ವಿಶ್ವ ಯೋಗ ದಿನ ಅಂಗವಾಗಿ ಯೋಗ ಪ್ರದರ್ಶನ

KannadaprabhaNewsNetwork | Published : Jun 17, 2024 1:36 AM

ಸಾರಾಂಶ

ಅರ್ಕ ಫೌಂಡೇಷನ್‌ ಇಂಡಿಯಾವು ಉಚಿತ ಆಯುರ್ವೇದ ಚಿಕಿತ್ಸಾ ತಪಾಸಣಾ ಶಿಬಿರ ಹಾಗೂ ವಿಶ್ವ ಯೋಗ ದಿನದ ಅಂಗವಾಗಿ ಯೋಗ ಪ್ರದರ್ಶನ ಮತ್ತು ಅರಿವು ಕಾರ್ಯಕ್ರಮ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಅರ್ಕ ಫೌಂಡೇಷನ್‌ ಇಂಡಿಯಾವು ಉಚಿತ ಆಯುರ್ವೇದ ಚಿಕಿತ್ಸಾ ತಪಾಸಣಾ ಶಿಬಿರ ಹಾಗೂ ವಿಶ್ವ ಯೋಗ ದಿನದ ಅಂಗವಾಗಿ ಯೋಗ ಪ್ರದರ್ಶನ ಮತ್ತು ಅರಿವು ಕಾರ್ಯಕ್ರಮ ಆಯೋಜಿಸಿತ್ತು.

ಯೋಗಿ ಶ್ರೀನಿವಾಸ ಅರ್ಕ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾದಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಮತ್ತು ಸುತ್ತಮುತ್ತಲಿನ ಗ್ರಾಮವಾಸಿಗಳಿಗೆ ಶನಿವಾರ ದೇವಸ್ಥಾನ ಆವರಣದಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ತಪಾಸಣ ಶಿಬಿರ ಹಾಗೂ ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ಪ್ರದರ್ಶನ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್‌. ರಾಧಾಕೃಷ್ಣ ರಾಮ್‌ರಾವ್‌ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಜನರ ಜೀವನ ಶೈಲಿ, ಒತ್ತಡಕ್ಕೆ ಒಳಗಾಗಿ ಹಲವು ರೋಗಗಳು ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಒತ್ತಡದ ಜೀವನವನ್ನು ಸರಳಗೊಳಿಸಿಕೊಳ್ಳಲು ಪ್ರತಿದಿನ ಯೋಗ ಅತ್ಯಗತ್ಯ ಎಂದರು.

ದೊಡ್ಡಮಾರಗೌಡನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಮಾದಪ್ಪ ಶಿಬಿರದ ಅಧ್ಯಕ್ಷತೆ ವಹಿಸಿ, ಪ್ರತಿ ಗ್ರಾಮದಲ್ಲಿ ಆಯುರ್ವೇದ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳುವುದರಿಂದ ಜನರಲ್ಲಿ ವೈದ್ಯ ಪದ್ಧತಿ, ಯೋಗದಿಂದ ರೋಗಮುಕ್ತಿ, ಗಿಡಗಳನ್ನು ನೆಟ್ಟು ಬೆಳೆಸಿ ಉತ್ತಮ ವಾತಾವರಣವನ್ನು ಗ್ರಾಮೀಣ ಜನರೇ ಪರಿಸರವನ್ನು ಸ್ವಚ್ಛಗೊಳಿಸುವ ರೂವಾರಿಗಳು ಎಂದು ಹೇಳಿದರು.

ಶಿಬಿರದಲ್ಲಿ ಸುಮಾರು 153 ಫಲಾನುಭವಿಗಳು ಸೇವೆ ಪಡೆದುಕೊಂಡರು. ಸರ್ಕಾರಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆಯ ವೈದ್ಯರ ತಂಡ ತಪಾಸಣೆ ನಡೆಸಿತು.

ಗ್ರಾಪಂ ಉಪಾಧ್ಯಕ್ಷ ನಂದರಾಜ್, ವಿಬಿಎಂ ಅಧ್ಯಕ್ಷ ಮಾಧುಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌.ಡಿ.ಎಂ.ಸಿ ಅಧ್ಯಕ್ಷ ಎಂ.ಎಸ್‌. ಮಹೇಶ್, ಮುಖ್ಯಾಪಾಧ್ಯಾಯಿನಿ ಕೆಂಪಮಣಿ, ಶಿಕ್ಷಕರು, ಗ್ರಾಮದ ಗೌಡರಾದ ಮಾದಪ್ಪ, ಶಿವನಂಜಪ್ಪ, ಅರ್ಕಧಾಮದ ಸಂತೋಷ್‌, ಪ್ರಾಂಶುಪಾಲ ಕೇತನ್ ಮೊದಲಾದವರು ಇದ್ದರು.

Share this article