ಹಾವೇರಿ: ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪ್ರತಿಯೊಬ್ಬರಿಗೂ ಅವಶ್ಯಕ. ನಿಯಮಿತ ಯೋಗ ಅಭ್ಯಾಸದಿಂದ ರೋಗಮುಕ್ತರಾಗಬಹುದು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಜರುಗಿದ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಈ ವರ್ಷದ ಘೋಷವಾಕ್ಯವಾಗಿದ್ದು, ಪ್ರತಿನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ರೋಗಮುಕ್ತರಾಗಬಹುದು. ಮಾನಸಿಕ, ದೈಹಿಕ ಸದೃಢತೆ ಸಾಧಿಸಬಹುದು. ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ಯೋಗಾಭ್ಯಾಸದಿಂದ ನೂರಾರು ವರ್ಷ ಬದುಕಿದ ಉದಾಹರಣೆಗಳಿವೆ. ಹಾಗಾಗಿ ಮಕ್ಕಳು ಬಾಲ್ಯದಲ್ಲೇ ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಸ್., ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ವರ ಬಡಿಗೇರ, ಲೀಲಾಜಿ, ಆಯುಷ್ ಇಲಾಖೆ ಅಧಿಕಾರಿಗಳು, ವೈದ್ಯರು ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ.ಸಿ.ನಿಡಗುಂದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಯೋಗ ಭಂಗಿ ಪ್ರದರ್ಶನ:ಓಂಕಾರದಿಂದ ಆರಂಭವಾದ ಯೋಗದಲ್ಲಿ ಕುತ್ತಿಗೆ, ಭುಜ, ಮೊಣಕಾಲು, ಚಲನೆಯ ಯೋಗಾಭ್ಯಾಸ, ಸೇತು ಬಂದಾಸನ, ಭುಜಂಗಾಸನ, ಕಪಾಲಭಾತಿ ಹಾಗೂ ಪ್ರಾಣಾಯಾಮ ಸೇರಿದಂತೆ ವಿವಿಧ ಆಸನಗಳ ಪ್ರದರ್ಶನದ ಬಗ್ಗೆ ಜ್ಯೋತಿ ಜಂಬಗಿ ಅವರು ಮಾರ್ಗದರ್ಶನ ನೀಡಿದರು. ಮಮತಾ ಸೊಲಬಗೌಡ್ರ ಹಾಗೂ ನವೀನ ಅವರು ಯೋಗ ಪ್ರದರ್ಶನ ನೀಡಿದರು. ಅಧಿಕಾರಿಗಳು, ಸಾರ್ವಜನಿಕರು ಯೋಗದ ವಿವಿಧ ಭಂಗಿಗಳನ್ನು ಅಭ್ಯಾಸ ಮಾಡಿದರು.