ಯೆನೆಪೋಯ ಆಸ್ಪತ್ರೆಯಲ್ಲಿ ಐತಿಹಾಸಿಕ ಶಸ್ತ್ರಚಿಕಿತ್ಸೆ

KannadaprabhaNewsNetwork |  
Published : May 01, 2026, 02:30 AM IST
ಯೆನೆಪೋಯ | Kannada Prabha

ಸಾರಾಂಶ

ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಸವಾಲಿನ ಹಾಗೂ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಿಂದ ಅಂಗ ಉಳಿಸಿಕೊಳ್ಳುವ ಐತಿಹಾಸಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.

ಉಳ್ಳಾಲ: ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಸವಾಲಿನ ಹಾಗೂ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಿಂದ ಅಂಗ ಉಳಿಸಿಕೊಳ್ಳುವ ಐತಿಹಾಸಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.ಈ ಶಸ್ತ್ರಚಿಕಿತ್ಸೆಯು ವೈದ್ಯಕೀಯ ಇತಿಹಾಸದಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ನಡೆದಿದ್ದರೆ, ವಿಶ್ವ ಮಟ್ಟದಲ್ಲಿ ಮೂರನೆದಾಗಿ ದಾಖಲಾಗುವ ಮೂಲಕ ಯೆನೆಪೋಯ ಆಸ್ಪತ್ರೆ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ದೇರಳಕಟ್ಟೆ ಯೆನೆಪೋಯ ಅಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್ ಹೇಳಿದರು.

ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಮೂಲದ ಸುಮಾರು 39 ವರ್ಷದ ರೋಗಿಯೊಬ್ಬರು ತೊಡೆಯ ಮೂಳೆ ಮತ್ತು ಸ್ನಾಯುಗಳಲ್ಲಿ ಉಂಟಾದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ವಿವಿಧ ಹೆಸರಾಂತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರ ಬಲ ಕಾಲನ್ನು ಸಂಪೂರ್ಣವಾಗಿ ತುಂಡರಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಹಿನ್ನೆಲೆ ಯೆನೆಪೋಯ ಆಸ್ಪತ್ರೆಗೆ ಬಂದ ರೋಗಿಗೆ, ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿಯ ತಜ್ಞ ವೈದ್ಯರ ತಂಡವು ಹೊಸ ಪರಿಹಾರ ಕ್ರಮಕ್ಕೆ ಮುಂದಾಯಿತು. ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಜಲಾಲುದ್ಧೀನ್ ಅಕ್ಬರ್ ಅವರ ನೇತೃತ್ವದ ತಂಡ ಸವಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಯಿತು ಎಂದರು.13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ;ಮಾ. 10ರಂದು ಸಹಕುಲಾಧಿಪತಿ ಡಾ. ಎಂ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ. ಜಲಾಲುದ್ಧೀನ್ ಅಕ್ಬರ್ ನೇತೃತ್ವದ ತಂಡದಲ್ಲಿ ಸುಮಾರು 13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾನ್ಸರ್ ಪೀಡಿತ ತೊಡೆಯ ಮೂಳೆ ಮತ್ತು ಸ್ನಾಯುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಬಳಿಕ ಟೈಟಾನಿಯಂ ಮೆಗಾಪ್ರೊಸ್ಟೆಸಿಸ್ ಮೂಲಕ ಮೂಳೆ ಪುನರ್ ನಿರ್ಮಿಸಲಾಗಿದ್ದು, ಮೈಕ್ರೋನ್ಯೂರೋವಾಸ್ಕ್ಯುಲರ್ ತಂತ್ರಜ್ಞಾನ ಬಳಸಿ ಎದೆಗೋಡೆಯ ಸ್ನಾಯುಗಳನ್ನು ವರ್ಗಾಯಿಸಿ ಅಂಗದ ಕಾರ್ಯಕ್ಷಮತೆ ಪುನಃ ಸ್ಥಾಪಿಸಲಾಯಿತು. ಶಸ್ತ್ರಚಿಕಿತ್ಸೆ ನಂತರ ರೋಗಿ ಮತ್ತೆ ನಡೆಯಲು ಸಾಧ್ಯವಾಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ. ವೈದ್ಯರಾದ ಡಾ. ರೋಹನ್ ಶೆಟ್ಟಿ, ಡಾ.ಎಚ್.ಟಿ. ಅಮರ್ ರಾವ್, ಡಾ. ನೂರ್ ಮೊಹಮ್ಮದ್, ಡಾ. ದೇವಿಪ್ರಸಾದ್, ಡಾ.ಚಾಂದಿನಿ, ಡಾ.ಶೃತಿ, ಡಾ. ತೇಜೇಶ್ ಕೃಷ್ಣ, ಡಾ. ಲಕ್ಷ್ಮಿ ಶೆಣೈ, ಡಾ. ಅಭಿಷೇಕ್ ಶೆಟ್ಟಿ, ಡಾ. ಲೋಕೇಶ್, ಡಾ. ಪ್ರೀತಿ ಹಾಗೂ ಡಾ. ಮಹಮ್ಮದ್ ಚೌಧರಿ ಸೇರಿದಂತೆ ಹಲವರು ಈ ಶಸ್ತ್ರ ಚಿಕಿತ್ಸೆಯಲ್ಲಿ ಭಾಗವಹಿಸಿದ್ದರು.ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ, ಸಹ ಕುಲಾಧಿಪತಿಗಳಾದ ಫರ್ಹಾದ್ ಯೆನೆಪೋಯ, ಡಾ.ಎಂ. ವಿಜಯ ಕುಮಾರ್ ಹಾಗೂ ಉಪಕುಲಪತಿ ಡಾ. ಗಂಗಾಧರ ಸೋಮಯಾಜಿ ಅವರು ವೈದ್ಯರ ತಂಡದ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.ಯೆನೆಪೋಯ ವಿವಿ ಸಹಕುಲಾಧಿಪತಿ ಡಾ. ಎಂ. ವಿಜಯ ಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್, ಸಹ ಪ್ರಾಧ್ಯಾಪಕರಾದ ಡಾ. ರೋಹನ್‌ಶೆಟ್ಟಿ, ಡಾ. ಎಚ್.ಟಿ. ಅಮರ್ ರಾವ್, ಡಾ. ನೂರ್‌ ಮೊಹಮ್ಮದ್, ವೈದ್ಯಕೀಯ ಕ್ಯಾನ್ಸರ್ ತಜ್ಞರಾದ ಡಾ. ತೇಜೇಶ್‌ ಕೃಷ್ಣ, ಡಾ. ಲಕ್ಷ್ಮಿ ಶೆಣೈ, ಇಂಟರ್ ವೆನ್ನನಲ್ ರೇಡಿಯೋಲಾಜಿಸ್ಟ್ ಡಾ.ಟಿ.ವಿ. ಸತೀಶ್ ಬಾಬು, ಆರ್ಥೋಪೆಡಿಕ್ಸ್ ವಿಭಾಗದಸಹಪ್ರಾಧ್ಯಾಪಕ ಡಾ. ಅಭಿಷೇಕ್ ಶೆಟ್ಟಿ, ಡಾ. ಲೋಕೇಶ್, ಪ್ಲಾಸ್ಟಿಕ್ ಸರ್ಜರಿ ವಿಭಾಗದಡಾ. ದೇವಿಪ್ರಸಾದ್, ಡಾ. ಚಾಂದಿನಿ,ಡಾ. ಶೃತಿ, ಕ್ಯಾನ್ಸರ್ ಅರಿವಳಿಕೆ ತಜ್ಞೆ ಡಾ. ಪ್ರೀತಿ ಹಾಗೂ ಆಕ್ಯುಪೇಶನಲ್ ಥೆರಪಿಸ್ಟ್ ಡಾ. ಮಹಮ್ಮದ್ ಚೌಧರಿ ಸುದ್ದಿಗೋಷ್ಠಿಯಲ್ಲಿದ್ದರು‌.

ರೋಗಿಯ ಕಾಲನ್ನು ತೆಗೆಯದೆ ಅದರಲ್ಲಿನ ಕ್ಯಾನ್ಸರ್‌ನ್ನು ತೆಗೆದಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಈ ಸಾಧನೆಗೆ ಕೈಜೋಡಿಸಿದ ನಮ್ಮ ತಂಡದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು. ಈ ಶಸ್ತ್ರಚಿಕಿತ್ಸೆ ಬಹಳ ಸಂಕೀರ್ಣ ಮತ್ತು ಸವಾಲಿನದ್ದಾಗಿದೆ. ಇದು ನಮ್ಮ ದೇಶದಲ್ಲೇ ಮೊದಲ ಸಾಧನೆ ಎಂದು ಹೇಳಬಹುದು.-ಡಾ.ಎಂ. ವಿಜಯ ಕುಮಾರ್, ಸಹಕುಲಾಧಿಪತಿ ,ಯೆನೆಪೋಯ ಪರಿಗಣಿತ ವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ: ಶಾಸಕ ವೈದ್ಯ
ರಣಬಿಸಿಲಿಗೆ ಗಣತಿದಾರರು ತೀವ್ರ ಹೈರಾಣು