ನಿಷ್ಠಾವಂತ ಕಾರ್ಯಕರ್ತರಿಂದಾಗಿ ಬಿಜೆಪಿ ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ: ರೂಪಾಲಿ ಎಸ್.ನಾಯ್ಕ

KannadaprabhaNewsNetwork | Updated : Mar 29 2025, 01:28 PM IST

ಸಾರಾಂಶ

ದೇಶ, ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎನ್ನುವುದು ಸಾಬೀತಾಗಿದೆ.

ಕಾರವಾರ: ದೇಶ, ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎನ್ನುವುದು ಸಾಬೀತಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ, ರಾಜ್ಯ ನಾಯಕರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಇಡೀ ದೇಶ ಹಾಗೂ ರಾಜ್ಯದಲ್ಲಿ ಬಲಿಷ್ಠ ಸಂಘಟನೆಯಾಗಿದೆ. ನಮ್ಮ ಸಂಘಟನೆ ಮತ್ತಿಷ್ಟು, ಇನ್ನಷ್ಟು ಶಕ್ತಿಯುತವಾಗಬೇಕು. ಆ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕರೆ ನೀಡಿದರು.

ಹಳಿಯಾಳ ವಿಧಾನಸಭಾ ಕ್ಷೇತ್ರದ ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾಗಳಲ್ಲಿ ಗುರುವಾರ ಪಕ್ಷದ ಸಂಘಟನಾ ಪರ್ವದ ಹಿನ್ನೆಲೆಯಲ್ಲಿ ಪಕ್ಷದ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಂಬರುವ ಜಿಪಂ, ತಾಲೂಕಾ ಪಂಚಾಯಿತಿ ಮತ್ತು ಸ್ಥಳೀಯ ಚುನಾವಣೆಗಳನ್ನು ಗೆಲ್ಲಲು, ನಮ್ಮ ಕಾರ್ಯಕರ್ತರು ತಳಮಟ್ಟದವರೆಗೂ ಹೋಗಿ ಪಕ್ಷಕ್ಕೆ ಶಕ್ತಿ ನೀಡಬೇಕು ಕಾರ್ಯಕರ್ತರನ್ನು ವಿನಂತಿಸಲಾಯಿತು.

ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಭಾರತೀಯ ಜನತಾ ಪಕ್ಷ ನಿಷ್ಠಾವಂತ ಹಾಗೂ ಸಕ್ರಿಯ ಕಾರ್ಯಕರ್ತರ ಶ್ರಮದ ದ್ಯೋತಕವಾಗಿ ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಈ ಶ್ರೇಯಸ್ಸಿನ ಹಿಂದೆ ಪ್ರತಿಯೊಬ್ಬ ಕಾರ್ಯಕರ್ತನ ಬೆವರು ಇದೆ. ಬದ್ಧತೆ ಇದೆ. ನಮ್ಮ ಸಂಘಟನೆ ಇನ್ನಷ್ಟು ಬಲಯುತವಾಗಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಬರಲಿರುವ ಪ್ರತಿಯೊಂದು ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಕಾರ್ಯಕರ್ತರು ಪಕ್ಷಕ್ಕೆ ಆಧಾರಸ್ತಂಭ ಇದ್ದಂತೆ. ಪಕ್ಷ ಇನ್ನಷ್ಟು ಶಕ್ತಿಯುತವಾಗಬೇಕು. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷ ಅಭೂತಪೂರ್ವ ಸಾಧನೆ ಮಾಡಬೇಕು. ಇದಕ್ಕಾಗಿ ನಿಮ್ಮೆಲ್ಲರ ಕೊಡುಗೆ ಬಹುಮುಖ್ಯವಾದುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಶ್ರೀಕಾಂತ ಘೋಟ್ನೇಕರ, ಹಿರಿಯರಾದ ಮಂಗೇಶ ದೇಶಪಾಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಮಂಡಲ ಅಧ್ಯಕ್ಷ ವಿಠ್ಠಲ ಸಿದ್ಧಣ್ಣವರ, ಮಂಡಲ ಪ್ರಭಾರಿ ನಿತ್ಯಾನಂದ ಗಾಂವ್ಕರ, ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ವಿ.ಎಂ.ಪಾಟೀಲ್, ಜಿಲ್ಲಾ ಪದಾಧಿಕಾರಿಗಳಾದ ಗಣಪತಿ ಕರಂಜೇಕರ, ಅನಿಲ್ ಮುತ್ನಾಳೆ, ಮೋರ್ಚಾ ಅಧ್ಯಕ್ಷರಾದ ಯಲ್ಲಪ್ಪ ಹೊನ್ನೋಜಿ, ಸೋನಪ್ಪಾ ಸುಣಕಾರ, ಯಲ್ಲಪ್ಪ ಹೆಳವರ, ಮಹೇಶ ಮೇಘಾಣಿ, ಸಂಗೀತಾ ಜಾವಳೇಕರ, ಪುರಸಭೆ ಸದಸ್ಯರು, ಹಳಿಯಾಳ, ದಾಂಡೇಲಿ, ಜೋಯಾಡದ ಪಕ್ಷದ ಮುಖಂಡರು, ಕಾರ್ಯಕರ್ತರು, ಉಪಸ್ಥಿತರಿದ್ದರು.

Share this article