ಹಿರಿಯೂರು: ಕನ್ನಡಕ್ಕಾಗಿ ಕೆಲಸ ಮಾಡಲು ಇರುವ ಏಕೈಕ ಸಂಸ್ಥೆ ಎಂದರೆ ಅದು ಕನ್ನಡ ಸಾಹಿತ್ಯ ಪರಿಷತ್ತು ಎಂದು ಕಸಾಪ ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ ಹೇಳಿದರು.
ಕಸಾಪ ಏಳು ಕೋಟಿ ಕನ್ನಡಿಗರ ಆಸ್ತಿ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ ಸಂಸ್ಕೃತಿ ಸಂವರ್ಧನೆಗೆ ಹಾಗೂ ಸಂರಕ್ಷಣೆಗೆ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಾಗ ಎಚ್.ವಿ.ನಂಜುಂಡಯ್ಯರವರು ಪ್ರಥಮ ಅಧ್ಯಕ್ಷರಾಗಿದ್ದರು ಎಂದು ತಿಳಿಸಿದರು.
ತದನಂತರ ಮೈಸೂರು ರಾಜಮನೆತನದ ಕಾಂತರಾಜ ಅರಸ್, ಕಂಠೀರವ ನರಸರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಅಲ್ಲದೆ ಶ್ರೀನಿವಾಸರಾವ್, ಡಿ.ವಿ.ಗುಂಡಪ್ಪ, ಬಿಎಂ ಶ್ರೀ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು. ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಸತತ ಪ್ರಯತ್ನದಿಂದ ಈಗಿರುವ ಕಟ್ಟಡದ ನಿವೇಶನ ಉಚಿತವಾಗಿ ದೊರೆಯಿತು. 1933ರಲ್ಲಿ ಅದೇ ಸ್ಥಳದಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ ನಿರ್ಮಾಣವಾಯಿತು ಎಂದರು.ಕರ್ನಾಟಕ ಸಾಹಿತ್ಯ ಪರಿಷತ್ತು ಇಂದಿನ ಕನ್ನಡ ಸಾಹಿತ್ಯ ಪರಿಷತ್ ಎಂದು ಹೆಸರು ಬದಲಾಯಿಸಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಸಾಹಿತಿಗಳು, ಕವಿಗಳು, ಬರಹಗಾರರನ್ನು ಗುರುತಿಸಿ ಅನೇಕ ಪುಸ್ತಕಗಳನ್ನು ಪ್ರಕಟಿಸಿ ಹೆಸರು ಪಡೆದಿದೆ ಎಂದು ಹೇಳಿದರು.