ಯಕ್ಷಗಾನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕ: ಕೆ. ರಘುಪತಿ ಭಟ್

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ಯಕ್ಷಗಾನ ಮಕ್ಕಳ ಶೈಕ್ಷಣಿಗ ಪ್ರಗತಿಗೆ ಪೂರಕವಾಗಿರುತ್ತದೆ- ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಮಾರೋಪದಲ್ಲಿ ರಘುಪತಿ ಭಟ್ಟ್‌ ಅಭಿಮತ

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನ ಕಲೆಯು ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸುವುದಕ್ಕೆ ಪೂರಕವಾಗುತ್ತದೆ, ಅವರ ಪೌರಾಣಿಕ ಜ್ಞಾನವನ್ನು ವರ್ಧಿಸುತ್ತದೆ. ಭಾಷಾಶುದ್ಧಿಗೆ ಕಾರಣವಾಗುತ್ತದೆ, ಯಕ್ಷಗಾನ ಕಲಿತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ್ದಾರೆ ಎಂದು ಯಕ್ಷಶಿಕ್ಷಣ ಟ್ರಸ್ಟ್ ಸ್ಥಾಪಕಾಧ್ಯಾಕ್ಷ ಕೆ. ರಘುಪತಿ ಭಟ್ ಹೇಳಿದರು. ಅವರು ಬ್ರಹ್ಮಾವರದಲ್ಲಿ ನಡೆದ ಕಿಶೋರ ಯಕ್ಷಗಾನ ಸಂಭ್ರಮ – 2023ರ ಸಮಾರೋಪದಲ್ಲಿ ಮಾತನಾಡಿದರು.

ಈ ಸಮಾರಂಭದಲ್ಲಿ ಸ್ಥಳೀಯ ಗಣ್ಯರಾದ ಸುಗ್ಗಿ ಸುಧಾಕರ ಶೆಟ್ಟಿ, ಎಂ. ಗಂಗಾಧರ ರಾವ್, ಎಸ್.ವಿ. ಭಟ್, ಉದಯ ಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಭಾಸ್ಕರ ರೈ, ಚಂದ್ರಶೇಖರ ಶೆಟ್ಟಿ, ಮೈರ್ಮಾಡಿ ಸುಧಾಕರ ಶೆಟ್ಟಿ, ವೀಣಾ ವಿ. ನಾಯ್ಕ್ ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಪದಾಧಿಕಾರಿಗಳಾದ ಸುಧೀರ್ ಕುಮಾರ್ ಶೆಟ್ಟಿ, ರಾಜೀವ ಕುಲಾಲ್, ಸಚಿನ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ವೇಷಭೂಷಣ ಪ್ರಸಾಧನ ತಜ್ಞರಾದ ಕೃಷ್ಣಸ್ವಾಮಿ ಜೋಶಿ ಮತ್ತು ಬಾಲಕೃಷ್ಣ ನಾಯಕ್ ಇವರನ್ನು ಗೌರವಿಸಲಾಯಿತು. ಭಾಗವಹಿಸಿದ ಶಾಲೆಗಳ ಮುಖ್ಯಸ್ಥರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ಸಂಚಿತಾ ತಮ್ಮ ಅನುಭವವನ್ನು ಹಂಚಿಕೊಂಡರು. ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಅಭಿಯಾನದ ಪ್ರಯೋಜನವನ್ನು ವಿವರಿಸಿದರು. ಬಿರ್ತಿ ರಾಜೇಶ್ ಶೆಟ್ಟಿ ಸ್ವಾಗತಿಸಿದರು. ರಾಜೀವ ಕುಲಾಲ್ ವಂದಿಸಿದರು. ಗಣೇಶ್ ಬ್ರಹ್ಮಾವರ ಕಾರ್ಯಕ್ರಮವನ್ನು ನಿರೂಪಿಸಿದರು. ನಾರಾಯಣ ಎಂ. ಹೆಗಡೆ ಮತ್ತು ಎಚ್.ಎನ್. ಶೃಂಗೇಶ್ವರ ಸಹಕರಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ಈ ವರ್ಷ ಉಡುಪಿ, ಕಾಪು, ಕುಂದಾಪುರ ವಿಧಾನಸಭಾ ವ್ಯಾಪ್ತಿಯ 69 ಶಾಲೆಗಳ 70 ಪ್ರದರ್ಶನಗಳನ್ನು ಜಿಲ್ಲೆಯ ಆರು ಕಡೆಗಳಲ್ಲಿ ಆಯೋಜಿಸಿದೆ. ಬ್ರಹ್ಮಾವರದ ಪ್ರದರ್ಶನ ಸಂಘಟನಾ ಸಮಿತಿಯ ಸಹಯೋಗದಲ್ಲಿ ಒಂದು ವಾರ 15 ಪ್ರದರ್ಶನಗಳಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article