ಯಲ್ಲಾಪುರ: ಭೂಮಿಯ ಮೇಲೆ ಬದುಕುವ ಪ್ರತಿ ಪ್ರಾಣಿ-ಪಕ್ಷಿಗಳು, ಜಲಚರಗಳಿಗೆ ಕೂಡ ಈ ನೆಲದಲ್ಲಿ ಬದುಕುವ ಹಕ್ಕಿದೆ. ಅವುಗಳಿಂದಾಗಿಯೇ ಭೂಮಿಯ ಸಮತೋಲನ ಉಳಿಯುವುದಕ್ಕೆ ಸಾಧ್ಯ. ನಾವು ಸಣ್ಣಪುಟ್ಟ ಪ್ರಾಣಿಗಳೆಂದು ನಿರ್ಲಕ್ಷಿಸುವುದು ಸರಿಯಲ್ಲ. ಎಲ್ಲ ಜೀವಿಗಳನ್ನೂ ನಮ್ಮಂತೆಯೇ ತಿಳಿದು, ಅವುಗಳ ಹಕ್ಕನ್ನು ರಕ್ಷಿಸಬೇಕಾದ ಹೊಣೆ ನಮ್ಮದು ಎಂದು ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ. ಹೇಳಿದರು.
ಮಾಗೋಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ನರಸಿಂಹ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಜಿ.ಪಿ., ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಅತಿಥಿಗಳಾಗಿ ಎಸಿಎಫ್ಗಳಾದ ಹಿಮವತಿ ಭಟ್ಟ, ಸಂಗಮೇಶ್ವರ ಪ್ರಭಾಕರ, ರವಿ ಹುಲಕೋಟಿ, ವೀರೇಶ್ ಕಬ್ಬಿನ್, ಅಮಿತಕುಮಾರ್ ಚೌಹಾಣ, ಸುಗಮಗಾರ ಕಿಶೋರ ನಾಯ್ಕ, ವಿಭಾಗದ ವಲಯಾರಣ್ಯಾಧಿಕಾರಿಗಳು, ಉಪವಲಯಾರಣ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂಶೋಧಕ ಗೋಪಾಲಕೃಷ್ಣ ಹೆಗಡೆ ಬಾರೆ, ಜಗಲಬೆಟ ಗಸ್ತು ಅರಣ್ಯಪಾಲಕ ಪರಶುರಾಮ್ ಭಜಂತ್ರಿ ಕಪ್ಪೆಯ ಕುರಿತು ವಿಶೇಷ ಮಾಹಿತಿ ನೀಡಿದರು.ಕಪ್ಪೆಗಳ ಜನನ, ಅವುಗಳ ಸಂತತಿಗಳ ಕುರಿತು ಸಾಕ್ಷ್ಯಚಿತ್ರಗಳ ಮೂಲಕ ವಿಶ್ವದರ್ಶನ ಕಾಲೇಜು, ಸಪ್ರದ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ವಿಶ್ವದರ್ಶನ ಶಾಲೆಯಲ್ಲಿ ನಡೆಸಲಾದ ರಸಪ್ರಶ್ನೆ ಮತ್ತು ಚಿತ್ರಕಲೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಅರಣ್ಯ ವೀಕ್ಷಕರಿಗೆ ಬ್ಯಾಗು ಮತ್ತು ಟಿ-ಶರ್ಟ್ಗಳನ್ನು ವಿತರಿಸಲಾಯಿತು.ಉಪವಲಯಾರಣ್ಯಾಧಿಕಾರಿ ಅಕ್ಷಯ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು. ಸಪ್ರದ ಕಾಲೇಜು ಸಹಾಯಕ ಬಸವರಾಜ ನಿರ್ವಹಿಸಿದರು.