಖಾಲಿ ಮಾಡುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದಾರೆ. ಇದು ದಿನಾಲೂ ಮನೆ ಮಾಲೀಕರಿಂದ ನಡೆಯುತ್ತಿರುವ ಮಾನಸಿಕ ಕಿರುಕುಳವಾಗಿದೆ. ಕಾರ್ಯಕರ್ತೆಯರು ಭಯದ ವಾತಾವರಣದಲ್ಲೇ ಕೇಂದ್ರ ನಡೆಸುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ಹೊಸದಾಗಿ ಆರಂಭವಾಗಿರುವ ಅಂಗನವಾಡಿ ಕೇಂದ್ರಗಳಿಗೆ ೬ ವರ್ಷದಿಂದ ಸಿಲಿಂಡ್ ವಿತರಣೆಯಾಗಿಲ್ಲ. ಚಾಲ್ತಿಯಲ್ಲಿರುವ ಕೇಂದ್ರಗಳಿಗೆ ೧೦ ತಿಂಗಳಿಂದ ಸಿಲಿಂಡ್ ವಿತರಣೆ ಮಾಡಿಲ್ಲ. ಪರಿಣಾಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದಕ್ಕೆ ತುಂಬಾ ಹೊರೆಯಾಗುತ್ತಿದೆ. ಆದರೂ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತೆಯರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೊಪಿಸಿದರು.ಸಿಡಿಪಿಓ ಜೊತೆ ವಾಗ್ವಾದ:
ಕಾರ್ಯಕರ್ತೆಯರ ಸಮಸ್ಯೆ ಕುರಿತು ಈಗಾಗಲೇ ಸಿಡಿಪಿಓ ಅವರ ಗಮನಕ್ಕೆ ತರಲಾಗಿದೆ ಆದರೂ ೨ ವರ್ಷ ಕಳೆದರೂ ಸಮಸ್ಯೆ ಹಾಗೆ ಮುಂದುವರಿದಿದೆ ಎಂದು ತಹಸೀಲ್ದಾರರಿಗೆ ಪ್ರತಿಭಟನೆಕಾರರು ಹೇಳಿದ್ದರಿಂದ ಕೊಪಿತರಾದ ಸಿಡಿಪಿಓ ನನ್ನ ಗಮನಕ್ಕೆ ಈಗ ಬಂದಿದೆ. ಒಂದು ವಾರದೊಳಗೆ ಬಾಡಿಗೆ ಮತ್ತು ಸಿಲಿಂಡ್, ತರಕಾರಿ ಬಿಲ್ ಪಾವತಿ ಮಾಡಲಾಗುವುದು ಎಂದು ಹೇಳಿದ ಮೇಲೆ ಪ್ರತಿಭಟನಾಕಾರರು ಮತ್ತು ಸಿಡಿಪಿಓ ಮಧ್ಯೆ ವಾಗ್ವಾದ ನಡೆಯಿತು.ಗ್ರೇಡ್-೨ ತಹಸೀಲ್ದಾರ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಾಬಮ್ಮ ಕಾಳಗಿ, ಮೈತ್ರಾಬಾಯಿ ತಳವಾರ, ಸುವರ್ಣ, ಸುಜಾತ ರಾವೂರ, ಅಂಬುಜಾ, ರಾಯಪ್ಪ ಹುರಮುಂಜಿ ಕಾರ್ಯಕರ್ತೆಯರು ಇದ್ದರು.