ರಾಘವೇಂದ್ರಸ್ವಾಮಿಗಳ ಆರಾಧನೆ, ಅದ್ಧೂರಿ ರಥೋತ್ಸವ

KannadaprabhaNewsNetwork |  
Published : Aug 13, 2025, 12:30 AM IST
12ಕೆಪಿಎಲ್23 ಕೊಪ್ಪಳ ನಗರದ ಶ್ರೀ ರಾಘವೇಂದ್ರಮಠದಲ್ಲಿ 354 ಆರಾಧನಾ ಮಹೋತ್ಸವ ನಿಮಿತ್ಯ ರತೋತ್ಸವ ವಿಜೃಂಭಣೆಯಿಂದ ಜರುಗಿತು12ಕೆಪಿಎಲ್24 ಕೊಪ್ಪಳ ನಗರದ ಶ್ರೀ ರಾಘವೇಂದ್ರಮಠದಲ್ಲಿ 354 ಆರಾಧನಾ ಮಹೋತ್ಸವ ನಿಮಿತ್ಯ ಪ್ರಸಾದ ಸ್ವೀಕರಿಸಿದ ಭಕ್ತರು. | Kannada Prabha

ಸಾರಾಂಶ

ರಾಘವೇಂದ್ರಸ್ವಾಮಿಗಳ ಆರಾಧನೆ ನಿಮಿತ್ತ ಮೂರು ದಿನಗಳಿಂದ ಬೆಳಗಿನ ಜಾವದಿಂದಲೇ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ತೀರ್ಥಪ್ರಸಾದ ಸೇರಿದಂತೆ ಅನೇಕ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ ಸುರಿದ ಮಳೆ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಜನ ಪ್ರಸಾದ ಸೇವಿಸಿದರು.

ಕೊಪ್ಪಳ:

ನಗರದ ಶ್ರೀರಾಘವೇಂದ್ರ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರರಾಧನೆ ಮತ್ತು ರಥೋತ್ಸವ ಜರುಗಿತು. ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು.

ಆರಾಧನೆ ನಿಮಿತ್ತ ಮೂರು ದಿನಗಳಿಂದ ಬೆಳಗಿನ ಜಾವದಿಂದಲೇ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ತೀರ್ಥಪ್ರಸಾದ ಸೇರಿದಂತೆ ಅನೇಕ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ ಸುರಿದ ಮಳೆ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಜನ ಪ್ರಸಾದ ಸೇವಿಸಿದರು.

ರಥೋತ್ಸವ ಸಂಭ್ರಮ:

ಆರಾಧನೆಯ ಮೊದಲ ಎರಡು ದಿನ ರಾತ್ರಿ ಲಘು ರಥೋತ್ಸವ ನಡೆದಿತ್ತು. ಕೊನೆಯ ದಿನ ಭಕ್ತರ ಹರ್ಷೋದ್ಗಾರ, ದಾಸರ ಹಾಡುಗಳ ಭಕ್ತಿ, ಸಂಗೀತ ನಡುವೆ ರಥೋತ್ಸವ ಸಡಗರರಿಂದ ಜರುಗಿತು. ರಥ ಮಠದ ಪ್ರಾಂಗಣದ ಸುತ್ತಲೂ ಪ್ರದಕ್ಷಣೆಗೆ ತೆಗೆದುಕೊಂಡು ಹೋದಾಗ ಅದರ ಹಿಂದೆಯೇ ಸಾಗಿದ ಭಕ್ತರು ಭಜನೆ ಮಾಡಿ ಭಕ್ತಿ ಸಮರ್ಪಿಸಿದರು. ಪ್ರದಕ್ಷಣೆ ಪೂರ್ಣಗೊಂಡು ಸ್ಥಸ್ಥಾನಕ್ಕೆ ಮರಳಿದ ಬಳಿಕ ಭಕ್ತರಲ್ಲಿ ಹರ್ಷೋದ್ಗಾರ ಮೊಳಗಿದವು.

ವಿವಿಧ ಹೂಗಳಿಂದ ವೃಂದಾವನ, ರಥ, ಮಠದ ಆವರಣ ಹಾಗೂ ಮಠದ ಎದುರು ಇರುವ ಹನುಮಂತ ದೇವರ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ರಥದ ಮೇಲ್ಭಾಗದಲ್ಲಿ ರಾಯರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಯಿತು. ರಥ ಪ್ರದಕ್ಷಣೆ ಪಥದಲ್ಲಿ ಸಾಗುತ್ತಿದ್ದಂತೆಯೇ ಭಕ್ತರು ಮೇಲಿನಿಂದ ಹೂಮಳೆಗೆರೆದು ಭಕ್ತಿ ಸಮರ್ಪಿಸಿದರು. ಆಗ ರಾಯರನ್ನು ಸ್ತುತಿಸುವ ಹಾಡುಗಳು ಮೊಳಗಿದವು.

ಆರಾಧನೆಯ ಕೊನೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಮಠದ ಆವರಣ, ಎದುರಿನ ಆವರಣದದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಆಗಮಿಸಿ ಪ್ರಸಾದ ಸೇವಿಸಿದರು. ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರ ಆಯೋಜಿಸಿತ್ತು. ಸಂಜೆ ಕಲಾವಿದ ವರದೇಂದ್ರ ಗಂಗಾಖೇಡ್ಕರ್‌ ಅವರಿಂದ ಭಕ್ತಿ ಸಂಗೀತ, ಸೇವಾ ಪುರಸ್ಕಾರ, ವೆಂಕಟನರಸಿಂಹಚಾರ್ಯ ಗುಡೆಬೆಲ್ಲೂರು ಅವರಿಂದ ಪ್ರವಚನ ನಡೆಯಿತು.

ರಾತ್ರಿ ತನಕ ಕಾರ್ಯಕ್ರಮ:

ಮಧ್ಯಾರಾಧನೆ ದಿನವಾಗಿದ್ದ ಸೋಮವಾರ ತಡರಾತ್ರಿ ತನಕ ಕಾರ್ಯಕ್ರಮ ನಡೆದವು. ಲಘು ರಥೋತ್ಸವದ ಮುಂದೆ ಅನೇಕ ಭಕ್ತರು ದಾಸರ ಹಾಡುಗಳನ್ನು ಹಾಡಿದರೆ, ಮಕ್ಕಳು ಮತ್ತು ಮಹಿಳೆಯರು ಕೋಲಾಟ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ
ಅಕ್ರಮ ಬಾಂಗ್ಲಾದೇಶಿಯರ ಪತ್ತೆಗೆ ರಾಜ್ಯಾದ್ಯಂತ ಬೇಟೆ