ಅಧ್ಯಯನಕ್ಕಾಗಿ ಏಷಿಯನ್ ಬ್ಯಾಂಕ್ ಸಿಬ್ಬಂದಿ ಭೇಟಿ । ರಸ್ತಾಪೂರದಲ್ಲಿ ನರೇಗಾದಡಿ ನಿರ್ಮಾಣ
ಕನ್ನಡಪ್ರಭ ವಾರ್ತೆ ಯಾದಗಿರಿಕೂಲಿ ಕೆಲಸ ಮಾಡುವ ಗ್ರಾಮೀಣ ಮಹಿಳಾ ಕೂಲಿಕಾರರ ಮಕ್ಕಳನ್ನು ಸುರಕ್ಷಿತವಾಗಿ ಆರೈಕೆ ಮಾಡುವಲ್ಲಿ ಕೂಸಿನ ಮನೆ ಪೂರಕವಾಗಿದೆ ಎಂದು ಇಂಡಿಯನ್ ಏಷಿಯನ್ ಬ್ಯಾಂಕ್ ಸಿಬ್ಬಂದಿ ತಂಡ ಅಭಿಪ್ರಾಯ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೂಸಿನ ಮನೆ ಕಾರ್ಯಕ್ರಮದ ಅಡಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನಯಡಿ ಕೂಲಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ಮಕ್ಕಳ ಆರೈಕೆಗೆ ಶಹಾಪುರ ತಾಲೂಕಿನ ರಸ್ತಾಪೂರ ಗ್ರಾಮ ಪಂಚಾಯಿತಿಯು ರಸ್ತಾಪೂರ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ ಕೂಸಿನ ಮನೆಯ ನಿರ್ವಹಣಾ ಕ್ರಮದ ಕುರಿತು ಅಧ್ಯಯನ ಮಾಡಲು ಏ.3ರಂದು ಇಂಡಿಯನ್ ಏಷಿಯನ್ ಬ್ಯಾಂಕ್ ಸಿಬ್ಬಂದಿ ತಂಡ ಭೇಟಿ ನೀಡಿ, ಪರಿಶೀಲಿಸಿತು.ಗ್ರಾಮೀಣ ಕೂಲಿ ಕಾರ್ಮಿಕ ಮಹಿಳೆಯರ 6 ತಿಂಗಳಿಂದ 3 ವರ್ಷದೊಳಗಿನ ಪುಟ್ಟ ಮಕ್ಕಳ ಆರೋಗ್ಯ, ಸುರಕ್ಷತೆ ಪಾಲನೆಗೆ ಸರ್ಕಾರ ಆರಂಭಿಸಿದ ಕೂಸಿನ ಮನೆ ಹೆಸರಿನ ಶಿಶುಪಾಲನ ಕೇಂದ್ರಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಿದ್ದು, ಕೂಸಿನ ಮನೆಯ ನಿರ್ವಹಣೆಗೆ ಕಣ್ಗಾವಲಿನಂತೆ ಕೆಲಸ ಮಾಡಲಿದೆ ಎಂದು ಸಿಬ್ಬಂದಿ ಹೇಳಿದರು.
ಕೂಸಿನ ಮನೆಯ ಮಕ್ಕಳ ದಾಖಲಾತಿ, ಹಾಜರಾತಿ, ಮಕ್ಕಳ ಆರೈಕೆದಾರರ ಹಾಜರಾತಿ, ವೇತನ ಪಾವತಿ, ಮಕ್ಕಳ ಆಹಾರ ವಿತರಣೆ, ಆರೋಗ್ಯ ತಪಾಸಣೆ, ರೋಗ ನಿರೋಧಕ ಲಸಿಕಾ ವಿತರಣೆ. ಪೀಠೋಪಕರಣ, ಮಕ್ಕಳ ಆಟದ ಸಾಮಗ್ರಿಗಳ ದಾಸ್ತಾನು, ಖರ್ಚು ವೆಚ್ಚಗಳು, ಸಂದರ್ಶಕರ ಸಹಿ ಸೇರಿದಂತೆ ಕೂಸಿನ ಮನೆ ಮೇಲ್ವಿಚಾರಣಾ ಸಮಿತಿಯ ಸಭಾ ನಡವಳಿ ಕಡತಗಳ ಕ್ರಮಬದ್ಧತೆಯನ್ನು ಬ್ಯಾಂಕ್ ಪರಿಶೀಲಿಸಿತು.ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿದ್ದು, ಸುಸಜ್ಜಿತ ಕಟ್ಟಡದ ಲಭ್ಯತೆಗೆ ಅನುಸಾರ ಗ್ರಾಮ ಪಂಚಾಯಿತಿಗೆ ಒಂದರಂತೆ 117 ಕೂಸಿನ ಮನೆಗಳನ್ನು ಆರಂಭಿಸಿದ್ದು, ಕೂಸಿನ ಮನೆಯಲ್ಲಿ ಕೆಲಸ ಮಾಡುವ ಶಿಶು ಆರೈಕೆದಾರರಿಗೆ ಮಕ್ಕಳ ಲಾಲನೆ-ಪಾಲನೆ ಮಾಡುವ ಕುರಿತು ತರಬೇತಿ ನೀಡಿದೆ. ಕೂಸಿನ ಮನೆಗೆ ದಾಖಲಾಗುವ ಮಗುವಿಗೆ ಒಂದು ದಿನಕ್ಕೆ 12 ರು.ಗಳಂತೆ ಖರ್ಚು ಮಾಡಿ, ಪೌಷ್ಟಿಕ ಆಹಾರದ ಚಾರ್ಟ್ ಪ್ರಕಾರ ಆಹಾರ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಜಿಲ್ಲಾ ಪಂಚಾಯಿತಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಉಪ ನಿರ್ದೇಶಕಿ ಗೀತಾ ಶಂಕರ್, ಸಹಾಯಕ ನಿರ್ದೇಶಕ ಕೆ.ಎಸ್.ಜಗದೀಶ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಸಿಬಿ ದೇವರಮನಿ, ಶಹಾಪುರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಸಹಾಯಕ ನಿರ್ದೇಶಕಿ ಶಾರದಮ್ಮ, ರಸ್ತಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ, ಉಪಾಧ್ಯಕ್ಷ ಭೀಮಣ್ಣ, ಸದಸ್ಯರಾದ ಭೀಮರಾಯ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಇದ್ದರು.