ಸಚ್ಚಾರಿತ್ರ್ಯಮೂಡಿಸುವ ಯಕ್ಷಗಾನ ದೇವರ ಕಲೆ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork | Published : Jun 25, 2024 12:40 AM

ಸಾರಾಂಶ

ಶಾಸಕ ಆರಗ ಜ್ಞಾನೇಂದ್ರ ಇಲ್ಲಿನ ಯಕ್ಷಗಾನ ಅಧ್ಯಯನ ಕೇಂದ್ರದ ಎರಡನೇ ವರ್ಷದ ವಾಷಿಕೋತ್ಸವ ಸಮಾರಂಭಕ್ಕೆ ಎಳೆಯ ಕಲಾವಿದೆಯ ಕಾಲಿಗೆ ಗೆಜ್ಜೆ ಕಟ್ಟುವ ಮೂಲಕ ಚಾಲನೆ ನೆರವೇರಿಸಿದರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಅನಾದಿಕಾಲದಿಂದಲೂ ರಾಮಾಯಣ ಮಹಾಭಾರತ ಮುಂತಾದ ಧಾರ್ಮಿಕ ಹಿನ್ನೆಲೆಯ ಕಥಾವಸ್ತುವನ್ನು ಆಧಾರವಾಗಿಟ್ಟಕೊಂಡು ಸಮಾಜದಲ್ಲಿ ಸಚ್ಚಾರಿತ್ರ್ಯವನ್ನು ಮೂಡಿಸುತ್ತಿರುವ ಯಕ್ಷಗಾನ ದೇವರ ಕಲೆಯಾಗಿದ್ದು, ಚಿರಂಜೀವಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಭಾನುವಾರ ರಾತ್ರಿ ಜರುಗಿದ ಇಲ್ಲಿನ ಯಕ್ಷಗಾನ ಅಧ್ಯಯನ ಕೇಂದ್ರದ ಎರಡನೇ ವರ್ಷದ ವಾಷಿಕೋತ್ಸವ ಸಮಾರಂಭವನ್ನು ಎಳೆಯ ಕಲಾವಿದೆಯ ಕಾಲಿಗೆ ಗೆಜ್ಜೆ ಕಟ್ಟುವ ಮೂಲಕ ಉಧ್ಘಾಟನೆ ನೆರವೇರಿಸಿ ಮಾತನಾಡಿ, ಶಿಕ್ಷಣ ತಂತ್ರಜ್ಞಾನದ ಆಧುನಿಕತೆಯ ಈ ಕಾಲಘಟ್ಟದಲ್ಲೂ ತನ್ನ ಹಿರಿಮೆ ಮತ್ತು ಪರಂಪರೆಯನ್ನು ಮರೆಯುತ್ತಿರುವ ನಾಡಿನ ಹೆಮ್ಮೆಯ ಈ ಕಲೆ ಶಾಶ್ವತವಾಗಿದ್ದು ಚಿರಂಜೀವಿಯೂ ಆಗಿದೆ ಎಂದು ಅಭಿಪ್ರಾಯಪಟ್ಟರು.

ರಾಮಾಯಣ ಮಹಾಭಾರತದ ಆಶಯದೊಂದಿಗೆ ಸನಾತನ ಧರ್ಮದ ಮೌಲ್ಯಗಳನ್ನು ಭಿತ್ತರಿಸುತ್ತಿರುವ ಯಕ್ಷಗಾನ ಸನಾತನ ಧರ್ಮದ ಸವಾಲುಗಳಿಗೂ ಉತ್ತರವನ್ನು ನೀಡುತ್ತಿದೆ. ಕರಾವಳಿ ಮೂಲದ ಹೆಮ್ಮೆಯ ಈ ಕಲೆಗೆ ಮಲೆನಾಡು ಮತ್ತು ಈ ತಾಲೂಕಿನ ಕಲಾವಿದರ ಕೊಡುಗೆಯೂ ಅಮೂಲ್ಯವಾಗಿದೆ. ಮಕ್ಕಳಲ್ಲಿ ಈ ಕಲೆಯ ಬಗ್ಗೆ ಆಸಕ್ತಿಯನ್ನು ಮೂಡಿಸುತ್ತಿರುವ ಅಧ್ಯಯನ ಕೇಂದ್ರದ ಗುರು ಶೈಲೇಶ್ ತೀರ್ಥಹಳ್ಳಿಯವರ ಪ್ರಯತ್ನ ಪ್ರಶಂಸನೀಯವಾಗಿದೆ ಎಂದರು.

ರಂಗಾಯಣದ ಮಾಜಿ ನಿರ್ದೆಶಕ ಸಂದೇಶ್ ಜವಳಿ ಮಾತನಾಡಿ, ಎಳೆಯ ಪ್ರಾಯದಿಂದ ಯಕ್ಷಗಾನ ಕಲೆಯಲ್ಲಿ ವಿಶೇಷ ಅಧ್ಯಯನದ ಮೂಲಕ ಅರ್ಹತೆಯನ್ನು ಹೊಂದಿರುವ ಶೈಲೇಶ್ ತೀರ್ಥಹಳ್ಳಿ ತನ್ನೂರಿನ ಅಭಿಮಾನ ಮತ್ತು ಕಲೆಯ ಮೇಲಿನ ಗೌರವದಿಂದ ತೀರ್ಥಹಳ್ಳಿಯಲ್ಲಿ ಯಕ್ಷಗಾನ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಇದನ್ನು ಪ್ರೋತ್ಸಾಹಿ ಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಕೇಂದ್ರದ ಗುರು ಶೈಲೇಶ್ ತೀರ್ಥಹಳ್ಳಿ ಮಾತನಾಡಿ, ಹಿರಿಯರ ಮಾರ್ಗದರ್ಶನ ಕಲಾಸಕ್ತರ ನೆರವಿನಲ್ಲಿ ಕಲೆಯ ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ವಯೋಮಾನದ ಶಿಕ್ಷಣಾರ್ಥಿಗಳು ಕೇಂದ್ರದಲ್ಲಿ ಕಲಿಯುತ್ತಿದ್ದು ಉತ್ತಮ ಬೆಂಬಲ ದೊರೆಯುತ್ತಿದೆ ಎಂದರು. ಕೂಳೂರು ಸತ್ಯನಾರಾಯಣರಾವ್ ವೇದಿಕೆಯಲ್ಲಿದ್ದರು. ರಂಗ ನಿರ್ದೆಶಕ ಶ್ರೀಕಾಂತ್ ಕುಮುಟಾ ಹಾಗೂ ಕಲಾವಿದ ಅಂಬರೀಷ್ ಭಾರದ್ವಾಜ್ ನಿರೂಪಿಸಿದರು.

ಹಿರಿಯ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ಮತ್ತು ಕೇಂದ್ರದ ವಿಧ್ಯಾರ್ಥಿಗಳಿಂದ ದ್ವಿವಿದ -ಮೈಂದ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.

Share this article