ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಆದಿಯೋಗಿಯ ಸಮ್ಮುಖದಲ್ಲಿ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೃಹತ್ ಯೋಗ ಕಾರ್ಯಕ್ರಮ ನಡೆಯಿತು.
ಏರ್ ಕಮಾಂಡರ್ ಎಸ್.ಬಿ.ಅರುಣ್ ಕುಮಾರ್, ವಿಎಸ್ಎಂ, ಡೆಪ್ಯುಟಿ ಡೈರೆಕ್ಟರ್ ಜನರಲ್, ಕರ್ನಾಟಕ ಮತ್ತು ಗೋವಾ ಎನ್ ಸಿಸಿ ಡೈರೆಕ್ಟರೇಟ್ ಮತ್ತು ಪ್ರಸಿದ್ಧ ನಟಿ ಹಾಗೂ ಮಾಡೆಲ್ ಶ್ರೀನಿಧಿ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.ಚಿಕ್ಕಬಳ್ಳಾಪುರದ 20 ಕಾಲೇಜುಗಳ 5 ಕರ್ನಾಟಕ ಬೆಟಾಲಿಯನ್ನ ಸುಮಾರು 1,000 ಎನ್ಸಿಸಿ ಕೆಡೆಟ್ಗಳು, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಕೋರ್ (ಎಂಇಜಿ)ನ 200 ಸೈನಿಕರು, ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ ಉಪ ತರಬೇತಿ ಕೇಂದ್ರ (ಎಸ್ಟಿಸಿ)ದ 120 ಜವಾನರು ಮತ್ತು 2 ಅಧಿಕಾರಿಗಳು ಆದಿಯೋಗಿಯ ಸಮ್ಮುಖದಲ್ಲಿ ಈಶ ಹಠಯೋಗ ಶಿಕ್ಷಕರು ನಡೆಸಿದ ಯೋಗ ಸೇಷನ್ ಗಳಲ್ಲಿ ಪಾಲ್ಗೊಂಡಿದ್ದರು.
ಏರ್ ಕಮಾಂಡರ್ ಎಸ್.ಬಿ.ಅರುಣ್ ಕುಮಾರ್ ಮಾತನಾಡಿ, ದೇಶದ ಯುವಪೀಳಿಗೆ ಯೋಗವನ್ನು ತಮ್ಮ ಜೀವನಶೈಲಿಯನ್ನಾಗಿ ಅಳವಡಿಸಿಕೊಳ್ಳಬೇಕು. ಯೋಗ ಕೇವಲ ಶಾರೀರಿಕ ವ್ಯಾಯಾಮವಲ್ಲ, ಬದಲಿಗೆ ದೇಹ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸುವ ಒಂದು ಪರಿಪೂರ್ಣ ಅಭ್ಯಾಸ ಎಂದು ಅವರು ಹೇಳಿದರು.ಕೆಜಿಎಫ್ ಸಿನೆಮಾದ ಜನಪ್ರಿಯ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿ, ಏನು ಸರಿ, ಏನು ತಪ್ಪು, ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆಲ್ಲರಿಗೂ ತಿಳಿದಿದೆ, ನಾವು ಕೇವಲ ಕಾರ್ಯ ಕೈಗೊಳ್ಳಬೇಕು. ಪರಿಸರ ಮಾಲಿನ್ಯದಿಂದಾಗಿ, ಜನರು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮ ಹೆಚ್ಚಿಸಲು ಆಂತರಿಕವಾಗಿ ತಿರುಗುವುದು ಅನಿವಾರ್ಯ. ನಾವು ಉಸಿರಾಡುವ ಗಾಳಿ, ನಡೆಯುವ ಮಣ್ಣು, ಕುಡಿಯುವ ನೀರು, ಎಲ್ಲವೂ ಕ್ಷೀಣಿಸಿದೆ. ಆಂತರಿಕವಾಗಿ ಆನಂದದಿಂದಿರಲು ಯೋಗದ ನಿಯಮಿತ ಅಭ್ಯಾಸವನ್ನು ಕೈಗೊಳ್ಳುವಂತೆ ಜನರಲ್ಲಿ ಮನವಿ ಮಾಡಿದರು.
ಏರ್ ಕಮಾಂಡರ್ ಎಸ್.ಬಿ. ಅರುಣ್ ಕುಮಾರ್ ಸದ್ಗುರು ಸನ್ನಿಧಿಯಲ್ಲಿರುವ ಸಮುದಾಯದ ಯೋಗ ಹಾಲ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿದರು.