ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯುಷ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯೋಗವು ಭಾರತೀಯ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದ್ದು, ಇದನ್ನು ಪ್ರಪಂಚಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ದಿನನಿತ್ಯ ಯೋಗವನ್ನು ಜೀವನಶೈಲಿಯ ಭಾಗವಾಗಿ ಮಾಡಿಕೊಂಡಾದ ಮಾತ್ರ ಉತ್ತಮ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಚಿಕ್ಕಂದಿನಿಂದಲೇ ಯೋಗಭ್ಯಾಸವನ್ನು ರೂಪಿಸಿಕೊಳ್ಳಬೇಕು. ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ದಿನನಿತ್ಯದ ಕಾರ್ಯ ಚಟುವಟಿಕೆಯಲ್ಲಿ ಲವಲವಿಕೆಯಿಂದ ಇರಲು ಸಾಧ್ಯ. ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡುವುದರಿಂದ ಮುಪ್ಪಿನ ವಯಸ್ಸಿಯನ್ನಿಯೂ ಆರೋಗ್ಯದಿಂದ ಬದುಕಬಹುದಾಗಿದೆ ಎಂದು ತಿಳಿಸಿದರು.ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ದೇಹ, ಮನಸ್ಸು ಹಾಗೂ ಆಧ್ಯಾತ್ಮಿಕ ಬದುಕನ್ನು ಒಗ್ಗೂಡಿಸಿಕೊಂಡು ಬದುಕು ಸಾಗಿಸುವಂತಹ ಕಲೆ ನಮ್ಮ ದೇಶದಲ್ಲಿ ಹುಟ್ಟಿಕೊಂಡಿದೆ. ಇದನ್ನು ಋಷಿ ಮುನಿಗಳು ಅಭ್ಯಾಸ ಮಾಡಿ ಸಾರ್ಥಕಗೊಳಿಸಿ ರೂಪಿಸಿದ ಬದುಕಿನ ಪದ್ದತಿಯನ್ನು ನಾವೆಲ್ಲರೂ ಅನುಸರಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ವೈಚಾರಿಕ ದೃಷ್ಠಿಕೋನ ಇಟ್ಟುಕೊಂಡು ಯೋಗ ದಿನಾಚರಣೆ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ ಎಂದರು. ಆರೋಗ್ಯ ಪೂರ್ಣ ಮನಸ್ಸು ಇರಬೇಕಾದರೆ ಆರೋಗ್ಯಯುತವಾದ ದೇಹ ಇರಲೇಬೇಕಾಗುತ್ತದೆ ಎಂದರು.
ಜಿಲ್ಲಾಧಿಕಾರ ಸಂಗಪ್ಪ ಮಾತನಾಡಿ, ಯೋಗವು ವಿಶ್ವದಾದ್ಯಂತ ಆರೋಗ್ಯಕರ ಜೀವನಶೈಲಿಯ ಮಾರ್ಗವಾಗಿ ಗುರುತಿಸಿಕೊಂಡಿದ್ದು, ನಿಯಮಿತ ಯೋಗಾಭ್ಯಾಸದಿಂದ ಅನೇಕ ರೋಗಗಳನ್ನು ತಡೆಗಟ್ಟಲು ಸಾಧುವಾಗುತ್ತದೆ ಎಂದರು. ಪ್ರಾರಂಭದಲ್ಲಿ ಜಿಲ್ಲಾ ಆಯುಷ ಅಧಿಕಾರಿ ಡಾ.ಎಸ್.ಜಿ.ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಾಮೂಹಿಕ ಯೋಗಾಭ್ಯಾಸ ಮಾಡಿಸಲಾಯಿತು. ಶಿರೂರಿನ ವಿಜಯ ಮಹಾಂತ ತೀರ್ಥದ ಡಾ.ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸಿ, ಯೋಗದ ಮಹತ್ವವನ್ನು ತಿಳಿಸಿದರು.