ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಾನಸಿಕ ಒತ್ತಡ ನಿವಾರಣೆಗೆ ಯೋಗ ಸಹಕಾರಿ. ದಿನದ ಕೆಲವು ಸಮಯನ್ನು ಯೋಗಕ್ಕೆ ಮೀಸಲಿಟ್ಟರೆ ಆರೋಗ್ಯ ಪೂರ್ಣ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಮಂಗಳಾ ಎಚ್.ಡಿ. ತಮ್ಮಯ್ಯ ಹೇಳಿದರು.ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ ಆಯುಷ್ ಇಲಾಖೆ ಹಾಗೂ ವಿಶ್ವ ಯೋಗ ದಿನಾಚರಣಾ ಸಮಿತಿ ಸಹಯೋಗದಲ್ಲಿ ಚಿಕ್ಕಮಗಳೂರಿನ ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಯೋಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗಾಸನವನ್ನು ಬದುಕಿನ ಒಂದು ಭಾಗವಾಗಿ ಅಳವಡಿಸಿಕೊಂಡ ವ್ಯಕ್ತಿಗಳು ಆರೋಗ್ಯಯುತ ಶರೀರ ಹೊಂದುವ ಜೊತೆಗೆ ಆಯುಷ್ಯ ವೃದ್ಧಿಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ಹೀಗಾಗಿ ಪ್ರತಿಯೊಬ್ಬರು ಯೋಗಾಭ್ಯಾಸದ ಪ್ರಮುಖ ಆಸನಗಳನ್ನು ಅಭ್ಯಾಸಿಸುವ ಮೂಲಕ ನಿರೋಗಿಯಾಗಿ ಬದುಕಲು ಮುಂದಾಗ ಬೇಕು ಎಂದರು.ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಎಸ್.ಗೀತಾ ಮಾತನಾಡಿ, ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ 10ನೇ ಪೂರ್ವಭಾವಿ ಯೋಗೋತ್ಸವ ಆಯೋಜಿಸಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.ಅಂಗನವಾಡಿ ಕಾರ್ಯಕರ್ತರಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ನಿಗಧಿಪಡಿಸಿದ ಒಂದು ದಿನ ಏಕಕಾಲ ದಲ್ಲಿ ಯೋಗಾಭ್ಯಾಸದ ಜೀವನಶೈಲಿ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಿದೆ. ಇಲಾಖೆ ಯಿಂದ ಯೋಗ ಶಿಕ್ಷಕರ, ಆಯುಷ್ ತಜ್ಞರ ನಿಯೋಜನೆ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ಸೇರಿದಂತೆ ಅನೇಕ ಸೌಲಭ್ಯ ಒದಗಿಸಲಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ, ದೇಹದಲ್ಲಿನ ರಕ್ತ ಸಂಚಲನ, ಬೆನ್ನು ನೋವು, ಬೊಜ್ಜು ಕರಗುವಿಕೆ, ದೇಹದ ಆಯಾಸ ತಗ್ಗುವಿಕೆ ಸೇರಿದಂತೆ ನಾನಾ ರೀತಿ ಯೋಗಾಸನಗಳು ಹಾಗೂ ಪ್ರಾಣಾಯಾಮ ತರಬೇತಿ ನೀಡುತ್ತಿದ್ದು, ಆರೋಗ್ಯಕ್ಕೆ ಹೆಚ್ಚಿನ ಉಪಯೋಗವಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಯೋಗಪಟುಗಳಾದ ನಾರಾಯಣ ಪೂಜಾರ್, ಗಿರೀಶ್, ಡಾ.ಭಾಸ್ಕರ್, ಪವಿತ್ರ, ವಿಜಯ ಉಪಸ್ಥಿತರಿದ್ದರು.
8 ಕೆಸಿಕೆಎಂ 3ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನ ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಯೋಗೋತ್ಸವವನ್ನು ಮಂಗಳಾ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.