ಕನ್ನಡಪ್ರಭ ವಾರ್ತೆ ಶಹಾಪುರ
ನಗುವಿನಿಂದ ಜೀವನ ಸುಖಮಯ. ನಾವೆಲ್ಲರೂ ನಗು ನಗುತ್ತಾ ಇದ್ದರೆ ಬರುವ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು. ಬದುಕು ನಂದನವನವಾಗುತ್ತದೆ. ಯೋಗ ಮತ್ತು ನಗು ಇದ್ದರೆ ಆಯುಷ್ಯ ಜಾಸ್ತಿಯಾಗುತ್ತದೆ ಎಂದು ಪ್ರಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ತಿಳಿಸಿದರು. ನಗರದ ಪೊಲೀಸ್ ಮೈದಾನದಲ್ಲಿ ಪತಂಜಲಿ ಯೋಗ ವಿಜ್ಞಾನ ತರಬೇತಿ ಕೇಂದ್ರ, ಶಹಾಪುರ, ವೈದ್ಯ ಸಮಗ್ರ ಆರೋಗ್ಯ ಕೇಂದ್ರ ಶಹಾಪುರ ಹಾಗೂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ನಾದಮಯ ಸಂಗೀತ ಸೇವಾ ಟ್ರಸ್ಟ್ ಶಹಾಪುರ ವತಿಯಿಂದ ನಡೆದ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯೋಗದ ಕಲಿಕೆ ವೈಚಾರಿಕತೆ, ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಯೋಗವು ಜೀವನದ ಅವಿಭಾಜ್ಯ ಎಂದರು. ಜೀವನದಲ್ಲಿ ನಗು ಬಹಳ ಮುಖ್ಯ. ಆದರೆ, ನಾವು ನಮ್ಮನ್ನು ಕೆಲವೊಂದು ಕಟ್ಟುಪಾಡುಗಳೊಳಗೆ ಕಟ್ಟಿ ಹಾಕಿಕೊಂಡಿದ್ದೇವೆ. ಅದರಲ್ಲೂ, ನಗುವುದನ್ನು ನಾವು ನಮ್ಮ ಜೀವನದಲ್ಲಿ ನಗಣ್ಯಗೊಳಿಸಿದ್ದೇವೆ. ಕಡಿಮೆ ನಗುವುದರಿಂದ ನಾವು ಪ್ರಭುದ್ಧರಾಗಿ ಕಾಣುತ್ತೇವೆ ಎಂಬ ನಂಬಿಕೆ ಬಹಳ ಜನರಲ್ಲಿದೆ. ಅಲ್ಲದೆ ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾ ಅತಿಯಾದ ಬಳಕೆ. ಇದರಿಂದ ನಾವು ಒಂದು ಭ್ರಮಾಲೋಕದಲ್ಲಿ ಇದ್ದು, ಸುತ್ತಮುತ್ತ ಇರುವವರೊಂದಿಗೆ ನಾವು ಬೆರೆಯುವುದಿಲ್ಲ. ಇದರಿಂದ ನಾವು ನಗುವಿನಿಂದ ದೂರ ಇದ್ದೇವೆ. ಅದರಿಂದ ಹೊರಬರಬೇಕಾದರೆ ರಾತ್ರಿ ಮಲಗುವ ಮೊದಲು, ಇಡೀ ದಿನದಲ್ಲಿ ನಡೆದ ಖುಷಿ ಹಾಗೂ ಧನಾತ್ಮಕ ವಿಚಾರಗಳನ್ನು ಬರೆದಿಟ್ಟು, ಅದನ್ನು ಓದುವುದರಿಂದ ನಮ್ಮಲ್ಲಿ ಅಭಿಲಾಷೆಗಳು ಹಾಗೂ ಜೀವನದಲ್ಲಿ, ನಮ್ಮ ಕೆಲಸಗಳಲ್ಲಿ ನಮ್ಮ ಆಸಕ್ತಿ ಹೆಚ್ಚುವುದು ಎಲ್ಲರೂ ಕುಟುಂಬದವರ ಜೊತೆ ನಗುನಗುತಾ ಬಾಳುವುದನ್ನು ಕಲಿಯಬೇಕು ಎಂದರು.ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಒತ್ತಡಗಳ ಜೀವನ ಸಾಗಿಸುತ್ತಿರುವ ನಾವುಗಳು ದಿನನಿತ್ಯದಲ್ಲಿ ಯೋಗಭ್ಯಾಸ ರೂಢಿಸಿಕೊಂಡರೆ ಪ್ರತಿಯೊಬ್ಬ ವ್ಯಕ್ತಿ ಹಾಗೂ ಅವರ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸಲು ಸಾಧ್ಯವಾಗುತ್ತದೆ ಎಂದರು.ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಮಾತನಾಡಿ, ಮನುಷ್ಯನ ಚಂಚಲತೆಗೆ ಮತ್ತು ಮಂಗನಂತ ಮನಸ್ಸಿಗೆ ಕಡಿವಾಣ ಹಾಕಲು ಆಧ್ಯಾತ್ಮಿಕ ಚಿಂತನೆ, ಸಂಸ್ಕಾರ, ಪ್ರವಚನಗಳು ಸಹಕಾರಿಯಾಗುತ್ತವೆ. ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರ ವಿಶ್ವದಲ್ಲೇ ವಿಶಿಷ್ಟವಾದದು ಎಂದರು.ಯೋಗ ಗುರು ನರಸಿಂಹ ವೈದ್ಯ ಮಾತನಾಡಿ, ಯೋಗ ಎನ್ನುವುದು ಹಲವು ಶತಮಾನಗಳಿಂದ ನಡೆದುಕೊಂಡು ಬಂದಿರುವ ಅಭ್ಯಾಸ. ಇದು ನಮ್ಮ ದೇಹ ಮತ್ತು ಮನಸ್ಸಿನೊಂದಿಗೆ ಕೆಲಸ ಮಾಡುವ ಮೂಲಕ ನಾವು ಆಂತರಿಕ ಶಾಂತಿ ಮತ್ತು ಸಮತೋಲನವನ್ನು ಸಾಧಿಸಬಹುದು ಎಂಬ ಕಲ್ಪನೆಯನ್ನು ಆಧರಿಸಿದೆ ಎಂದರು.ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಪೀಠಾಧಿಪತಿ ಬಸವಯ್ಯ ಶರಣರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಮರೇಶ್ಗೌಡ ದರ್ಶನಾಪುರ, ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ಗುರುನಾಥರೆಡ್ಡಿ ಹಳಿಸಗರ್, ಸಂಗಮೇಶ್, ಹಿರಿಯ ವಕೀಲ ಆರ್.ಎಂ. ಹೊನ್ನಾರೆಡ್ಡಿ, ದೇಸಾಯಿ ಸೇರಿದಂತೆ ಹಲವು ಮುಖಂಡರು ಇದ್ದರು.