ಒತ್ತಡ ಮುಕ್ತ ಬದುಕಿಗೆ ಯೋಗ ದಿವ್ಯೌಷಧ: ಡಾ. ಯು.ವಿ. ಪುರದ

KannadaprabhaNewsNetwork |  
Published : Jun 26, 2024, 12:35 AM IST
ಗದಗ ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಉಮೇಶ ಪುರದ ಮಾತನಾಡಿದರು. | Kannada Prabha

ಸಾರಾಂಶ

ಒತ್ತಡಮುಕ್ತ ಬದುಕಿಗೆ ಯೋಗ ದಿವ್ಯ ಔಷಧವಾಗಿದೆ ಎಂದು ಆಯುರ್ವೇದ ತಜ್ಞ ಡಾ. ಉಮೇಶ ಪುರದ ಹೇಳಿದರು.

ಕನ್ನಡಪ್ರಭ ವಾರ್ತೆ ಗದಗ

ದೇಹವನ್ನು ರೋಗಮುಕ್ತಗೊಳಿಸಿ ಮನಸ್ಸನ್ನು ಶಾಂತಗೊಳಿಸಿ ಜೀವನದ ಔನ್ನತ್ಯವನ್ನು ಸಾಧಿಸಲು ಭಾರತೀಯರು ಕಂಡು ಹಿಡಿದ ಅದ್ಭುತ ಕಲೆ ಯೋಗವಾಗಿದೆ. ಪತಂಜಲಿ ಮಹರ್ಷಿಗಳು ಸಂಶೋಧನೆಯ ಮೂಲಕ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಹಲವಾರು ಸೂತ್ರಗಳನ್ನು ತಿಳಿಸಿದ್ದಾರೆ. ಅವುಗಳನ್ನು ಅರಿತು ಆಚರಿಸುವ ಮೂಲಕ ಸ್ವಸ್ಥ ಸಮಾಜ ರೂಪಿಸಬಹುದಾಗಿದೆ. ಒತ್ತಡಮುಕ್ತ ಬದುಕಿಗೆ ಯೋಗ ದಿವ್ಯ ಔಷಧವಾಗಿದೆ ಎಂದು ಆಯುರ್ವೇದ ತಜ್ಞ ಡಾ. ಉಮೇಶ ಪುರದ ಹೇಳಿದರು.

ನಗರದ ಬಸವಯೋಗ ಮಂದಿರ, ಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಎಸ್.ಕೆ. ಪಲ್ಲೇದ ಸ್ಮರಣೆಯಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಹಾರವೇ ಔಷಧಿಯಾಗಿದ್ದು, ವಾತ, ಪಿತ್ತ, ಕಫ ದೋಷದಿಂದ ಉಂಟಾಗುವ ರೋಗ-ರುಜಿನಗಳನ್ನು ಪ್ರಕೃತಿಯಲ್ಲಿ ಸಿಗುವ ಸಸ್ಯಗಳಿಂದಲೇ ನಿವಾರಿಸಬಹುದಾಗಿದೆ. ಆದಾಯದ ಬಹುಪಾಲು ಆಸ್ಪತ್ರೆಗೆ ವ್ಯಯ ಮಾಡದೇ ನಿತ್ಯಕರ್ಮವಾಗಿ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ರೂಢಿಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಮ್ಮ ಹಿರಿಯರು ಪ್ರಕೃತಿಯನ್ನು ಅವಲೋಕಿಸಿ, ಸಂಶೋಧಿಸಿ, ದೀರ್ಘಾಯುಷ್ಯ ಹೊಂದಲು ಸಹಾಯಕವಾಗುವ ಕಲೆಯನ್ನು ಯೋಗ ಮತ್ತು ಆಯುರ್ವೇದದ ಮೂಲಕ ನೀಡಿದ್ದಾರೆ. ಸ್ವಸ್ಥವಾದ ದೇಹದಲ್ಲಿ ಸ್ವಸ್ಥ ಮನಸ್ಸು ನೆಲೆಗೊಳ್ಳಲು ಸಾಧ್ಯ. ಮನಸ್ಸು ಮನುಷ್ಯನ ಹತೋಟಿಯಲ್ಲಿದ್ದಾಗ ಸಾಧನೆ ಸುಲಭವಾಗುತ್ತದೆ. ಈ ದಿಸೆಯಲ್ಲಿ ಮಕ್ಕಳಿಗೆ ಯೋಗ ಶಿಕ್ಷಣವನ್ನು ನಿಯಮಿತವಾಗಿ ರೂಢಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಿರಿಯ ವಯಸ್ಸಿಲ್ಲಿಯೇ ಯೋಗ ಮತ್ತು ಆಯುರ್ವೇದ ಕುರಿತು ಸಾಧನೆ ಮಾಡಿ ಭೌತಿಕವಾಗಿ ಅಗಲಿರುವ ಡಾ. ಶರಣಬಸಪ್ಪ ಪಲ್ಲೇದ ಅವರ ಜೀವನ ಸಾಧನೆ ಕುರಿತು ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿದರು.

ಬಸವ ಯೋಗ ಮಹಾವಿದ್ಯಾಲಯ ಹಾಗೂ ಯೋಗ ಸಂಘಟನೆಗಳಿಂದ ವಾರವಿಡಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಯೋಗ ಶಿಬಿರದ ಯಶಸ್ಸಿಗೆ ಶ್ರಮಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು.

ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಕೆ.ಎಚ್. ಬೇಲೂರ, ಡಾ. ಕಲ್ಲೇಶ ಮೂರಶಿಳ್ಳಿನ, ಡಾ. ರಾಜಶೇಖರ ದಾನರಡ್ಡಿ, ವೀರಪ್ಪ ಸವಡಿ, ಡಾ. ಅಶೋಕ ಮತ್ತಿಗಟ್ಟಿ, ಬಸವರಾಜ ವಾರಿ, ಎಂ.ಬಿ. ಕಿತ್ತೂರ, ಬಸವರಾಜ ಹಳ್ಳಿ, ದ್ಯಾಮಣ್ಣ ನರೇಗಲ್, ರವಿ ಉಮಚಗಿ, ಸಂದೀಪ ನಡಗೇರಿ, ವಿಜಯಲಕ್ಷ್ಮಿಮೇಕಳಿ, ಸುಪ್ರಿಯಾ ಇಟಗಿ, ರತ್ನಾ ಪುರಂತರ, ಸುಮನಾ ಪಾಟೀಲ, ಗಿರಿಜಾ ನಾಲತ್ವಾಡಮಠ, ಸುಧಾ ಬಳ್ಳಿ, ಮಂಜುಳಾ ಇಟಗಿ, ಮಹಾದೇವಿ ಚರಂತಿಮಠ, ಅನ್ನಪೂರ್ಣಾ ಅಸೂಟಿ ಇದ್ದರು. ಶಾರದಾ ಕಾತರಕಿ ಕಾರ್ಯಕ್ರಮ ನಿರೂಪಿಸಿದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ದತ್ತ ಪ್ರಸನ್ನ ಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ